ಮೈಸೂರು ಎಂಡಿಸಿಸಿ ಬ್ಯಾಂಕ್‌ ಚುನಾವಣೆ : ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮಬಲ

KannadaprabhaNewsNetwork | Updated : Jun 27 2025, 05:20 AM IST

ಎಂಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರು ಅಧಿಕಾರದ ಗದ್ದುಗೆ ಏರಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೆಂಬಲಿಗರು ಸಮಬಲ ಸಾಧಿಸಿದ್ದಾರೆ.

 ಮೈಸೂರು  :  ಎಂಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರು ಅಧಿಕಾರದ ಗದ್ದುಗೆ ಏರಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೆಂಬಲಿಗರು ಸಮಬಲ ಸಾಧಿಸಿದ್ದಾರೆ.

ಬ್ಯಾಂಕಿನ ಆಡಳಿತ ಮಂಡಳಿಯ 17 ಕ್ಷೇತ್ರಗಳಿದ್ದು, ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆದಿಲ್ಲ. ಉಳಿದ 13 ಕ್ಷೇತ್ರಗಳಲ್ಲಿ ಯಳಂದೂರು ಕ್ಷೇತ್ರದ ಜಯರಾಮ್‌ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 12 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಬೆಂಬಲಿತರು 5, ಜೆಡಿಎಸ್‌ ಬೆಂಬಲಿತರು 5 ಜಯಗಳಿಸಿದ್ದಾರೆ.

ಕೊಳ್ಳೆಗಾಲ-ಹನೂರು ತಲಾ ಒಂಭತ್ತು ಮತ ಪಡೆದರೆ, ಎಚ್‌.ಡಿ. ಕೋಟೆಯಲ್ಲೂ ಕೂಡ ತಲಾ ಎಂಟು ಮತಗಳನ್ನು ಪಡೆದಿದ್ದು, ಈ ಕ್ಷೇತ್ರಗಳ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಯಾವುದೇ ಫಲಿತಾಂಶ ಪ್ರಕಟವಾಗಿಲ್ಲ.

ಉಳಿದ ಇನ್ನೆರಡು ಕ್ಷೇತ್ರಗಳಲ್ಲಿ ಅತ್ಯಧಿಕ ಮತಗಳನ್ನು ಪಡೆದು ಗೆದ್ದರೂ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಫಲಿತಾಂಶ ಘೋಷಣೆ ಆಗದ ಹಿನ್ನೆಲೆಯಲ್ಲಿ ವಿಜೇತ ಅಭ್ಯರ್ಥಿಗಳಿಗೆ ವಿಜಯದ ಸಂಭ್ರಮಕ್ಕೆ ಅಡ್ಡಿಯಾಗಿದೆ.

ಕಳೆದ ಒಂದೂವರೆ ವರ್ಷದಿಂದ ಎಂಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಅವಧಿ ಪೂರ್ಣಗೊಂಡಿದ್ದರೂ ಚುನಾವಣೆ ನಡೆಸದೆ ಆಡಳಿತಾಧಿಕಾರಿಯನ್ನು ನೇಮಿಸಿ ಹಿಂಬಾಗಿಲ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್‌ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸ್ಥಳೀಯ ಸಚಿವರು, ಶಾಸಕರು, ಮಾಜಿ ಶಾಸಕರು, ಮಾಜಿ ಅಧ್ಯಕ್ಷರು ಸೇರಿದಂತೆ ಇಡೀ ಕಾಂಗ್ರೆಸ್‌ಪಾಳಯವೇ ಚುನಾವಣೆಯ ಗೆಲುವಿಗಾಗಿ ಶತಪ್ರಯತ್ನ ನಡೆಸಿದ್ದರು.

