ಮೊಳಕಾಲ್ಮುರು/ಚಿತ್ರದುರ್ಗ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸ್ವಪಕ್ಷದ ಶಾಸಕರುಗಳ ಅಸಮಾಧಾನ ಮುಂದುವರಿದಿದ್ದು, ಬಿ.ಆರ್ ಪಾಟೀಲ್, ರಾಜು ಕಾಗೆ ಬಳಿಕ ಮತ್ತೊಬ್ಬ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಾನು ಶಾಸಕನಾಗಿದ್ದುಕೊಂಡು ನಮ್ಮ ಗ್ರಾಮಗಳಲ್ಲಿ ಒಂದು ಚರಂಡಿ ಮಾಡಿಸುವುದಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲ’ ಎಂದು ಮೊಳಕಾಲ್ಮುರು ಕಾಂಗ್ರೆಸ್ ಶಾಸಕ ಎನ್.ವೈ.ಗೋಪಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ಕಣ್ಕುಪ್ಪೆಯಲ್ಲಿ ಸೋಮವಾರ ಖಾಸಗಿ ಕಂಪನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಶಾಸಕನಾದ ನನಗೆ ನನ್ನ ಕ್ಷೇತ್ರದ ಹಳ್ಳಿಗಳಲ್ಲಿ ಒಂದು ಚರಂಡಿ ಅಥವಾ ರಸ್ತೆ ಮಾಡಲು ಸಾಧ್ಯವಾಗುತ್ತಿಲ್ಲ.
ಒಂದು ಒಳ್ಳೆಯ ಶಾಲೆ ಕಟ್ಟಲು ಆಗ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಕಂಪನಿಯವರು ಇಲ್ಲಿಗೆ ಬಂದು ದೊಡ್ಡ ಫ್ಯಾಕ್ಟರಿ ಕಟ್ಟಿ ನಡೆಸುತ್ತಾರೆ ಎಂದರೆ ಅದು ನಮ್ಮ ಪುಣ್ಯ‘ ಎಂದರು. ಆ ಮೂಲಕ ಸರ್ಕಾರದಿಂದ ತಮಗೆ ಆಗುತ್ತಿರುವ ಅನುದಾನ ಕೊರತೆಯನ್ನು ಪರೋಕ್ಷವಾಗಿ ಹೊರ ಹಾಕಿದರು.