ಕಾಂಗ್ರೆಸ್‌ಗೆ ಮುಸ್ಲಿಂ ನಾಯಕರ ತಲಾಖ್‌ ಎಚ್ಚರಿಕೆ-ಪಕ್ಷಕ್ಕೆ ವಿದಾಯ, ಚುನಾವಣೆಯಲ್ಲಿ ತಕ್ಕ ಪಾಠ

Published : Apr 23, 2026, 07:07 AM IST
Congress flag

ಸಾರಾಂಶ

‘ದಾವಣಗೆರೆ ಉಪ ಚುನಾವಣೆ ನಂತರ ಅನಗತ್ಯವಾಗಿ ಮುಸ್ಲಿಂ ನಾಯಕರ ಮೇಲೆ ಕೈಗೊಂಡಿರುವ ಕಠಿಣ ನಿರ್ಧಾರಗಳನ್ನು ಹಿಂಪಡೆಯದಿದ್ದರೆ ಕಾಂಗ್ರೆಸ್‌ ಪಕ್ಷಕ್ಕೇ ತ್ರಿವಳಿ ತಲಾಕ್‌ ನೀಡಲಾಗುವುದು. ಅಷ್ಟೇ ಅಲ್ಲ, ಪಕ್ಷದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು.

  ಬೆಂಗಳೂರು :  ‘ದಾವಣಗೆರೆ ಉಪ ಚುನಾವಣೆ ನಂತರ ಅನಗತ್ಯವಾಗಿ ಮುಸ್ಲಿಂ ನಾಯಕರ ಮೇಲೆ ಕೈಗೊಂಡಿರುವ ಕಠಿಣ ನಿರ್ಧಾರಗಳನ್ನು ಹಿಂಪಡೆಯದಿದ್ದರೆ ಕಾಂಗ್ರೆಸ್‌ ಪಕ್ಷಕ್ಕೇ ತ್ರಿವಳಿ ತಲಾಕ್‌ ನೀಡಲಾಗುವುದು. ಅಷ್ಟೇ ಅಲ್ಲ, ಪಕ್ಷದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು.

ಹೀಗಂತ ರಾಜ್ಯ ಉಲಮಾ ಮಂಡಳಿ ಕಾಂಗ್ರೆಸ್‌ ಪಕ್ಷಕ್ಕೆ ಎಚ್ಚರಿಕೆ ನೀಡಿದೆ.

ಬುಧವಾರ ಪಕ್ಷದಿಂದ ಮುಸ್ಲಿಂ ಮುಖಂಡರನ್ನು ವಜಾಗೊಳಿಸಿದ ಕಾಂಗ್ರೆಸ್ ಹೈಕಮಾಂಡ್‌ ವಿರುದ್ಧ ಮುಸ್ಲಿಂ ಧಾರ್ಮಿಕ ನಾಯಕರು, ವಿವಿಧ ಸಂಘಟನೆಗಳು ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಮುಸ್ಲಿಮರ ಅಗತ್ಯವಿದೆಯೇ ಹೊರತು ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷದ ಅಗತ್ಯವಿಲ್ಲ. ಸಮುದಾಯದ ನಾಯಕರ ಮೇಲೆ ಕೈಗೊಂಡಿರುವ ಕ್ರಮಗಳನ್ನು ಹಿಂಪಡೆಯದಿದ್ದರೆ ಕಾಂಗ್ರೆಸ್‌ಗೆ ತಲಾಖ್ ನೀಡಲಾಗುವುದು. ಅಷ್ಟೇ ಅಲ್ಲದೆ, ಮುಂದೇನು ಮಾಡಬೇಕು ಎಂದು ಶೀಘ್ರದಲ್ಲೇ ನಡೆಯಲಿರುವ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಜಮೀಯತ್‌ ಉಲಮಾ ನಾರ್ತ್‌ ಬೆಂಗಳೂರು ಅಧ್ಯಕ್ಷ ಮಹಮ್ಮದ್‌ ಸಲಾವುದ್ದೀನ್‌ ಅಯ್ಯುಬಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಹಲವು ದಶಕಗಳ ಹಿಂದೆ ಮುಸ್ಲಿಂ ಸಮುದಾಯದ ಹಿರಿಯರು ಆದೇಶ ಕೊಟ್ಟಂತೆ ಅಂದಿನಿಂದಲೂ ಕಾಂಗ್ರೆಸ್‌ನೊಂದಿಗೆ ಇದ್ದೇವೆ. ಈಗ ನಮ್ಮ ಸಮುದಾಯದ ಮುಖಂಡರಿಗೆ ಅನ್ಯಾಯ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ. 2028ರಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಸಮುದಾಯದ ಉಲಮಾಗಳು, ಹಿರಿಯರು ಮುಂದೇನು ಮಾಡಬೇಕೆಂದು ನಿರ್ಧಾರಿಸುತ್ತಾರೆ ಎಂದರು.

