ನಾಯಕತ್ವ ಬದಲಾವಣೆ ಪರ ವಿರೋಧ ಚರ್ಚೆ - ರಾಜಕಾರಣಕ್ಕಾಗಿ ಡಿಕೆ ಇಂದು ದಿಲ್ಲಿಗೆ

Published : Feb 10, 2026, 06:37 AM IST
DK Shivakumar

ಸಾರಾಂಶ

‘ನಾನು ಮಂಗಳವಾರ ದೆಹಲಿಗೆ ಹೋಗುತ್ತಿದ್ದೇನೆ. ಅದು ರಾಜಕಾರಣ. ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ನಾನು ಯಾರನ್ನು ಭೇಟಿ ಮಾಡುತ್ತೇನೆ ಎಂದು ಅವರೇ ಹೇಳುತ್ತಾರೆ’ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು :  ‘ನಾನು ಮಂಗಳವಾರ ದೆಹಲಿಗೆ ಹೋಗುತ್ತಿದ್ದೇನೆ. ಅದು ರಾಜಕಾರಣ. ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ನಾನು ಯಾರನ್ನು ಭೇಟಿ ಮಾಡುತ್ತೇನೆ ಎಂದು ಅವರೇ ಹೇಳುತ್ತಾರೆ’ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಇದೇ ವೇಳೆ, ನಾನು ಪ್ರತಿ ಬಾರಿ ದೆಹಲಿಗೆ ಹೋದಾಗಲೂ ಎಐಸಿಸಿ ಅಧ್ಯಕ್ಷರು, ಲೋಕಸಭೆ ಪ್ರತಿಪಕ್ಷ ನಾಯಕರು ಹಾಗೂ ನಾಯಕರನ್ನು ಭೇಟಿ ಮಾಡುವುದು ಕರ್ತವ್ಯ. ಭೇಟಿ ಮಾಡಿ ನನ್ನ ಕಷ್ಟ, ಸುಖ, ದುಃಖ, ದುಮ್ಮಾನ, ನಿಮ್ಮ ಸಂತೋಷ, ಬಯಕೆ ಎಲ್ಲಾ ಹೇಳುತ್ತಿರುತ್ತೇನೆ. ಅದೇ ರೀತಿ ಮಂಗಳವಾರವೂ ಭೇಟಿ ಮಾಡುತ್ತೇನೆ ಎಂದೂ ಅವರು ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಯಾರನ್ನು ಭೇಟಿ ಮಾಡುವೆ ಎಂದು ನಾನು ಹೆಸರೂ ಹೇಳುವುದಿಲ್ಲ. ಯಾರನ್ನು ಭೇಟಿ ಮಾಡುತ್ತೇನೋ ಅವರೇ ಹೇಳುತ್ತಾರೆ ಎಂದು ಕುತೂಹಲ ಮೂಡಿಸಿದರು. ಮೂಲಗಳ ಪ್ರಕಾರ, ಡಿಕೆಶಿ ಅವರು ಅಸ್ಸಾಂ ಚುನಾವಣೆ ವೀಕ್ಷಕರಾಗಿದ್ದು, ಆ ಕುರಿತು ಚರ್ಚಿಸಲು ದೆಹಲಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.

ಸಂತೋಷ, ಬಯಕೆ ಹೇಳುತ್ತೇನೆ

ನಾನು ಉಪಮುಖ್ಯಮಂತ್ರಿ ಎಂಬುದನ್ನು ಬದಿಗಿಡಿ. ನಾನು ಕೆಪಿಸಿಸಿ ಅಧ್ಯಕ್ಷ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮಾರ್ಚ್‌ 10ಕ್ಕೆ ಆರು ವರ್ಷವಾಗುತ್ತದೆ. ಎಐಸಿಸಿ ಅಧ್ಯಕ್ಷರು, ಪ್ರತಿಪಕ್ಷ ನಾಯಕರು, ನಾಯಕರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ನಾನು ಭೇಟಿ ಮಾಡುತ್ತಾ ಇರುತ್ತೇನೆ, ಕಷ್ಟ, ದುಃಖ, ದುಮ್ಮಾನ, ನಿಮ್ಮ ಸಂತೋಷ, ಬಯಕೆ ಹೇಳುತ್ತೇನೆ ಎಂದು ಪುನರುಚ್ಚರಿಸಿದರು.

ನಿಮ್ಮ ಕಷ್ಟವನ್ನು ಮತ್ತೊಬ್ಬ ಶಾಸಕರು ಬಹಿರಂಗಗೊಳಿಸಿ ನೀವು ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ನಿಮಗೆ ಇಷ್ಟ ಇಲ್ಲವೇ? ನಿಮ್ಮ ಬಯಕೆ ಹೇಳಿ ಮೊದಲು ಎಂದು ನಗೆ ಬೀರಿದರು.

ದೆಹಲಿ ಪ್ರವಾಸದಲ್ಲಿ ರಾಜಕಾರಣ ಜೊತೆಗೆ ಕೇಂದ್ರ ಜಲಶಕ್ತಿ ಸಚಿವರು, ಕಾನೂನು ತಜ್ಞರನ್ನು ಭೇಟಿ ಮಾಡುತ್ತಿರುವೆ. ನಮಗೆ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ತೀರ್ಪು ಬಂದಿದೆ. ಮೇಕೆದಾಟು ವಿಚಾರದಲ್ಲಿ ನಮಗೆ ಜಯ ಆಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರೊಂದಿಗೆ ಚರ್ಚಿಸುತ್ತೇನೆ ಎಂದರು.

ಸಿಎಂ ಅನುಮತಿ ಪಡೆದಿದ್ದೇನೆ- ಡಿಕೆಶಿ:

ನಾನು ಮುಖ್ಯಮಂತ್ರಿಗಳ ಅನುಮತಿ ಪಡೆದೇ ದೆಹಲಿಗೆ ಹೋಗುತ್ತಿದ್ದೇನೆ. ನೀರಾವರಿ ಇಲಾಖೆಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರು. ಅವರೊಂದಿಗೆ ನೀರಾವರಿ ವಿಚಾರ ಚರ್ಚಿಸಿದ್ದು, ದೆಹಲಿಯಿಂದ ಬಂದ ಮುಖ್ಯಮಂತ್ರಿಗಳಿಗೆ ವಿಚಾರ ತಿಳಿಸುತ್ತೇನೆ. ನನಗಿಂತ ಮುಖ್ಯಮಂತ್ರಿಗಳಿಗೆ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ತಿಳಿದಿದೆ. ಇನ್ನು ಬಜೆಟ್‌ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸುತ್ತಾರೆ ಎಂದು ಇದೇ ವೇಳೆ ಶಿವಕುಮಾರ್‌ ಸ್ಪಷ್ಟಪಡಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೆಟ್ರೋ ದರ ಏರಿಕೆ ಖಂಡಿಸಿ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಖಾಕಿ ವಶಕ್ಕೆ
ಮೆಟ್ರೋ ಟಿಕೆಟ್‌ ದರ ದರ ಏರಿಕೆಯಲ್ಲಿ ಕೇಂದ್ರದ ಪಾತ್ರವಿಲ್ಲ: ಆರ್‌.ಅಶೋಕ್‌