;Resize=(412,232))
ತುಮಕೂರು : ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ನನಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ಬೇಡ. ನಾನು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಅಧಿಕಾರದ ದಾಹ ಇಲ್ಲ. ಸಚಿವ ಸ್ಥಾನಕ್ಕೆ ಬೇಡಿಕೆ ವಿಚಾರದ ಬಗ್ಗೆ ಯಾರು ನನ್ನ ಪರವಾಗಿ ಹೋರಾಟ ಮಾಡುತ್ತಾರೋ ಅವರಿಗೆ ನಾನು ಚಿರಖುಣಿ. 2028ರ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ. ನಾನು ಈ ಮೊದಲೇ ಹೇಳಿದಂತೆ ಡಿಕೆಶಿ ಸಿಎಂ ಆದರೆ ಅವರ ಸಂಪುಟದಲ್ಲಿ ಸಚಿವ ಆಗುವುದಿಲ್ಲ. ಅವರ ಸಂಪುಟದಲ್ಲಿ ನನಗೆ ಸ್ಥಾನ ಬೇಡವೇ ಬೇಡ. ನನಗೆ ಸಾಕು ಇನ್ನೊಬ್ಬರಿಗೆ ಅವಕಾಶ ಕೊಡಲಿ ಎಂದು ವೈರಾಗ್ಯ ವ್ಯಕ್ತಪಡಿಸಿದರು.
ಡಿಕೆಶಿ ಸಿಎಂ ಆಗುತ್ತಾರೆ ಅಂತ ನಾನು ಹೇಳಿಲ್ಲ. ನಾನು ಯಾವತ್ತು ಅಧಿಕಾರ ಹುಡುಕಿ ಹೋದವನಲ್ಲ. ಅಧಿಕಾರ ಬೇಕು ಅಂತಾ ಸಂಪೂರ್ಣ ಅಪೇಕ್ಷೆ ಪಡುವುದೂ ಇಲ್ಲ. ಅಧಿಕಾರ ಬಂದರೆ ಏನೆಲ್ಲಾ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದೀನಿ. ನಾನು ಸಚಿವನಾಗಿದ್ದಾಗ ಜಾರಿ ಮಾಡಿದ್ದ ಕಾನೂನು ಜಾರಿಯಾದರೆ ಸಹಕಾರ ಕ್ಷೇತ್ರ ಕ್ರಾಂತಿಯಾಗುತ್ತದೆ. ಸೊಸೈಟಿಗಳಲ್ಲೂ ನಾನು ಮೀಸಲಾತಿ ವ್ಯವಸ್ಥೆ ಜಾರಿಮಾಡಿದ್ದೇನೆ ಎಂದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್ಗೆ ನೋಟಿಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಏಕೆ ನೋಟಿಸ್ ಕೊಟ್ಟಿದ್ದಾರೆ ಅನ್ನೋ ಮಾಹಿತಿ ನನಗೂ ಇಲ್ಲ. ನೋಟಿಸ್ ಕೊಟ್ಟ ತಕ್ಷಣ ನ್ಯಾಷನಲ್ ಹೆರಾಲ್ಡ್ ಸಂಬಂಧ ಅಂತಾ ಹೇಳಕೆ ಆಗುವುದಿಲ್ಲ. ಅವರದ್ದು ಸಾಕಷ್ಟು ವೈಯಕ್ತಿಕ ವಿಚಾರ ಇರುತ್ತವೆ. ಅದರಲ್ಲಿ ಯಾವುದಕ್ಕೆ ಕೊಟ್ಟಿದ್ದಾರೆ ಯಾರಿಗೆ ಗೊತ್ತು ಎಂದರು.
ಇಂಡಿಗೋ ವಿಮಾನ ಸೇವೆ ರದ್ದು ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾತ್ರ ಬ್ಲೇಮ್ ಮಾಡಬಾರದು. ಬೇರೆ ಆಡಳಿತ ವರ್ಗದವರನ್ನು ಬ್ಲೇಮ್ ಮಾಡಬೇಕು. 8 ಗಂಟೆ ಕೆಲಸದ ಬದಲು 12 ಗಂಟೆ ಕೆಲಸ ಮಾಡಿಸಿದ್ದಾರೆ. 200 ಜನ ಪೈಲೆಟ್ಸ್ ಕೊರತೆ ಇರುವುದರಿಂದ ಸಮಸ್ಯೆ ಉಂಟಾಗಿದೆ ಎಂದರು.