ಬಿಜೆಪಿಯವರು ಒಡೆದಾಳುವ ಬ್ರಿಟಿಷರಿದ್ದಂತೆ । ಬಿಜೆಪಿಯಿಂದಲೇ ಜೆಡಿಎಸ್ ನೆಲಸಮ
ಕಳೆದ ಲೋಕಸಭಾ ಚುನಾವಣೆಯಲ್ಲಿ ಪುಲ್ಮಾಮಾ ದಾಳಿ ನಡೆಯದಿದ್ದರೆ ಮೋದಿಯವರು ಅಧಿಕಾರಕ್ಕೆ ಬರುತ್ತಿರಲಿಲ್ಲ, ಸೈನಿಕರ ಬಲಿ ಪಡೆದ ಕೀರ್ತಿ ಮೋದಿ ಸರ್ಕಾರಕ್ಕಿದೆ ಎಂದು ಶಾಸಕ ಬಾಲಕೃಷ್ಣ್ಣ ವಿವಾದಾತ್ಮಕ ಹೇಳಿಕೆ ನೀಡಿದರು.
ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಸಂವಿಧಾನ ದಿನದ ಅಂಗವಾಗಿ ಡಾ. ಬಿ.ಆರ್.ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಅಮಾಯಕ ಸೈನಿಕರ ಬಲಿ ಪಡೆದ ಕೀರ್ತಿ ಮೋದಿ ಸರ್ಕಾರಕ್ಕಿದೆ. ಪುಲ್ವಾಮಾ ದಾಳಿಯಲ್ಲಿ ಸೈನಿಕರನ್ನು ರಕ್ಷಿಸದೇ ಬಲಿ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಇಂಟಿಲಿಜೆಂಟ್ ವರದಿ ಗೃಹ ಸಚಿವ ಅಮಿತ್ ಷಾ ರವರಿಗೆ ಸಿಗುವುದಿಲ್ಲವೇ, ಸೈನಿಕರ ಬಲಿಯಾಗುವುದು ತಿಳಿದಿಲ್ಲವೆಂದರೆ ಇವರದು ಮುಟ್ಟಾಳ ಸರ್ಕಾರವೇ ಇರಬೇಕು. ಮೋದಿ ಇನ್ನೊಮ್ಮೆ ಪ್ರಧಾನಿಯಾಗುತ್ತೇನೆ ಎಂದು ಕನಸು ಕಾಣುತ್ತಿದ್ದಾರೆ, ಪುಲ್ವಾಮಾ ದಾಳಿಯಾಗದಿದ್ದರೆ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.ವಿರೋಧ ಪಕ್ಷದ ನಾಯಕರಾಗಿರುವ ಆರ್.ಅಶೋಕ್ , ನಮ್ಮ ಸರ್ಕಾರ ಜನವರಿಯಲ್ಲಿ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. 136 ಜನ ಗೆದ್ದಿದ್ದು, ಜನರು ಐದು ವರ್ಷಗಳ ಕಾಲ ಅಧಿಕಾರ ನೀಡಿದ್ದಾರೆ. ವಿರೋಧ ಪಕ್ಷವು ಬಾಯಿ ಮುಚ್ಕೊಂಡು ಇರಬೇಕು, ನಿಮ್ಮ ದುರಾಡಳಿತ ನೋಡಿಯೇ ಜನರು ನಮಗೆ ಆಶೀರ್ವಾದ ಮಾಡಿದ್ದು, ನಾವು ಕೆಲಸ ಮಾಡದಿದ್ದರೆ ಜನರೇ ನಮಗೆ ಉತ್ತರ ಕೊಡುತ್ತಾರೆ ಎಂದು ಅಶೋಕ್ ವಿರುದ್ದ ವಾಗ್ದಾಳಿ ನಡೆಸಿದರು.
ಬಾಕ್ಸ್......
ಜೆಡಿಎಸ್ ನೆಲಸಮವಾಗದಿದ್ದರೆ ನನ್ನ ಹೆಸರು ಬದಲಾಯಿಸಿಕೊಳ್ಳುವೆಉತ್ತರ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿದ್ದ ಮಾಯಾವತಿಯವರನ್ನು ಬಿಜೆಪಿ ನೆಲೆಸಮ ಮಾಡಿದ ರೀತಿ ಕರ್ನಾಟಕದಲ್ಲೂ ಕೂಡ ಜೆಡಿಎಸ್ ಪಕ್ಷವನ್ನು ನೆಲಸಮ ಮಾಡುತ್ತಾರೆ, ಇಲ್ಲವಾದರೆ ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ ಎಂದು ಶಾಸಕ ಬಾಲಕೃಷ್ಣ ಸವಾಲು ಹಾಕಿದರು.
ಬಿಜೆಪಿಯವರು ಬ್ರಿಟಿಷರಿದ್ದಂತೆ, ಯಾರು ಪ್ರಬಲರಿರುತ್ತಾರೋ ಅವರ ಮಧ್ಯೆ ಒಡೆದಾಳುವ ನೀತಿ ಅನುಸರಿಸಿ ಅವರನ್ನು ನೆಲಸಮ ಮಾಡುತ್ತಾರೆ. ಅದೇ ರೀತಿ ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಅರಿಯಬೇಕು. ಜಾತ್ಯತೀತ ಎಂದು ಹೇಳುತ್ತಿದ್ದ ಜೆಡಿಎಸ್, ಈಗ ದೇವೇಗೌಡರು ಸಾಯುವ ಕಾಲದಲ್ಲಿ ಕುಮಾರಸ್ವಾಮಿಯವರಿಂದ ಕೋಮುವಾದಿಗಳಾಗಿದ್ದಾರೆ ಎಂದು ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಕಿಡಿ ಕಾರಿದರು.---
ಪೋಟೋ 27ಮಾಗಡಿ1: ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಸಂವಿಧಾನ ದಿನದ ಅಂಗವಾಗಿ ಡಾ. ಬಿ.ಆರ್.ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿದ ಶಾಸಕ ಬಾಲಕೃಷ್ಣ.