ಬೆಂಗಳೂರು : ಶಾಸಕಿಯಾದಾಗ ಭ್ರಷ್ಟಾಚಾರ ರಹಿತವಾಗಿ ಮಾಡಿದ ಕೆಲಸ, ಕೊರೋನಾ ಅವಧಿಯಲ್ಲಿ ಜನರಿಗೆ ಆಸ್ಪತ್ರೆಗೆ ದಾಖಲಿಸಿದ್ದು, ಸಂಕಷ್ಟದಲ್ಲಿದ್ದ ಜನರಿಗೆ ಆಹಾರ ಕಿಟ್ ವಿತರಿಸಿದ್ದನ್ನು ಜನರು ಈಗಲೂ ಸ್ಮರಿಸುತ್ತಿದ್ದಾರೆ. ಅವುಗಳೇ ಈ ಬಾರಿ ನನ್ನ ಗೆಲುವಿಗೆ ಕಾರಣವಾಗಲಿವೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ತಿಳಿಸಿದರು.
ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಮನೆಗೆ ಭೇಟಿ ನೀಡಿ ಮತಯಾಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸೌಮ್ಯಾ ರೆಡ್ಡಿ, ಪ್ರಚಾರಕ್ಕೆ ತೆರಳಿದಲ್ಲೆಲ್ಲ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರು ತಮ್ಮ ಮನೆ ಮಗಳಂತೆ ನೋಡುತ್ತಿದ್ದಾರೆ. ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಸೇರಿದಂತೆ ಬಸವನಗುಡಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಚಾರಕ್ಕೆ ತೆರಳಿದಲ್ಲೆಲ್ಲ ಜನರು ನಿಮಗೇ ಮತ ಚಲಾಯಿಸುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. ಇವೆಲ್ಲವೂ ಆಶಾದಾಯವಾಗಿದೆ ಎಂದರು.
ದಕ್ಷಿಣ ಕ್ಷೇತ್ರದ ಅಭಿವೃದ್ಧಿಯಾಗಬೇಕು, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವವರು ಆಯ್ಕೆಯಾಗಬೇಕು ಎಂಬ ಭಾವನೆ ಜನರಲ್ಲಿದೆ. ಅದನ್ನು ಪ್ರಚಾರಕ್ಕೆ ಹೋದಾಗ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕೊರೋನಾ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಶಾಸಕಿಯಾಗಿರದಿದ್ದರೂ ಸ್ಪಂದಿಸಿದ್ದೀರಾ. ಇದು ನಿಮ್ಮ ಚುನಾವಣೆಯಲ್ಲಿ ನಮ್ಮ ಚುನಾವಣೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಜಯನಗರ ಶಾಸಕಿಯಾಗಿದ್ದಾಗ ಭ್ರಷ್ಟಚಾರ ರಹಿತವಾಗಿ ಕೆಲಸ ಮಾಡಿದ್ದೇನೆ. ಅದು ಜನರಿಗೂ ತಿಳಿದಿದೆ. ಜನಪ್ರತಿನಿಧಿಯಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ನೀವು ತೋರಿಸಿದ್ದೀರಿ ಎಂದೂ ಮತದಾರರು ಹೇಳುತ್ತಿದ್ದಾರೆ. ಅಲ್ಲದೆ, ಜನರ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತಿದ್ದೇನೆ ಹಾಗೂ ಅದು ಪರಿಹಾರ ಆಗುವವರೆಗೆ ಹೋರಾಟ ಮಾಡಿದ್ದೇನೆ. ಜನರ ಕೆಲಸವಷ್ಟೇ ನನಗೆ ಮುಖ್ಯವಾಗಿದ್ದು, ಬೇರೆ ಯಾವುದೂ ನನಗೆ ಮುಖ್ಯವಲ್ಲ. ಅದನ್ನು ಸಂಸದೆಯಾಗಿಯೂ ಮಾಡುವ ಆಶಯ ಹೊಂದಿದ್ದು, ಕ್ಷೇತ್ರದ ಮತದಾರರು ಅದಕ್ಕೆ ಅವಕಾಶ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಗೆಲುವಿಗೆ ನಾನು ಯಾವುದೇ ತಂತ್ರವನ್ನೂ ರೂಪಿಸಿಲ್ಲ. ಜನರ ಆಶೀರ್ವಾದವೇ ನಮ್ಮ ತಂತ್ರವಾಗಿದೆ. ಕಾಂಗ್ರೆಸ್ ಪಕ್ಷದಿಂದ ಅತಿಹೆಚ್ಚು ಮಹಿಳೆಯರಿಗೆ ಟಿಕೆಟ್ ನೀಡಿದೆ. ಅದನ್ನೂ ಜನರು ಗಮನಿಸಿದ್ದು, ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಪಕ್ಷ ಕಾಂಗ್ರೆಸ್ ಎಂಬುದು ಅವರ ಅಭಿಪ್ರಾಯವಾಗಿದೆ. ಅದೆಲ್ಲವೂ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗಲಿದೆ ಎಂದರು.
ಕಳೆದ 10 ವರ್ಷಗಳಿಂದ ರಾಜ್ಯಕ್ಕಾಗಿ ಏನೂ ಕೆಲಸ ಮಾಡದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ರಾಜ್ಯಕ್ಕೆ ಮತ ಕೇಳಲು ಬರುತ್ತಿದ್ದಾರೆ. ಕೆಲಸ ಮಾಡಬೇಕು ಎನ್ನುವ ಮನಸ್ಸಿದ್ದಿದ್ದರೆ 10 ವರ್ಷ ಬೇಕಿರಲಿಲ್ಲ. 5 ವರ್ಷದಲ್ಲೇ ಮಾಡಿ ತೋರಿಸಬಹುದಿತ್ತು. ಜನರಿಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬೇಸರವಿದೆ. ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ಕಾಂಗ್ರೆಸ್ ಪರ ಅಲೆಯಿದ್ದು, ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.ಒಂದೇ ದಿನ ನಾಲ್ಕುಕ್ಷೇತ್ರಗಳಲ್ಲಿ ಪ್ರಚಾರ
ಬಿಸಲಿನ ನಡುವೆಯೂ ಸೌಮ್ಯಾ ರೆಡ್ಡಿ ಶನಿವಾರ ಒಂದೇ ದಿನ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು. ಬೆಳಗ್ಗೆ ಬೊಮ್ಮನಹಳ್ಳಿ, ಜಯನಗರ, ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉದ್ಯಾನಗಳಿಗೆ ಭೇಟಿ ನೀಡಿ ಮತಯಾಚಿಸಿದರು. ನಂತರ ಸಂಜೆಯವರೆಗೆ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಪ್ರಚಾರ ನಡೆಸಿದರು.