ಸಚಿವ ಜಮೀರ್‌ ರಾಷ್ಟ್ರ ಧ್ವಜಾರೋಹಣ ವಿವಾದ - ಧ್ವಜಾರೋಹಣದಿಂದ ವಿನಾಯ್ತಿ ಕೇಳಿದ ಸಚಿವ

Published : Aug 15, 2026, 06:43 AM IST
Zameer Ahmed Khan

ಸಾರಾಂಶ

ಸಮಯದ ಅಭಾವದಿಂದ ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಲು ನೀಡಿರುವ ಜವಾಬ್ದಾರಿಯಿಂದ ವಿನಾಯಿತಿ ಕೇಳಿದ ಸಚಿವ ಜಮೀರ್‌ ಅಹಮದ್‌ ಖಾನ್‌ ನಡೆಗೆ ವಿರೋಧ ಪಕ್ಷದ ಶಾಸಕರು ಸದನದ ಒಳಗೆ ಮತ್ತು ಹೊರಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧ : ಸಮಯದ ಅಭಾವದಿಂದ ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಲು ನೀಡಿರುವ ಜವಾಬ್ದಾರಿಯಿಂದ ವಿನಾಯಿತಿ ಕೇಳಿದ ಸಚಿವ ಜಮೀರ್‌ ಅಹಮದ್‌ ಖಾನ್‌ ನಡೆಗೆ ವಿರೋಧ ಪಕ್ಷದ ಶಾಸಕರು ಸದನದ ಒಳಗೆ ಮತ್ತು ಹೊರಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಕಲಾಪದ ಕೊನೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿ.ಸುನೀಲ್‌ ಕುಮಾರ್‌, ಚುನಾವಣೆ ತಯಾರಿ ಕಾರಣಕ್ಕಾಗಿ ಧ್ವಜಾರೋಹಣದಿಂದ ವಿನಾಯಿತಿ ನೀಡುವಂತೆ ಜಮೀರ್‌ ಅಹಮದ್‌ ಖಾನ್‌ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಸಚಿವರಾಗಿ ಧ್ವಜಾರೋಹಣ ಮಾಡುವ ಅವಕಾಶ ಸಿಗುವುದು ಹೆಮ್ಮೆಯ ವಿಚಾರ. ಆದರೆ, ಜಮೀರ್‌ ಅಹಮದ್‌ ಖಾನ್‌ ಅವರು ಅದಕ್ಕೆ ವಿನಾಯಿತಿ ಪಡೆಯುವ ಮೂಲಕ ದೇಶ ವಿರೋಧಿಯಾಗಿದ್ದಾರೆ. ಅವರಿಗೆ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ಅವಕಾಶ ಬೇಡ ಎಂದಾದರೆ ಸಚಿವ ಸ್ಥಾನವನ್ನೂ ಬಿಡಲಿ ಎಂದು ಆಗ್ರಹಿಸಿದರು.

ಬಿಜೆಪಿಯ ಡಾ.ಅಶ್ವತ್ಥನಾರಾಯಣ್ ಮಾತನಾಡಿ, ಜಮೀರ್‌ ಅಹಮದ್ ಖಾನ್‌ ಅವರ ನಡೆ ದೇಶ ಮತ್ತು ರಾಜ್ಯಕ್ಕೆ ಮಾಡಿದ ಅವಮಾನ. ಅವರು ದೇಶ ವಿರೋಧಿ ಕೆಲಸ ಮಾಡಿದ್ದಾರೆ ಎಂದರು.

ಅದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ಉಪನಾಯಕ ಅರವಿಂದ್‌ ಬೆಲ್ಲದ್‌, ಈಗ ರಾಷ್ಟ್ರಧ್ವಜ ಬೇಡ ಎನ್ನುತ್ತಿದ್ದಾರೆ. ಮುಂದೆ ಸಂವಿಧಾನವೇ ಬೇಡ, ಕುರಾನ್‌ ತನ್ನಿ ಎನ್ನುತ್ತಾರೆ ಎಂದು ಹೇಳಿದರು.

