ಡಿಕೆಶಿ ಮನೆ ದೇವರೇ ಸುಳ್ಳು ; ನಿಖಿಲ್‌ ವಾಗ್ದಾಳಿ

Published : Sep 08, 2025, 08:34 AM IST
Nikhil kumaraswamy

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಗಾಳಿಯಲ್ಲಿ ಗುಂಡು ಹೊಡೆಯೋ ಅಭ್ಯಾಸ. ಅವರ ಆರೋಪಗಳೆಲ್ಲ ಸುಳ್ಳು. ಸುಳ್ಳೇ ಅವರ ಮನೆ ದೇವರು - ನಿಖಿಲ್ ಕುಮಾರಸ್ವಾಮಿ

 ಬೆಂಗಳೂರು :  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಗಾಳಿಯಲ್ಲಿ ಗುಂಡು ಹೊಡೆಯೋ ಅಭ್ಯಾಸ. ಅವರ ಆರೋಪಗಳೆಲ್ಲ ಸುಳ್ಳು. ಸುಳ್ಳೇ ಅವರ ಮನೆ ದೇವರು. ನಾವೇನಾದರೂ ಜಮೀನು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಆ ಜಮೀನನ್ನು ರೈತರಿಗೆ ದಾನ ನೀಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಮಾಗಡಿ ಮುಖ್ಯರಸ್ತೆಯ ತಾವರೆಕೆರೆ ಹಾಗೂ ಪೀಣ್ಯ ದಾಸರಹಳ್ಳಿಯಲ್ಲಿ ಭಾನುವಾರ ಪ್ರತ್ಯೇಕವಾಗಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಜೆಡಿಎಸ್‌ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮಿಸ್ಟರ್ ಶಿವಕುಮಾರ್ ಅವರೇ, ಸುಳ್ಳು ನಿಮ್ಮನೆ ದೇವರು. ವಿಷಯ ತಿಳಿದುಕೊಂಡು ಮಾತನಾಡಿ. ರಾಮನಗರ ಜಿಲ್ಲೆಗೆ ಹೋಗಿ ರೈತರ ಮುಂದೆ ಅಪಪ್ರಚಾರ ಮಾಡಿದರೆ ನಾವು ಕೈಕಟ್ಟಿ ಸುಮ್ಮನೆ ಕೂರುವುದಿಲ್ಲ. ಅನಿತಾ ಕುಮಾರಸ್ವಾಮಿ ಅವರು ಜಮೀನು ಪರಿಹಾರ ಕೇಳಿ ಅರ್ಜಿ ಹಾಕಿದರೆ, ಆ ಜಮೀನನ್ನು ರೈತರಿಗೆ ಹಾಗೂ ಬಡವರಿಗೆ ದಾನ ಮಾಡುತ್ತೇವೆ ಎಂದು ಗುಡುಗಿದರು.

ಶಿವಕುಮಾರ್ ಅವರೇ ನಾವು ಯಾವುದೇ ಶಿಕ್ಷಣ ಸಂಸ್ಥೆ, ದೊಡ್ಡ ದೊಡ್ಡ ಮಾಲ್ ಗಳನ್ನು ಕಟ್ಟಿಕೊಂಡಿಲ್ಲ. ಕಂಡ ಕಂಡವರ ಜಮೀನಿಗೆ ಹೋಗಿಲ್ಲ. ಇನ್ನು ಬಹಳ ವಿಷಯವಿದ್ದು, ರಾಮನಗರಕ್ಕೆ ಬಂದು ಉತ್ತರ ಕೊಡುತ್ತೇನೆ. ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಎಷ್ಟು ಎಕರೆ ಜಮೀನು ಇದೆ ಎನ್ನುವುದು ಶಿವಕುಮಾರ್‌ಗೆ ಗೊತ್ತಿಲ್ಲ. ಅವರಿಗೆ ಗಾಳಿಯಲ್ಲಿ ಗುಂಡು ಹೊಡೆಯುವ ಅಭ್ಯಾಸ ಎಂದು ಲೇವಡಿ ಮಾಡಿದರು.

ಕಮಿಷನ್‌ಗಾಗಿ ಟನಲ್‌ ರಸ್ತೆ:

ಕಮಿಷನ್‌ಗಾಗಿ ಡಿ.ಕೆ.ಶಿವಕುಮಾರ್‌ ಟನಲ್‌ ರೋಡ್‌ ಕಾಮಗಾರಿ ಮಾಡುತ್ತಿದ್ದಾರೆ. ಟೋಲ್‌ ಜಾಸ್ತಿ ಇರುವ ರಸ್ತೆಯಲ್ಲಿ ಶ್ರೀಮಂತರಷ್ಟೇ ಓಡಾಡಬೇಕು. ಈ ಸುರಂತ ರಸ್ತೆ ಯಾರಿಗೋಸ್ಕರ? ಡಿಕೆಶಿ ಅಣ್ಣಾ ಟನಲ್‌ ರಸ್ತೆಯಲ್ಲಿ ಎಷ್ಟು ಕಮಿಷನ್‌ ತಗೊಳ್ತಿದ್ದಿಯಣ್ಣಾ? ಯಾರಿಗೆ ಟೆಂಡರ್‌ ಕೊಡ್ತಿದ್ದೀಯಾಣ್ಣಾ? ಜನರ ಮುಂದೆ ಹೇಳಿ ಶ್ವೇತ ಪತ್ರ ಹೊರಡಿಸಿ ಎಂದು ಆಗ್ರಹಿಸಿದರು.

ಸಭೆಯಲ್ಲಿ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಎಚ್.ಕೆ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಜವರಾಯಿಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ರಮೇಶ್ ಗೌಡ, ಗೊವಿಂದರಾಜು ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನಿಖಿಲ್‌ಗೆ ಅದ್ಧೂರಿ ಸ್ವಾಗತ:

ಸಮಾವೇಶಕ್ಕೂ ಮುನ್ನ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿಗೆ ಯಶವಂತರ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರು ಹಾಗೂ ಮುಖಂಡರು ಕ್ರೇನ್‌ ಮುಖಾಂತರ ಬೃಹತ್‌ ಗಾತ್ರದ ಹೂವಿನ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಿದರು. ನೂರಾರು ಯುವಕರು ಪ್ರಮುಖ ರಸ್ತೆಯಲ್ಲಿ ಬೈಕ್‌ ರಾಲಿ ನಡೆಸಿದರು. ಈ ಸಮಾವೇಶದ ಬಳಿಕ ಸಂಜೆ ದಾಸರಹಳ್ಳಿ ಹೆಸರಘಟ್ಟ ರಸ್ತೆಯ ಬೆಂಗಳೂರು ಪಾಟೀದಾರ್‌ ಸಮಾಜದ ಸಮುದಾಯ ಭವನದಲ್ಲಿ ‘ಜನರೊಂದಿಗೆ ಜನತಾದಳ’ ಜೆಡಿಎಸ್‌ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಕಾರ್ಯಕರ್ತರ ಸಮಾವೇಶ ನಡೆಸಿದರು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಕೋಕಾ’ ಸೇರಿಸದಿದ್ದರೆ ಈ ಬಿಲ್‌ ಹಲ್ಲಿಲ್ಲದ ಹಾವು
ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಉದ್ದೇಶ ಇಲ್ಲ