ಕಾಂಗ್ರೆಸ್‌ ನಂಬಿಕೊಂಡಿಲ್ಲ:

ಕಾಂಗ್ರೆಸ್‌ ನಂಬಿಕೊಂಡು ಮುಸ್ಲಿಂ ಸಮುದಾಯ ಅನ್ನ ತಿನ್ನುತ್ತಿದೆ ಎಂದು ಭಾವಿಸಿದರೆ ಅದು ತಪ್ಪು. ನಮ್ಮನ್ನು ಅಲ್ಲಾ (ಭಗವಂತ) ಕಾಪಾಡುತ್ತಾನೆ. ಆತನ ಮೇಲೆ ನಮಗೆ ಭರವಸೆ ಇದೆಯೇ ಹೊರತು ಯಾವ ಮನುಷ್ಯರ ಮೇಲೂ ಅಲ್ಲ. ಯಾವುದೇ ನೋಟಿಸ್‌ ನೀಡದೆ ಸುಳ್ಳು ಆರೋಪಗಳ ಹೇಳಿಕೆಗಳನ್ನು ಆಧರಿಸಿ ಪಕ್ಷದ ಹೈಕಮಾಂಡ್‌ ನಸೀರ್‌ ಅಹ್ಮದ್‌, ಅಬ್ದುಲ್‌ ಜಬ್ಬಾರ್‌ ಅವರ ವಿರುದ್ಧ ಕ್ರಮಕೈಗೊಂಡಿರುವುದು ಅನ್ಯಾಯ. ಅವರನ್ನು ಮೊಸರಿನಲ್ಲಿ ಬಿದ್ದ ನೊಣವನ್ನು ಹೊರಗೆ ಹಾಕಿದಂತೆ ಪಕ್ಷದಿಂದ ವಜಾ ಮಾಡಿದ್ದು, ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಇಬ್ಬರು ನಾಯಕರನ್ನು ಹೊರ ಹಾಕಿದ ಕೂಡಲೇ ಕಾಂಗ್ರೆಸ್‌ ಪಕ್ಷಕ್ಕೆ ಒಳಿತಾಗಲಿದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಇಡೀ ಸಮುದಾಯ ಇವರ ಹಿಂದಿದೆ ಎಂಬುದು ಸುರ್ಜೇವಾಲಾ, ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿದೆಯೇ? ಎಲ್ಲ ಉಲಮಾಗಳು ಒಗ್ಗೂಡಿ ಸಮುದಾಯದ ಹಿರಿಯರೊಂದಿಗೆ ಕಾಂಗ್ರೆಸ್‌ ವಿರುದ್ಧ ನಿಲ್ಲುವಂತೆ ಆದೇಶಿಸಿದರೆ ಯಾವ ಮುಸ್ಲಿಂ ನಿಮಗೆ ಓಟು ಕೊಡುತ್ತಾನೆ? ಆಗ ನಿಮ್ಮ ಸ್ಥಿತಿ ಏನು ಎಂಬುದನ್ನು ಮೊದಲು ಅರಿತುಕೊಳ್ಳಿ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಸಮುದಾಯದ ಮುಖಂಡ ಅಬ್ದುಲ್‌ ರಝಾಕ್‌, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಸಚಿವ ಜಮೀರ್‌ ಅಹ್ಮದ್‌ ಖಾನ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಮತ್ತು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಅಬ್ದುಲ್‌ ಜಬ್ಬಾರ್‌ ಏನೆಲ್ಲಾ ಕೆಲಸ ಮಾಡಿದ್ದಾರೆ ಎಂಬುದು ಪಕ್ಷದ ನಾಯಕರಿಗೆ ಗೊತ್ತಿಲ್ಲವೇ? ಎಸ್.ಎಸ್.ಮಲ್ಲಿಕಾರ್ಜುನ, ಒಂದು ಚಹಾ ಕುಡಿದ್ರೂ ಅವರ ಋಣ ಇಟ್ಟುಕೊಳ್ಳಬಾರದು ಅಂದಿದ್ದಾರೆ. ಹಾಗಿದ್ದರೆ ಅವರಿಗೆ ಸತತ 40 ವರ್ಷಗಳ ಕಾಲ ಶಾಮನೂರು ಶಿವಶಂಕರಪ್ಪ ಅವರ ಗೆಲುವಿಗೆ ಮುಸ್ಲಿಂ ಸಮುದಾಯ ಸಹಕರಿಸಿದ್ದು ಗೊತ್ತಿಲ್ಲವೇ? ಯಾಕೆ ಅವರಿಗೆ ಮುಸ್ಲಿಮರ ಸಹಾಯದ ಋಣ ಇಲ್ವಾ ಎಂದು ಪ್ರಶ್ನಿಸಿದರು.

