ಯತೀಂದ್ರ ಅವರೇ ನಮ್ಮ ಹೈಕಮಾಂಡ್‌ : ಡಿ.ಕೆ.ಶಿವಕುಮಾರ್‌ ಟಾಂಗ್‌

KannadaprabhaNewsNetwork |  
Published : Feb 07, 2026, 03:00 AM ISTUpdated : Feb 07, 2026, 04:30 AM IST
DK Shivakumar

ಸಾರಾಂಶ

‘ಮುಂದಿನ ಐದು ವರ್ಷ ನನ್ನ ತಂದೆಯವರೇ ಮುಖ್ಯಮಂತ್ರಿ ಆಗಿರುತ್ತಾರೆ, ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ’ ಎಂಬ ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಮಂಗಳೂರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ.

  ಮಂಗಳೂರು :  ‘ಮುಂದಿನ ಐದು ವರ್ಷ ನನ್ನ ತಂದೆಯವರೇ ಮುಖ್ಯಮಂತ್ರಿ ಆಗಿರುತ್ತಾರೆ, ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ’ ಎಂಬ ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಮಂಗಳೂರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ‘ಮುಂದಿನ ಐದು ವರ್ಷಕ್ಕೆ ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕಾರ ಮಾಡೋಣ. ಅವರೇ ಹೈಕಮಾಂಡ್ ಎಂಬಂತೆ ಹೇಳಿಕೆ ನೀಡಿರುವಾಗ ಅವರನ್ನೇ ಹೈಕಮಾಂಡ್ ಎಂದು ಸ್ವೀಕಾರ ಮಾಡೋಣ’ ಎಂದು ತೀಕ್ಷ್ಣ ರೀತಿಯಲ್ಲಿ ಟಾಂಗ್‌ ನೀಡಿದರು.

ಅಧಿಕಾರ ಒಪ್ಪಂದದ ಬಗ್ಗೆ ಸ್ಪಷ್ಟನೆ ಬೇಕು ಎಂಬ ಶಾಸಕ ಬಸವರಾಜು ಅವರ ಹೇಳಿಕೆಗೆ, ‘ಬಸವರಾಜು, ಯತೀಂದ್ರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಏನೇ ಪ್ರತಿಕ್ರಿಯೆ ನೀಡುವುದಿದ್ದರೂ ದೆಹಲಿಯವರು ಪ್ರತಿಕ್ರಿಯೆ ನೀಡಬೇಕು’ ಎಂದು ಡಿಕೆಶಿ ತಿಳಿಸಿದರು.

ಕಾಂಗ್ರೆಸ್ಸಲ್ಲಿ ಯತೀಂದ್ರ ಕಿಚ್ಚು

5 ವರ್ಷ ಕಾಲವೂ ಸಿದ್ದು ಸಿಎಂ । ಹೈಕಮಾಂಡ್‌ನಿಂದಲೂ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ- ನಾಯಕತ್ವ ಬದಲಾವಣೆ ಪ್ರಯತ್ನಗಳಿಗೆ ವರಿಷ್ಠರು ಸೊಪ್ಪು ಹಾಕಿಲ್ಲ: ಸಿದ್ದು ಪುತ್ರ

ನಾಯಕತ್ವ ಗೊಂದಲಈಗಾಗಲೇ ಇತ್ಯರ್ಥ

ಸಿಎಂ ಬದಲಾವಣೆ ಎಂಬುದು ಸೆಟಲ್ಡ್‌ (ಬಗೆಹರಿದ) ವಿಚಾರ. ಕಾಂಗ್ರೆಸ್‌ನಲ್ಲಿ ಈಗ ಎಲ್ಲೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಮ್ಮಲ್ಲಿ ಈಗ ಯಾವ ಗೊಂದಲಗಳೂ ಇಲ್ಲ. 

- ಯತೀಂದ್ರ ಸಿದ್ದರಾಮಯ್ಯ, ಎಂಎಲ್‌ಸಿ

  ಮೈಸೂರು :  ‘ಐದು ವರ್ಷವೂ ನಮ್ಮ ತಂದೆಯವರೇ ಸಿಎಂ. ಇದು ಈಗ ಸೆಟಲ್ಡ್‌ ವಿಚಾರ. ಹೈಕಮಾಂಡ್ ಈ ಬಗ್ಗೆ ನಮ್ಮ ತಂದೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಾಯಕತ್ವ ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ವರದಿಗಳ ನಡುವೆಯೇ ಯತೀಂದ್ರ ನೀಡಿರುವ ಈ ಹೇಳಿಕೆ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರೋ ಕೆಲವರು ನಾಯಕತ್ವ ಬದಲಾವಣೆ ಬಗ್ಗೆ ಪ್ರಯತ್ನ ಮಾಡಿದ್ದರು. ಆ ಪ್ರಯತ್ನಕ್ಕೆ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಅಲ್ಲಿಗೆ ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿ ಅಧಿಕಾರ ನಡೆಸುತ್ತಾರೆ ಎಂಬುದು ಸ್ಪಷ್ಟ’ ಎಂದು ಹೇಳಿದರು.ಪಕ್ಷದಲ್ಲಿ ಈಗ ಎಲ್ಲೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಮ್ಮಲ್ಲಿ ಈಗ ಯಾವ ಗೊಂದಲಗಳೂ ಇಲ್ಲ ಎಂದರು.

