;Resize=(412,232))
ಬೆಂಗಳೂರು : ರಾಜ್ಯದಲ್ಲಿ ‘ನವೆಂಬರ್ ಕ್ರಾಂತಿ’ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ನವೆಂಬರ್ ಎರಡನೇ ವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ದೆಹಲಿ ಪ್ರಯಾಣ ಬೆಳೆಸಿದ್ದು, ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ಮಂಗಳವಾರವಷ್ಟೇ ದೆಹಲಿಯಿಂದ ವಾಪಸಾಗಿದ್ದಾರೆ.
ನ.11 ಕ್ಕೆ ಬಿಹಾರದ ಎರಡನೇ ಹಂತದ ಮತದಾನ ಮುಗಿಯಲಿದೆ. ಹೀಗಾಗಿ ನ.11 ರಂದು ಮತ್ತೆ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ವರಿಷ್ಠರೊಂದಿಗೆ ಗಾಂಧಿ ಭಾರತ-100 ಕಾರ್ಯಕ್ರಮದ ಜತೆಗೆ ಸಂಪುಟ ಪುನರ್ರಚನೆ, ನಾಯಕತ್ವ ಬದಲಾವಣೆ ವಿಷಯಗಳ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ.
ಇನ್ನು ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ಬೆನ್ನಲ್ಲೇ ನ.14 ಅಥವಾ ನ.15 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ. ನ.14ಕ್ಕೆ ಬಿಹಾರ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ನ.14 ರಂದು ಸಂಜೆಯೇ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆಯಿದೆ.
ಸಿದ್ದರಾಮಯ್ಯ ಅವರು ಮೂರು ದಿನಗಳ ಕಾಲ ದೆಹಲಿಯಲ್ಲೇ ಉಳಿಯಲಿದ್ದಾರೆ. ನ.15 ರಂದು ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಆದರೆ, ಪುಸ್ತಕ ಬಿಡುಗಡೆಗೆ ತೆರಳಲಿರುವವರು ಮೂರು ದಿನ ಅಲ್ಲೇ ಉಳಿದುಕೊಳ್ಳುವ ಚಿಂತನೆಯೂ ಹೊಂದಿರುವುದರಿಂದ ಸಂಪುಟ ವಿಸ್ತರಣೆ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಈ ಅವಧಿಯಲ್ಲಿ ನಡೆಯಲಿದೆ ಎಂದೇ ಹೇಳಲಾಗುತ್ತಿದೆ.
ಈ ಮೂರು ದಿನಗಳ ಭೇಟಿ ವೇಳೆ ಹೈಕಮಾಂಡ್ ವರಿಷ್ಠರನ್ನು ಮುಖ್ಯಮಂತ್ರಿಯವರು ಭೇಟಿಯಾಗುವ ಸಾಧ್ಯತೆ ಹೆಚ್ಚಿದೆ. ಈ ವೇಳೆ ಸಂಪುಟ ವಿಸ್ತರಣೆ ಸಂದರ್ಭ ಮಹತ್ವದ ಮಾತುಕತೆ ನಡೆಯಲಿದೆ ಎಂದೇ ಮೂಲಗಳು ಹೇಳುತ್ತವೆ.
ಇದೇ ವೇಳೆ ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆಯೂ ಚರ್ಚೆಯಾಗಲಿದ್ದು, ಇಬ್ಬರೂ ನಾಯಕರು ಒಂದೇ ವಾರದಲ್ಲಿ ಪ್ರತ್ಯೇಕವಾಗಿ ವರಿಷ್ಠರನ್ನು ಭೇಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ ಕ್ರಾಂತಿ ಬಗ್ಗೆ ಕುತೂಹಲ ಹೆಚ್ಚಾಗಿದೆ.