ಎಸ್‌ಎಸ್‌ಎಂ ವಿರುದ್ಧ ಯಾಕೆ ಕ್ರಮ ಇಲ್ಲ?:

ಟಿಕೆಟ್‌ ಘೋಷಣೆ ಆಗುವುದಕ್ಕೂ ಮೊದಲೇ ಹೋಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಮಲ್ಲಿಕಾರ್ಜುನ್‌ ಮತ್ತವರ ಕುಟುಂಬದ ವಿರುದ್ಧ ಏಕೆ ಹೈಕಮಾಂಡ್‌ ಕ್ರಮಕೈಗೊಂಡಿಲ್ಲ? 2023ರಲ್ಲಿ ಶಿವಮೊಗ್ಗದಲ್ಲಿ ಕುಳಿತು ಯಡಿಯೂರಪ್ಪ ಅವರ ಮಗ ರಾಘವೇಂದ್ರ ಪರ ಮತ ಹಾಕುವಂತೆ ಹೇಳಿದ್ದ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಚುನಾವಣೆ ಫಲಿತಾಂಶ ಬರುವುದಕ್ಕೂ ಮೊದಲೇ ಮುಸ್ಲಿಂ ನಾಯಕರನ್ನು ವಜಾ ಮಾಡಿದ್ದು ಸರಿಯೇ? ಇದು ಮುಸ್ಲಿಂ ಸಮುದಾಯದ ವಿರುದ್ಧದ ಷಡ್ಯಂತ್ರ ಅಲ್ಲದೇ ಮತ್ತೇನು? ನಮ್ಮ‌ ನಾಯಕರ ವಿರುದ್ದ ತೆಗೆದುಕೊಂಡ ಕ್ರಮ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ತಿಂಗಳು ಅರಮನೆ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಉಲಮಾ ಸಮಾವೇಶದಲ್ಲಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬನ್ನೇರುಘಟ್ಟ ಬಿಲ್ಲಾಲ್‌ ಮಸೀದಿಯ ಮೌಲಾನ ಮಹಮ್ಮದ್‌ ಶಾಕೀರ್ ಉಲ್ಲಾ, ಮೌಲಾನಾ ಮಫ್ತಿ ಸೈಯದ್ ಇಬ್ರಾಹಿಂ ಸೇರಿ ಇತರರಿದ್ದರು.