ತಾಯಿಗೆ ಕ್ಲೀನ್‌ಚಿಟ್ ಸಿಕ್ಕಿದ್ದಕ್ಕೆ ಸಂತೋಷ:

ಮುಡಾ ಪ್ರಕರಣದಲ್ಲಿ ನ್ಯಾಯಾಲಯದಿಂದ ಸಿಎಂ ಕುಟುಂಬಕ್ಕೆ ಕ್ಲೀನ್‌ಚಿಟ್ ಸಿಕ್ಕ ವಿಚಾರಕ್ಕೆ ಪ್ರತಿಕ್ರಿಯಿಸಿ, ದೂರುದಾರರು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಆ ಪ್ರಕ್ರಿಯೆ ಮುಗಿಯಲಿ. ನಂತರ ಸೈಟ್ ವಾಪಸ್ ಪಡೆಯುವ ಬಗ್ಗೆ ನಮ್ಮ ತಾಯಿ ತೀರ್ಮಾನ ಮಾಡುತ್ತಾರೆ. ಸದ್ಯಕ್ಕಂತೂ ಆ ವಿಚಾರವನ್ನು ನಾವು ಚರ್ಚೆ ಮಾಡಿಲ್ಲ. 

ಪ್ರಕರಣದಲ್ಲಿ ಇನ್ನೂ ಕಾನೂನು ಪ್ರಕ್ರಿಯೆಗಳು ಬಾಕಿ ಇವೆ. ಮೊದಲು ಅವೆಲ್ಲಾ ಮುಗಿಯಲಿ. ಸದ್ಯಕ್ಕೆ ನಮ್ಮ ತಾಯಿಗೆ ಈ ಪ್ರಕರಣದಿಂದ ಕ್ಲೀನ್ ಚೀಟ್ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಬ್ಯಾಲೇಟ್ ಪೇಪರ್ ಬರಲಿ:ಎಲ್ಲಾ ಚುನಾವಣೆಗಳಲ್ಲೂ ಇವಿಎಂ ರದ್ದಾಗಬೇಕು. ಬ್ಯಾಲೆಟ್ ಪೇಪರ್ ಬಳಕೆ ಮತ್ತೆ ಬರಬೇಕು.

 ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್ ಬಳಸಲು ನಿರ್ಧರಿಸಲಾಗಿದೆ. ಇದೇ ರೀತಿ ವಿಧಾನಸಭಾ ಚುನಾವಣೆಗಳಲ್ಲೂ ಬ್ಯಾಲೆಟ್ ಪೇಪರ್ ಬಳಕೆಯಾಗಬೇಕು. ಇವಿಎಂ ಮತಯಂತ್ರದಲ್ಲಿ ಸಾಕಷ್ಟು ದೋಷಗಳಿದೆ. ಇವಿಎಂನ್ನು ಹ್ಯಾಕ್ ಮಾಡಬಹುದು. ದೋಷಪೂರಿತ ವ್ಯವಸ್ಥೆ ಇದ್ದ ಮೇಲೆ ಅದನ್ನು ಯಾಕೆ ಇಟ್ಟುಕೊಳ್ಳಬೇಕು. ಮೊದಲಿನ ರೀತಿ ಈಗ ಬ್ಯಾಲೆಟ್ ಬಾಕ್ಸ್ ಗಳನ್ನು ಕಳ್ಳತನ ಮಾಡಲು ಆಗಲ್ಲ. ನಮ್ಮ ವ್ಯವಸ್ಥೆ ಬಹಳ ಬಿಗಿ ಇದೆ. ಆದರೆ, ತಾಂತ್ರಿಕವಾಗಿ ಕಳ್ಳತನ ಮಾಡಲು ಇವಿಎಂನಲ್ಲಿ ಸಾಧ್ಯವಿದೆ. ಈ ಎಲ್ಲಾ ಕಾರಣದಿಂದ ಇವಿಎಂ ರದ್ದಾಗಬೇಕು ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನನ್ನ ಸಮಾಧಿ ಅಗೆಯುವುದು ಕಾಂಗ್ರೆಸ್‌ಗೆ ಎಂದೂ ಅಸಾಧ್ಯ : ಮೋದಿ
ಮಾಲೂರು ಕಾಂಗ್ರೆಸ್‌ ಶಾಸಕ ನಂಜೇಗೌಡ 250 ಮತ ಪಡೆದು ಗೆಲುವು