;Resize=(412,232))
ಬೆಂಗಳೂರು : ಜಂಟಿ ಅಧಿವೇಶನ ವೇಳೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು ರಾಜ್ಯಪಾಲರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಮಂಗಳವಾರ ವಿಧಾನಸೌಧದ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದ್ದಾರೆ.
ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಈ ವಿಷಯ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ 10.30ಕ್ಕೆ ಈ ಪ್ರತಿಭಟನೆ ನಡೆಯಲಿದೆ. ರಾಜ್ಯಪಾಲರು ಜಂಟಿ ಅಧಿವೇಶನ ಮುಗಿಸಿ ವಾಪಸ್ ಹೋಗುವ ಸಂದರ್ಭದಲ್ಲಿ ವಿಧಾನಸಭೆ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕರು ಬೆರಳು ತೋರಿಸಿ ಎಚ್ಚರಿಕೆ ನೀಡಿ ಅಪಮಾನ ಮಾಡಿದ್ದಾರೆ. ಧಿಕ್ಕಾರ ಕೂಗಿ ರಾಜ್ಯಪಾಲರಿಗೆ ಅಗೌರವ ತೋರಿದ್ದಾರೆ. ಹೀಗಾಗಿ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಎಸ್.ರವಿ, ವಿಧಾನಸಭಾ ಸದಸ್ಯರರಾದ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್ ಅವರನ್ನು ಕೂಡಲೇ ಅಮಾನತುಗೊಳಿಸಲು ಆಗ್ರಹಿಸಲಾಗುವುದು ಎಂದು ಹೇಳಿದರು.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆಗೆ ಫೈರಿಂಗ್ ಮಾಡಿದ ಹಾಗೂ ಮನೆ ಮಂದಿಯನ್ನು ಭಯಪಡಿಸಿದ ಬಳ್ಳಾರಿ ಶಾಸಕ ಭರತ್ ರೆಡ್ಡಿ ಅವರನ್ನು ಇನ್ನೂ ಬಂಧಿಸಿಲ್ಲ. ಈ ಫೈರಿಂಗ್ ಘಟನೆಯನ್ನು ಸಿಬಿಐ ತನಿಖೆಗೆ ಕೊಟ್ಟಿಲ್ಲ. ಮೊನ್ನೆ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅವರ ಮಾಡೆಲ್ ಹೌಸ್ಗೆ ಬೆಂಕಿ ಹಾಕಿ ಸುಟ್ಟು ಹಾಕಲಾಗಿದೆ. ಅಪ್ರಾಪ್ತರನ್ನು ಅಣಿಗೊಳಿಸಿ ಈ ಕೆಲಸ ಮಾಡಲಾಗಿದೆ. ಈ ಬಗ್ಗೆ ತನಿಖೆಗೊಳಪಡಿಸಬೇಕು. ಆ ಘಟನೆಯಲ್ಲಿ ಭಾಗಿಯಾದವರ ಬಂಧನಕ್ಕೆ ಒತ್ತಾಯಿಸುವುದಾಗಿ ಎನ್.ರವಿಕುಮಾರ್ ತಿಳಿಸಿದರು.
ವಿಬಿ ಜಿ ರಾಮ್ ಜಿ ಬಗ್ಗೆ ಮಂಗಳವಾರ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಹಳ್ಳಿಗಳು, ದೇಶಾದ್ಯಂತ ಇರುವ ಗ್ರಾಮಾಂತರ ಪ್ರದೇಶದ ಜನರಿಗೆ, ಕೂಲಿ ಕಾರ್ಮಿಕರಿಗೆ ಹಿಂದಿಗಿಂತಲೂ ಹೆಚ್ಚು ಉದ್ಯೋಗ ಕೊಡಲು ಕಾಯ್ದೆ ಮಾರ್ಪಾಡು ಮಾಡಲಾಗಿದೆ. ಆದರೂ, ಕಾಂಗ್ರೆಸ್ಸಿನವರು ಇದು ಉದ್ಯೋಗ ಕಸಿಯುವ ಯೋಜನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಸುಳ್ಳು ಉತ್ಪಾದನಾ ಪಕ್ಷವಾದ ಕಾಂಗ್ರೆಸ್ ವಿರುದ್ಧ ನಾವೂ ಪ್ರತಿಭಟನೆ ನಡೆಸಲಿದ್ದೇವೆ ಎಂದು ರವಿಕುಮಾರ್ ಹೇಳಿದರು.
ಜಂಟಿ ಅಧಿವೇಶನದ ವೇಳೆ ಕಾಂಗ್ರೆಸ್ ಸದಸ್ಯರಿಂದ ಗೌರ್ನರ್ಗೆ ಅಡ್ಡಿ ಯತ್ನ
ಗೆಹಲೋತ್ ಕಡೆಗೆ ಕೈಬೆರಳು ತೋರಿಸಿ, ಧಿಕ್ಕಾರ ಕೂಗಿದ್ದಾಗಿ ಬಿಜೆಪಿ ಕಿಡಿ
ಜೊತೆಗೆ ಆಡಳಿತದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ ಎಂದು ಆಕ್ರೋಶ
ಇದನ್ನು ವಿರೋಧಿಸಿ ವಿಧಾನಸೌಧ ಬಳಿ ದೋಸ್ತಿ ಪಕ್ಷದ ನಾಯಕರ ಪ್ರತಿಭಟನೆ