ಮುಸ್ಲಿಂ ನಾಯಕರ ಎಚ್ಚರಿಕೆ ಏನು?

ಕಾಂಗ್ರೆಸ್‌ ಪಕ್ಷಕ್ಕೆ ಮುಸ್ಲಿಮರ ಅಗತ್ಯವಿದೆಯೇ ಹೊರತು ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷದ ಅಗತ್ಯವಿಲ್ಲ

ಕಾಂಗ್ರೆಸ್‌ ನಂಬಿಕೊಂಡು ಮುಸ್ಲಿಂ ಸಮುದಾಯ ಅನ್ನ ತಿನ್ನುತ್ತಿದೆ ಎಂದು ಭಾವಿಸಿದರೆ ಅದು ತಪ್ಪು

ಇಡೀ ಸಮುದಾದ ನಸೀರ್‌, ಜಬ್ಬಾರ್‌ ಹಿಂದಿದೆ ಎಂದು ಸುರ್ಜೇವಾಲಾ, ಡಿಕೆಶಿ ಅವರಿಗೆ ಗೊತ್ತಿಲ್ಲವೇ?

ಅನಗತ್ಯ ಕ್ರಮ ಹಿಂಪಡೆದೇ ಇದ್ದಲ್ಲಿ ಬೀದಿಗಿಳಿದು ಹೋರಾಟ. 2028ರ ಚುನಾವಣೆಯಲ್ಲಿ ಪಕ್ಷಕ್ಕೆ ಪಾಠ

ಉಲಮಾಗಳು ಕಾಂಗ್ರೆಸ್‌ ವಿರುದ್ಧ ನಿಲ್ಲುವಂತೆ ಆದೇಶಿಸಿದರೆ ಯಾವ ಮುಸ್ಲಿಂ ಓಟು ಕೊಡುತ್ತಾನೆ?

ಎಸ್‌ಎಸ್‌ಎಂ ವಿರುದ್ಧ ಯಾಕೆ ಕ್ರಮ ಇಲ್ಲ?

ಟಿಕೆಟ್‌ ಘೋಷಣೆ ಆಗುವುದಕ್ಕೂ ಮೊದಲೇ ಹೋಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಮಲ್ಲಿಕಾರ್ಜುನ್‌ ಮತ್ತವರ ಕುಟುಂಬದ ವಿರುದ್ಧ ಏಕೆ ಹೈಕಮಾಂಡ್‌ ಕ್ರಮಕೈಗೊಂಡಿಲ್ಲ? 2023ರಲ್ಲಿ ಶಿವಮೊಗ್ಗದಲ್ಲಿ ಕುಳಿತು ಯಡಿಯೂರಪ್ಪ ಅವರ ಮಗ ರಾಘವೇಂದ್ರ ಪರ ಮತ ಹಾಕುವಂತೆ ಹೇಳಿದ್ದ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಮುಸ್ಲಿಂ ನಾಯಕರು ಕಾಂಗ್ರೆಸ್‌ಗೆ ಪ್ರಶ್ನೆ ಹಾಕಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಮೋದಿ ಉಗ್ರ’ ಹೇಳಿಕೆ: ಖರ್ಗೆ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
ಸಾರಿಗೆ ನಿಗಮಗಳ ಈಗಿನ ಸ್ಥಿತಿಗೆ ಬಿಜೆಪಿಯೇ ಕಾರಣ: ರಾಮಲಿಂಗಾರೆಡ್ಡಿ ವಾಗ್ದಾಳಿ