ಸರ್ಕಾರ ವರ್ಸಸ್‌ ಜಿ.ಡಿ. ಹರೀಶ್‌ಗೌಡ:

ಎಂಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಕಾಂಗ್ರೆಸ್ಸಿಗರು, ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಸಾಧಿಸಿರುವ ಎಂಸಿಡಿಸಿಸಿ ಬ್ಯಾಂಕಿನ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಅಪೆಕ್ಸ್‌ ಬ್ಯಾಂಕಿನ ಉಪಾಧ್ಯಕ್ಷರೂ ಆಗಿರುವ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ಗೌಡ ಅವರನ್ನು ಮಣಿಸಲು ತಂತ್ರಗಾರಿಕೆ ನಡೆಸಿದ್ದರು. ಆದರೆ ಕಾಂಗ್ರೆಸ್ಸಿಗರು ನಡೆಸಿದ ಈ ಎಲ್ಲಾ ಪ್ರಯತ್ನಗಳು ವಿಫಲವಾಗುವ ಮೂಲಕ ಚುನಾವಣೆಯ ಫಲಿತಾಂಶ ಅತಂತ್ರವಾಗಿದೆ.

ಆಡಳಿತರೂಢ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿಗಳು, ಇಬ್ಬರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರು ಜಿ.ಡಿ. ಹರೀಶ್‌ಗೌಡ ಅವರನ್ನು ಎಂಸಿಡಿಸಿಸಿ ಬ್ಯಾಂಕಿನ ಅಧಿಕಾರದಿಂದ ದೂರ ಉಳಿಸಲು, ಆಡಳಿತ ಮಂಡಳಿ ಚುನಾವಣೆಯನ್ನು ಮುಂದೂಡಿದ್ದರು. ಈ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ್ದ ಶಾಸಕ ಜಿ.ಡಿ. ಹರೀಶ್‌ಗೌಡ ಅವರು ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿ, ಚುನಾವಣೆ ನಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಆದರೂ ಹಿಂಬಾಗಿಲಿನಿಂದ ತಮ್ಮ ತಂತ್ರಗಾರಿಕೆ ಮುಂದುವರಿಸಿದ ಸರ್ಕಾರ, ಯಾವುದೇ ಪ್ರಗತಿ ಹೊಂದದ ಪ್ರತಿ ಕ್ಷೇತ್ರಕ್ಕೆ ತಲಾ 3- 4 ಸಂಘಗಳು ಸೇರಿದಂತೆ ಒಟ್ಟು 32 ಸಂಘಗಳಿಗೆ ಮತದಾನದ ಹಕ್ಕು ನೀಡುವ ಮೂಲಕ ತಮಗೆ ಲಾಭ ಮಾಡಿಕೊಂಡಿತ್ತು. ಪರಿಣಾಮ ಮೈಸೂರು ಮತ್ತು ಚಾಮರಾಜನಗರದಲ್ಲಿ ಒಂದು ಮತಗಳಿಂದ ಗೆದ್ದರೆ, ಕೊಳ್ಳೇಗಾಲ ಮತ್ತು ಎಚ್‌.ಡಿ. ಕೋಟೆಯಲ್ಲಿ ಸಮಬಲ ಪಡೆದುಕೊಂಡಿದೆ. ಕೆ.ಆರ್. ನಗರದಲ್ಲಿ ನಾಲ್ಕು ಮತಗಳಿಂದ ಗೆದ್ದಿದೆ. ಇದಲ್ಲದೇ ತಾಲೂಕು ಹಾಗೂ ಜಿಲ್ಲಾ ಮಟ್ಟದ ಮೇಲ್ಪಟ್ಟ ಕ್ಷೇತ್ರ ಮತ್ತು ಪಟ್ಟಣ ಸಹಕಾರ ಬ್ಯಾಂಕ್ ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ಕ್ಷೇತ್ರಗಳಲ್ಲೂ, ರಾತ್ರೋರಾತ್ರಿ ಹೊಸ ಸಂಘಗಳನ್ನು ಸೇರ್ಪಡೆ ಮಾಡಿದ್ದರ ಪರಿಣಾಮ ಬೀರಿದೆ.

ಜನತಂತ್ರ ಮಣಿಸಿದ ಕೈ ತಂತ್ರ

ಸರ್ಕಾರ ಮತ್ತು ಎಂಸಿಡಿಸಿಸಿ ಬ್ಯಾಂಕಿನ ನಿಟಕಪೂರ್ವ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ನಡುವೆ ನಡೆದ ಈ ಚುನಾವಣಾ ಕದನದಲ್ಲಿ ಕಾಂಗ್ರೆಸ್‌ಸರ್ಕಾರದ ತಂತ್ರಗಾರಿಕೆಯಿಂದ ಹತ್ತು ಸ್ಥಾನಗಳನ್ನು ಪಡೆಯಬೇಕಿದ್ದ ಜೆಡಿಎಸ್‌ ಐದು ಸ್ಥಾನಗಳಿಗೆ ತೃಪ್ತಿಪಡುವಂತಾಗಿದೆ.