ಇದರಿಂದ ಕೋಪಗೊಂಡ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌, ಅನಾರೋಗ್ಯ ಸೇರಿದಂತೆ ಅವರ ವೈಯಕ್ತಿಕ ಕಾರಣದಿಂದಾಗಿ ಜಿಲ್ಲಾ ಉಸ್ತುವಾರಿ ಬೇಡ ಎಂದು ಜಮೀರ್‌ ಹೇಳಿದ್ದಾರೆ. ಅವರಿಂದ ದೇಶಕ್ಕೆ ಯಾವುದೇ ಅಪಮಾನವಾಗಿಲ್ಲ. ವಿಷಯವನ್ನು ಎಲ್ಲಿಂದ ಎಲ್ಲಿಗೋ ತೆಗೆದುಕೊಂಡು ಹೋಗಬೇಡಿ. ರಾಷ್ಟ್ರಧ್ವಜಕ್ಕೆ ಮತ್ತು ದೇಶಕ್ಕೆ ಗೌರವ ನೀಡುವುದನ್ನು ಬಿಜೆಪಿ ಅವರಿಂದ ಕಲಿಯುವ ಅವಶ್ಯಕತೆ ನಮಗಿಲ್ಲ ಎಂದು ತಿರುಗೇಟು ನೀಡಿದರು.

ಅಂತಿಮವಾಗಿ ಬಿಜೆಪಿ ಸದಸ್ಯರು ಜಮೀರ್‌ ಅಹಮದ್‌ ಖಾನ್‌ ಅವರ ನಡೆಯನ್ನು ಖಂಡಿಸಿ ಸಭಾತ್ಯಾಗ ಮಾಡಿದರು.

ಜಮೀರ್‌ ವಿರುದ್ಧ ಕ್ರಮವಾಗಬೇಕು: ಅಶೋಕ್

ಸಚಿವ ಜಮೀರ್‌ ಅಹಮದ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಇದೇ ವೇಳೆ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಧ್ವಜಾರೋಹಣಕ್ಕೆ ಹೋಗುವುದಿಲ್ಲ ಎಂದು ಹೇಳುವುದು ದೇಶಕ್ಕೆ ಮಾಡಿದ ಅಪಮಾನ. ಇಂಥವರನ್ನು ಇಟ್ಟುಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಯಾವ ರೀತಿ ಆಡಳಿತ ನಡೆಸುತ್ತಾರೋ ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಗೆ ತೆರಳಿ ತ್ರಿವರ್ಣ ಧ್ವಜಾರೋಹಣ ಮಾಡುವ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಒಳ್ಳೆಯದಲ್ಲ. ಪಕ್ಷ ಸಂಘಟನೆ ಹಾಗೂ ಉಪಚುನಾವಣೆ ಎದುರಿಸುವ ಕಾರಣ ನೀಡಿ ಉಸ್ತುವಾರಿ ಸಚಿವ ಸ್ಥಾನ ಬೇಡ ಎಂದು ಜಮೀರ್ ಅಹಮದ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಸರಿಯಲ್ಲ ಎಂದು ಟೀಕಿಸಿದರು.

ಆರೋಗ್ಯ ಸಚಿವ ಯು.ಟಿ.ಖಾದರ್‌ ಮಾತನಾಡಿ, ಧ್ವಜಾರೋಹಣ ಮಾಡುವುದಿಲ್ಲ ಎಂಬುದಾಗಿ ಜಮೀರ್‌ ಅಹಮದ್ ಎಲ್ಲಿಯೂ ಹೇಳಿಲ್ಲ. ಜಮೀರ್‌ ಅವರಿಗೆ ಇರುವಷ್ಟು ದೇಶಪ್ರೇಮ ಬಿಜೆಪಿ ಅವರಿಗೂ ಇಲ್ಲ. ಎಲ್ಲವನ್ನೂ ವಿವಾದ ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿದರು.

ಜಮೀರ್‌ ಬದಲು ಬಸವಂತಪ್ಪ ಧ್ವಜಾರೋಹಣ

ವಿಜಯನಗರ ಜಿಲ್ಲೆ ಉಸ್ತುವಾರಿ ಹಾಗೂ ಧ್ವಜಾರೋಹಣ ಜವಾಬ್ದಾರಿಯಿಂದ ಬಿಡುಗಡೆ ಕೋರಿ ಸಚಿವ ಜಮೀರ್‌ ಪತ್ರದ ಬೆನ್ನಲ್ಲೇ ವಿಜಯನಗರ ಜಿಲ್ಲೆ ಉಸ್ತುವಾರಿ ಹಾಗೂ ಅಲ್ಲಿನ ಧ್ವಜಾರೋಹಣ ಹೊಣೆಯನ್ನು ಸಚಿವ ಬಸವಂತಪ್ಪ ಅವರಿಗೆ ವಹಿಸಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಯಾರ ಮೇಲೂ ನಾನು ದ್ವೇಷದ ರಾಜಕಾರಣ ಮಾಡಲ್ಲ: ಡಿಕೆಶಿ
2028ಕ್ಕೆ ಪುಟ್ಬಾಲ್‌ ಅಲ್ಲ, ಚೆಸ್‌ ಆಡುತ್ತೇನೆ : ಡಿಕೆಶಿ