ಕೇಂದ್ರ ಸಚಿವ ಎಚ್ಡಿಕೆ ಬಗ್ಗೆ ಮಾತನಾಡುವ ಯೋಗ್ಯತೆ ಎಲ್‌ಆರ್‌ಎಸ್‌ಗೆ ಇಲ್ಲ: ಶಾಸಕ ಎಚ್.ಟಿ.ಮಂಜು

KannadaprabhaNewsNetwork | Published : Nov 5, 2024 12:37 AM

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ರಾಷ್ಟ್ರೀಯ ಪಕ್ಷದಿಂದ ಪತ್ನಿಯನ್ನು ನಿಲ್ಲಿಸಿ ಹೀನಾಯ ಸೋಲು ಕಂಡಿದ್ದರೂ ಎಲ್.ಆರ್.ಎಸ್ ಪಾಠ ಕಲಿತಿಲ್ಲ. ನಾಗಮಂಗಲ ಜನತೆ ನಿಮಗೆ ಯಾವ ರೀತಿ ಗೌರವ ಕೊಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾಗಮಂಗಲ ಕ್ಷೇತ್ರದ ಮತದಾರರು ನಿಮ್ಮನ್ನು ಕ್ಷೇತ್ರದಿಂದ ಓಡಿಸಿದ್ದಾರೆ. ಇದನ್ನು ಮೊದಲು ಅರಿಯಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೇಂದ್ರ ಸಚಿವ, ಸಂಸದ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರಿಗೆ ಇಲ್ಲ ಎಂದು ಶಾಸಕ ಎಚ್.ಟಿ.ಮಂಜು ಕಿಡಿಕಾರಿದರು.

ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಎಲ್.ಆರ್.ಶಿವರಾಮೇಗೌಡರು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸುದ್ದಿಗಾರರೊಂದಿಗೆ ಖಂಡಿಸಿ, ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಾಗ ಎಲ್‌ಆರ್ ಎಸ್ ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ರಾಷ್ಟ್ರೀಯ ಪಕ್ಷದಿಂದ ಪತ್ನಿಯನ್ನು ನಿಲ್ಲಿಸಿ ಹೀನಾಯ ಸೋಲು ಕಂಡಿದ್ದರೂ ಎಲ್.ಆರ್.ಎಸ್ ಪಾಠ ಕಲಿತಿಲ್ಲ. ನಾಗಮಂಗಲ ಜನತೆ ನಿಮಗೆ ಯಾವ ರೀತಿ ಗೌರವ ಕೊಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಲೇವಡಿ ಮಾಡಿದರು.

ರಾಜಕೀಯವಾಗಿ ಮೂಲೆಗುಂಪಾಗಿದ್ದ ಶಿವರಾಮೇಗೌಡರನ್ನು ಸಂಸದರನ್ನಾಗಿ ಮಾಡಿದ್ದು ಜೆಡಿಎಸ್, ದೇವೇಗೌಡರ ಕುಟುಂಬ. ಆದರೆ, ಅದಕ್ಕೂ ಮುನ್ನ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಎದುರು ಹೀನಾಯವಾಗಿ ಸೋಲು ಕಂಡಿದ್ದೀರಿ ಎಂದು ಕಿಡಿಕಾರಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಪಂ ಸದಸ್ಯ ತೆಗೆದುಕೊಂಡ ಮತಕ್ಕಿಂತಲು ಕಡಿಮೆ ಮತ ಪಡೆದ ನಿಮ್ಮ ಅಭ್ಯರ್ಥಿಯನ್ನು ನೋಡಿದರೆ ನೀವು ನಾಗಮಂಗಲ ಜನರಿಂದ ತಿರಸ್ಕೃತಗೊಂಡವರು ಎಂಬುದನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದರು.

ನಾಗಮಂಗಲ ಕ್ಷೇತ್ರದ ಮತದಾರರು ನಿಮ್ಮನ್ನು ಕ್ಷೇತ್ರದಿಂದ ಓಡಿಸಿದ್ದಾರೆ. ಇದನ್ನು ಮೊದಲು ಅರಿಯಬೇಕು. ಶಿವರಾಮೇಗೌಡ ಓರ್ವ ಪಕ್ಷಾಂತರಿ ನಾಯಕ. ಆತನಿಂದ ನಮ್ಮ ನಾಯಕರು ಕಲಿಯುವಂತದ್ದು ಏನೂ ಇಲ್ಲ. ನಿಮಗೆ ಆತ್ಮಸಾಕ್ಷಿ ಇದ್ದರೆ ಎಚ್ಡಿಕೆ ಬಗ್ಗೆ ಮಾತನಾಡುತ್ತಿರಲಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣದಲ್ಲಿ ನೈತಿಕತೆ ಕಳೆದುಕೊಂಡಿರುವ ಶಿವರಾಮೇಗೌಡರಿಗೆ ನಾಯಕತ್ವದ ಯಾವ ಗುಣಗಳು ಇಲ್ಲ. ಇವರ ನಡವಳಿಕೆಯನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ನಿಖಿಲ್ ಗೆಲುವು ನಿಶ್ಚಿತ:

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ನಿಶ್ಷಿತ. ನಿಖಿಲ್ ಗೆಲುವನ್ನು ಯಾವುದೇ ಶಕ್ತಿಗಳಿಂದಲೂ ತಡೆಯಲೂ ಸಾಧ್ಯವಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ನಾನು ಪ್ರಚಾರ ಮಾಡುತ್ತಿದ್ದು ಅಲ್ಲಿನ ಜನರ ನಾಡಿ ಮಿಡಿತ ಕಂಡಿದ್ದೇನೆ ಎಂದರು.

ರಾಜ್ಯ ಮೂಲೆ ಮೂಲೆಯಿಂದಲೂ ಜೆಡಿಎಸ್ ಕಾರ್ಯಕರ್ತರು ಚನ್ನಪಟ್ಟಣದಲ್ಲಿ ಬೀಡುಬಿಟ್ಟು ನಿಖಿಲ್ ಪರ ಪ್ರಚಾರ ಮಾಡುತ್ತಿದ್ದಾರೆ. ಚನ್ನಪಟ್ಟಣದ ಯುವಕರು ತನ್ನ ನಾಯಕನನ್ನು ನಿಖಿಲ್ ಮೂಲಕ ಕಂಡುಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಉತ್ಸಾಹದಿಂದ ನಿಖಿಲ್ ಪರ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಮತದಾರರು ಭ್ರಮನಿರಸನಗೊಂಡಿದ್ದು ನಿಖಿಲ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this article