ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಪ್ರತಿಭಟನೆ । ಮತಗಳ್ಳತನ ವಿರುದ್ಧ ಬೆಂಗಳೂರಲ್ಲಿ ಆ.4ಕ್ಕೆ ರಾಹುಲ್‌ ಹೋರಾಟ

KannadaprabhaNewsNetwork |  
Published : Jul 30, 2025, 12:45 AM IST
ರಾಹುಲ್‌ ಗಾಂಧಿ | Kannada Prabha

ಸಾರಾಂಶ

‘ಭಾರತದಲ್ಲಿ ಚುನಾವಣೆಯನ್ನೇ ಕದಿಯಲಾಗುತ್ತಿದೆ. ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಮತಗಳ್ಳತನ ನಡೆದಿದೆ’ ಎಂದು ಆರೋಪಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಇದರ ವಿರುದ್ಧದ ಹೋರಾಟಕ್ಕೆ ರಾಜಧಾನಿ ಬೆಂಗಳೂರಿನಿಂದಲೇ ಚಾಲನೆ ನೀಡಲಿದ್ದಾರೆ.

- ಕಾಲ್ನಡಿಗೆಯೋ? ಧರಣಿಯೋ? ಇಂದು ನಿರ್ಧಾರ- ಚು. ಆಯೋಗ ವಿರುದ್ಧ ಕರ್ನಾಟಕದಿಂದ ಸಮರ

===

ಜು.23: ಕರ್ನಾಟಕದ ಕ್ಷೇತ್ರವೊಂದರಲ್ಲಿ ‘ಮತಗಳ್ಳತನ’ ನಡೆದಿದೆ ಎಂದು ಕಳೆದ ವಾರ ಗಂಭೀರ ಆರೋಪ ಮಾಡಿದ್ದ ರಾಹುಲ್‌ ಗಾಂಧಿ

ಜು.24: ಚುನಾವಣಾ ಆಯೋಗ ಕೂಡ ಮತಗಳ್ಳತನದಲ್ಲಿ ಶಾಮೀಲಾಗಿದ್ದು, ಶೇ.100ರಷ್ಟು ದಾಖಲೆ ಇವೆ ಎಂದು ಪುನರುಚ್ಚರಿಸಿದ್ದ ರಾಹುಲ್‌

ಜು.24: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ರೀತಿ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಸಿರುವುದಾಗಿ ಹೇಳಿಕೊಂಡಿದ್ದ ಡಿಸಿಎಂ ಡಿಕೆಶಿ

ಜು.25: ರಾಹುಲ್‌ ಹೇಳುತ್ತಿರುವ ಚುನಾವಣಾ ಅಕ್ರಮ ನಡೆದಿರುವುದು ಬೆಂಗಳೂರು ಸೆಂಟ್ರಲ್‌ ವ್ಯಾಪ್ತಿಯ ಮಹದೇವಪುರದಲ್ಲಿ ಎಂದಿದ್ದ ಸಿಎಂ

ಜು.25: ರಾಹುಲ್‌ ಗಾಂಧಿ ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿದ್ದ ರಾಜ್ಯದ ಹಲವು ಸಚಿವರು ಹಾಗೂ ಕಾಂಗ್ರೆಸ್ಸಿನ ಶಾಸಕರು

--ಕನ್ನಡಪ್ರಭ ವಾರ್ತೆ ಬೆಂಗಳೂರು

‘ಭಾರತದಲ್ಲಿ ಚುನಾವಣೆಯನ್ನೇ ಕದಿಯಲಾಗುತ್ತಿದೆ. ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಮತಗಳ್ಳತನ ನಡೆದಿದೆ’ ಎಂದು ಆರೋಪಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಇದರ ವಿರುದ್ಧದ ಹೋರಾಟಕ್ಕೆ ರಾಜಧಾನಿ ಬೆಂಗಳೂರಿನಿಂದಲೇ ಚಾಲನೆ ನೀಡಲಿದ್ದಾರೆ.

ಕಾಂಗ್ರೆಸ್‌ ಪಕ್ಷವು ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಗಸ್ಟ್‌ 4ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಪಕ್ಷದ ರಾಷ್ಟ್ರ ಹಾಗೂ ರಾಜ್ಯದ ಹಲವು ನಾಯಕರು ಭಾಗವಹಿಸಲಿದ್ದಾರೆ.

ಮಹಾರಾಷ್ಟ್ರದಲ್ಲೂ ರಾಹುಲ್‌ ಗಾಂಧಿ ‘ಮತಗಳ್ಳತನ’ ಆರೋಪ ಮಾಡಿದ್ದರು. ಆದರೆ ಅವರೇ ಹೋರಾಟಕ್ಕೆ ಧುಮುಕಿರಲಿಲ್ಲ. ಇದೀಗ ಕರ್ನಾಟಕ ಮೂಲಕ ಹೋರಾಟ ಸಂಘಟಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಇಂದು ಸಭೆ:

ಈ ಪ್ರತಿಭಟನೆ ಯಶಸ್ವಿಗೊಳಿಸುವ ಸಂಬಂಧ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಬುಧವಾರ ಸಂಜೆ 4.30ಕ್ಕೆ ಕ್ವೀನ್ಸ್‌ ರಸ್ತೆಯ ಪಕ್ಷದ ಕಚೇರಿಯಲ್ಲಿ ಬೆಂಗಳೂರು ನಗರದ 5 ಡಿಸಿಸಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ದಕ್ಷಿಣ (ರಾಮನಗರ), ಮಂಡ್ಯ ಜಿಲ್ಲೆಗಳ ಮುಖಂಡರುಗಳ ಸಭೆ ಕರೆದಿದ್ದಾರೆ.

ಈ ಸಭೆಯಲ್ಲಿ ಪ್ರತಿಭಟನೆ ಸ್ವರೂಪ ನಿರ್ಧಾರವಾಗಲಿದೆ. ಮೂಲಗಳ ಪ್ರಕಾರ, ಈ ಪ್ರತಿಭಟನೆಯ ಜತೆಗೆ ಮಹದೇವಪುರದಿಂದ ಚುನಾವಣಾ ಆಯೋಗದ ಕಚೇರಿವರೆಗೂ ಪಾದಯಾತ್ರೆ ನಡೆಸುವ ಚಿಂತನೆಯಿದೆ ಎನ್ನಲಾಗಿದೆ. ಆದರೆ, ಮಹದೇವಪುರದಿಂದ ಆಯುಕ್ತರ ಕಚೇರಿಯವರೆಗೂ ಪಾದಯಾತ್ರೆ ನಡೆಸಲು ಸುದೀರ್ಘ ಸಮಯ ಬೇಕಾದ್ದರಿಂದ ಅದು ಅಗತ್ಯವಿಲ್ಲ, ಕೇವಲ ಪ್ರತಿಭಟನೆ ಸಾಕು ಎಂಬ ಅಭಿಪ್ರಾಯವನ್ನು ಹೈಕಮಾಂಡ್ ನಾಯಕರು ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ವಿಚಾರ ಈ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಮೂಲಗಳು ಹೇಳಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು