ಬೆಂಗಳೂರು : ಯುವಜನತೆಯ ಪ್ರತಿ ಉಸಿರಿನಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಲು ಆರ್.ಎಸ್.ಎಸ್. ನಿರಂತರವಾಗಿ ಶ್ರಮಿಸುತ್ತಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಗೋವಿಂದರಾಜನಗರ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯು ನಗರದ ಬಿಜಿಎಸ್ ಆಟದ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ‘ಹಿಂದೂ ಸಮಾಜೋತ್ಸವ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತವು ಹಿಂದೂ ರಾಷ್ಟ್ರ ಎಂಬ ಸತ್ಯವನ್ನು ಡಾ. ಹೆಡ್ಗೆವಾರ್ ಅವರು ದಶಕಗಳ ಹಿಂದೆಯೇ ಸಾರಿದ್ದರು. ಹಿಂದೂ ಧರ್ಮವು ರಾಮ ಮತ್ತು ಕೃಷ್ಣರ ಕಾಲಕ್ಕಿಂತಲೂ ಪುರಾತನವಾದುದು. ರಾಜ-ಮಹಾರಾಜರು ಇಲ್ಲದ ಸಂದರ್ಭದಲ್ಲೂ ಈ ದೇಶವನ್ನು ಧರ್ಮವೇ ಸುಭದ್ರವಾಗಿ ಕಾಪಾಡಿಕೊಂಡು ಬಂದಿದೆ. ಕರ್ನಾಟಕದಾದ್ಯಂತ 5 ಸಾವಿರಕ್ಕೂ ಹೆಚ್ಚು ಸಮಾಜೋತ್ಸವಗಳು ನಡೆಯುತ್ತಿದ್ದು, ಇದು ಹಿಂದೂ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ ಎಂದು ಹೇಳಿದರು.
ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮವು ಭವ್ಯ ಹಾಗೂ ಶ್ರೇಷ್ಠವಾದುದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತವು ಸಾಧು-ಸಂತರು ಮತ್ತು ಪುಣ್ಯ ಕ್ಷೇತ್ರಗಳ ನೆಲೆಬೀಡಾಗಿದೆ. ಧರ್ಮ ರಕ್ಷಣೆಗಾಗಿ ಪ್ರತಿಯೊಬ್ಬರೂ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ರಾಮಕೃಷ್ಣ ಮಠದ ಮಾತಾ ವಿವೇಕಾಮಯಿ ಮಾತನಾಡಿ, ಸ್ವಾಮಿ ವಿವೇಕಾನಂದರು ಅಂದು ಜಾಗೃತರಾಗದಿದ್ದರೆ ನಾವು ಎಷ್ಟೆಲ್ಲಾ ಕಳೆದುಕೊಳ್ಳಬೇಕಾಗುತ್ತಿತ್ತು ಎಂಬುದನ್ನು ನೆನೆಯಬೇಕು ಎಂದು ತಿಳಿಸಿದರು. ರಾಜ್ಯ ಬಿಜೆಪಿ ಮುಖಂಡ ಡಾ.ಅರುಣ್ ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.