ಚುನಾವಣಾ ಪ್ರಕ್ರಿಯೆ

ತೀವ್ರ ಕುತೂಹಲ ಮೂಡಿಸಿದ್ದ ಎಂಸಿಡಿಸಿಸಿ ಬ್ಯಾಂಕ್‌ಚುನಾವಣೆ ಮತದಾನ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರ ನೇತೃತ್ವದಲ್ಲಿ ಶಾಂತಿಯುವ ಮತದಾನ ಹಾಗೂ ಸೂಕ್ತ ಬಂದೋಬಸ್ತ್‌ವಹಿಸುವ ಮೂಲಕ ಚುನಾವಣೆ ಯಶಸ್ವಿಯಾಗಿ ನಡೆಯಿತು. ಯಾವುದೇ ಆರೋಪ- ಪ್ರತ್ಯಾರೋಪಗಳಿಗೆ ಆಸ್ಪದ ನೀಡದಂತೆ ಜಿಲ್ಲಾಧಿಕಾರಿಗಳು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. 

ಗೆಲುವಿನ ವಿಜಯೋತ್ಸವ

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಜೆಡಿಎಸ್‌ ಮತ್ತು ಬಿಜೆಪಿ ಬೆಂಬಲಿತರು ಜಿ.ಡಿ. ಹರೀಶ್‌ಗೌಡ ಅವರಿಗೆ ಜೈಕಾರ ಕೂಗಿ ಸಂಭ್ರಮಿಸಿದರು. ಉಭಯ ಪಕ್ಷಗಳ ಕಾರ್ಯಕರ್ತರು ಮೈಸೂರಿನ ವಿನೋಬಾ ರಸ್ತೆಯ ನಂಜರಾಜ ಬಹುದ್ದೂರ್‌ಕಲ್ಯಾಣ ಮಂಟಪದ ಮತ ಎಣಿಕೆ ಕೇಂದ್ರದಿಂದ ಶಾಸಕ ಜಿ.ಡಿ. ಹರೀಶ್‌ಗೌಡ ಅವರನ್ನು ಹೆಗಲ ಮೇಲೆ ಹೊತ್ತು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಗೆಲುವಿನ ಸಂಭ್ರಮಾಚರಣೆ ನಡೆಸಿದರು.

ಮತ್ತೊಂದೆಡೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ಅಭ್ಯರ್ಥಿಗಳು ತಮ್ಮ ಪಕ್ಷದ ಪ್ರಮುಖರಿಗೆ ಸೋತ ಹಿನ್ನೆಲೆಯಲ್ಲಿ ತಮ್ಮ ಗೆಲುವಿನ ಸಂಭ್ರಮ ಪಡೆಲಿಲ್ಲ. ಆದರೂ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಜೈಕಾರ ಹಾಕಿ ಸಂಭ್ರಮಿಸಿದರು. 

ಗೆದ್ದುಬೀಗಿದ ಪ್ರಮುಖರು

ಹುಣಸೂರು ಕ್ಷೇತ್ರ: ಶಾಸಕ ಜಿ.ಡಿ. ಹರೀಶ್‌ಗೌಡ

ಗುಂಡ್ಲುಪೇಟೆ ಕ್ಷೇತ್ರ: ಶಾಸಕ ಎಚ್‌.ಎಂ. ಗಣೇಶ್‌ಪ್ರಸಾದ್‌

ಚಾಮರಾಜನಗರ ಕ್ಷೇತ್ರ: ಶಾಸಕ ಸಿ. ಪುಟ್ಟರಂಗಶೆಟ್ಟಿ

ಪಿರಿಯಾಪಟ್ಟಣ ಕ್ಷೇತ್ರ: ಲೋಕೇಶ್‌

ಕೆ.ಆರ್. ನಗರ ಕ್ಷೇತ್ರ: ದೊಡ್ಡ ಸ್ವಾಮೇಗೌಡ

ಟಿ. ನರಸೀಪುರ ಕ್ಷೇತ್ರ: ರಾಮೇಗೌಡ

ನಂಜನಗೂಡು ಕ್ಷೇತ್ರ: ಬಿ.ಎಸ್. ಸದಾನಂದ

ಮೈಸೂರು ಕ್ಷೇತ್ರ: ಎಂ. ಕೆಂಚಪ್ಪ

ಯಳಂದೂರು ಕ್ಷೇತ್ರ: ಜಯರಾಮ್ (ಅವಿರೋಧ)

- ಪಟ್ಟಣ ಸಹಕಾರ ಬ್ಯಾಂಕ್‌ ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘ - ಎಸ್‌.ಬಿ.ಎಂ. ಮಂಜು

- ತಾಲೂಕು ಹಾಗೂ ಜಿಲ್ಲಾಮಟ್ಟ ಮೇಲ್ಪಟ್ಟ ಸಹಕಾರ ಸಂಘ - ಟಿ. ರಾಮೇಗೌಡ.

ಸೋಲುಂಡ ಪ್ರಮುಖರು

ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಎಂಎಲ್‌ಸಿ ಎಚ್.‌ವಿಶ್ವನಾಥ್‌ ಪುತ್ರ ಅಮಿತ್‌ವಿ. ದೇವರಹಟ್ಟಿ, ಕಾಂಗ್ರೆಸ್‌ ಮುಖಂಡ ಎಚ್‌.ವಿ. ರಾಜೀವ್‌.

ಸಮಬಲದ ಕಾದಾಟ

ಎಂಸಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆ ಜಿದ್ದಾಜಿದ್ದಿನ ಕದನವಾಗಿತ್ತು. ಇದಕ್ಕೆ ಪೂರಕವೆಂಬಂತೆ ಎಚ್‌.ಡಿ. ಕೋಟೆ ಹಾಗೂ ಕೊಳ್ಳೇಗಾಲ ಕ್ಷೇತ್ರಗಳಲ್ಲಿ ಸಮಬಲದ ಫಲಿತಾಂಶ ಬಂದಿದೆ. 

ಒಂದು ಮತದ ಗೆಲುವು

ಎಂಸಿಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಡೆಸಿದ ತಂತ್ರದ ಫಲವಾಗಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಅಭ್ಯರ್ಥಿಗಳಿಗೆ ಒಂದು ಮತದ ರೋಚಕ ಗೆಲುವು ಲಭಿಸಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರು ಒಂದು ಮತದಿಂದ ಜಯಭೇರಿ ಬಾರಿಸಿದರೆ. ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಂಚಪ್ಪ ಅವರು ಸಹ ಒಂದು ಮತದ ಅಂತರದಲ್ಲಿ ಗೆದ್ದುಬೀಗಿದ್ದಾರೆ.ನಾನೊಬ್ಬ ಮಾಜಿ ಸಚಿವ ಹಾಗೂ ಹಾಲಿ ಶಾಸಕನಾಗಿದ್ದರೂ ಕ್ಷೇತ್ರದಲ್ಲಿ ಒಂದು ಮತದಿಂದ ಗೆದ್ದಿರುವುದು ನನ್ನ ಗೆಲುವಲ್ಲ.

- ಸಿ. ಪುಟ್ಟರಂಗಶೆಟ್ಟಿ, ಶಾಸಕ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಸಕಾಲದಲ್ಲಿ ಚುನಾವಣೆ ನಡೆಸದೆ ಸಹಕಾರಿ ನಿಯಮಗಳನ್ನೇ ಗಾಳಿಗೆ ತೂರಿ, ಜನತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಕೈ ತಂತ್ರ ನಡೆಸಿ, ಬ್ಯಾಂಕಿನ ಚುಕ್ಕಾಣಿ ಹಿಡಿಯಲು ಮುಂದಾಗಿರುವುದು ದುರ್ದೈವದ ಸಂಗತಿಯಾಗಿದೆ. ಇದಕ್ಕೆ ಸಹಕಾರಿಗಳು ಈ ಚುನಾವಣೆಯ ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಿದ್ದಾರ.

- ಜಿ.ಡಿ. ಹರೀಶ್‌ಗೌಡ, ಶಾಸಕರು ಹಾಗೂ ನಿಕಟಪೂರ್ವ ಅಧ್ಯಕ್ಷರು ಎಂಸಿಡಿಸಿಸಿ ಬ್ಯಾಂಕ್‌

Read more Articles on