ಕನ್ನಡಪ್ರಭ ವಾರ್ತೆ ಮುಳಬಾಗಿಲು
ಶಾಲೆ, ದೇವಾಲಯ, ಹಾಲು ವಿಷಯಗಳಲ್ಲಿ ಯಾರೂ ಸಹ ಶಕುನಿಯ ರಾಜಕೀಯ ಮಾಡಬೇಡಿ, ಈಗ ತಾನೆ ಮೊಳಕೆ ಒಡೆದಿರುವ ಬೀಜಗಳು ಮರವಾಗಿದ್ದೇವೆ ಎಂಬ ಭಾವನೆ ಇಟ್ಟುಕೊಂಡು ಕುತಂತ್ರ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಶಾಸಕ ಸಮೃದ್ಧಿ ವಿ. ಮಂಜುನಾಥ್ ಸಲಹೆ ನೀಡಿದರು.ತಾಲೂಕಿನ ಅಗರ, ಭೋವಿ ಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಲಿಗಳಂತೆ ವರ್ತನೆ ಮಾಡಿ ರಾಜಕೀಯ ಮಾಡುವುದು ತುಂಬಾ ಸುಲಭ ಇರಬಹುದು. ಆದರೆ ಇಲಿಗಳ ಮೇಲೆ ಬೆಕ್ಕು ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದರು.
ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಬೇಡಯಾರೇ ಆಗಲಿ ಆರೋಗ್ಯಕರವಾದ ರಾಜಕೀಯ ಮಾಡಬೇಕೆ ವಿನಃ ಅಭಿವೃದ್ಧಿ ಕಾರ್ಯಗಳಿಗೆ ತಂಟೆ, ತಕರಾರು, ಟೀಕೆ ಮಾಡುವುದು ಮತ್ತಿತರದ ಕೆಲಸಗಳನ್ನು ಮಾಡುವುದು ಮೊದಲಿಗೆ ಕೈ ಬಿಡಬೇಕು ಎಂದರಲ್ಲದೆ, ಪ್ರತಿಯೊಬ್ಬ ಮನುಷ್ಯನಿಗೂ ಸಹ ಎರಡೆರಡು ಮುಖಗಳಿರುತ್ತವೆ ತಾಳ್ಮೆ ಸಹನೆ ಮಾನವಿಯತೆ ಎಲ್ಲವೂ ಸಹ ಒಂದಡೆಯಾದರೆ ಮತ್ತೊಂದೆಡೆ ಕೋಪವೂ ಇರುತ್ತದೆ. ಕೋಪದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬರಿ ಮಾತುಗಳು ಮಾತ್ರ ಖರ್ಚಾಗುತ್ತವೆಯ್ದೆ ಹೊರತು ಅಭಿವೃದ್ಧಿ ಆಗುವುದಿಲ್ಲ ಎಂದು ತಿಳಿಸಿದರು.
ನಾನು ಈ ತಾಲೂಕಿನ ಮೊದಲ ಪ್ರಜೆಯಾಗಿದ್ದೇನೆ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದರೆ ಶಾಸಕರ ಗಮನಕ್ಕೆ ಬರುವುದು ತರುವುದು ಇಲಾಖೆ ಅಧಿಕಾರಿಗಳ ಜವಾಬ್ದಾರಿ, ಇಲ್ಲಿನ ಗ್ರಾಮಕ್ಕೆ ದೇವಾಲಯದ ಅಭಿವೃದ್ಧಿಗೆ ಹಣ ನೀಡಲು ಚೆಕ್ ನೀಡಿದರೆ ಈ ಬಗ್ಗೆ ಪುಡಾರಿಗಳು ಅವಮಾನಿಸುವ ಕೆಲಸವನ್ನು ಮಾಡುತ್ತಿದ್ದಾರೆ, ಇದು ಸರಿಯಲ್ಲ ನಿಮ್ಮ ಪ್ರಕಾರ ಇದು ನಿಮಗೆ ಸರಿ ಇದ್ದರೆ ಮುಂದಿನ ದಿನಗಳಲ್ಲಿ ಇಂತಹ ಕೆಲಸಗಳಿಗೆ ನೀವೇ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.ದೇಗುಲ ದುರಸ್ತಿಗೆ ಕ್ರಮ
ಮುಳಬಾಗಿಲು ತಾಲೂಕು ದೇವಾಲಯಗಳ ನಾಡು ಎಂದು ಪ್ರಖ್ಯಾತಿ ಪಡೆದಿದೆ, ಆದ ಕಾರಣದಿಂದ ಅಗರ ಸೇರಿದಂತೆ ತಾಲೂಕಿನ ಕೆಲ ಪುರಾತನ ಕಾಲದ ೬ ತಲಾ ಒಂದೊಂದು ದೇವಾಲಯಗಳ ದುರಸ್ತಿಗೆ ಸುಮಾರು ೧೫ ಲಕ್ಷ ರು. ಹಣವನ್ನು ಸರ್ಕಾರದಿಂದ ಈಗಾಗಲೇ ಮಂಜೂರು ಮಾಡಿಸಲಾಗಿದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದೇವಾಲಯಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿಸುವುದಾಗಿ ಬರವಸೆ ನೀಡಿದರು.ಜೆಡಿಎಸ್ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಕಾರ್ಯದರ್ಶಿ ನಲ್ಲೂರು ರಘುಪತಿರೆಡ್ಡಿ, ಜಿ.ಪಂ ಮಾಜಿ ಸದಸ್ಯ ಬಿ.ವಿ.ಸಾಮೇಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಗೊಲ್ಲಹಳ್ಳಿ ಜಗದೀಶ್ ಇದ್ದರು.