ಕಾವೇರಿ ವಿಚಾರ ಸೂಕ್ತ ತೀರ್ಮಾನ ಕೈಗೊಳ್ಳಿ: ಶಾಸಕ ಮಂಜು

KannadaprabhaNewsNetwork | Published : Dec 9, 2023 1:15 AM

ಸಾರಾಂಶ

ಕಾವೇರಿ ನೀರು ಉಳಿಸಲು ಸೂಕ್ತ ತೀರ್ಮಾನ ಕೈಗೊಂಡು ರೈತರು, ಹೋರಾಟಗಾರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಇತಿಶ್ರೀ ಹಾಡಬೇಕು ಎಂದು ಶಾಸಕ ಎಚ್ .ಟಿ.ಮಂಜು ಒತ್ತಾಯಿಸಿದ್ದಾರೆ.ಬೆಳಗಾವಿ ಅಧಿವೇಶನದ ಚರ್ಚೆ ವೇಳೆ ಮಾತನಾಡಿದ ಅವರು, ನಾನೊಬ್ಬ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸುವ ಶಾಸಕನಾಗಿ ಜಿಲ್ಲಾ ಹಿತರಕ್ಷಣ ಸಮಿತಿ ಹಾಗೂ ವಿವಿಧ ಸಂಘಟನೆಗಳು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ, ಕಾವೇರಿ ಕೊಳದ ನೀರಿನ ರಕ್ಷಣೆಗಾಗಿ ಸರದಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಶಾಸಕ ಎಚ್ .ಟಿ.ಮಂಜು ಸರ್ಕಾರಕ್ಕೆ ಒತ್ತಾಯ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಾವೇರಿ ನೀರು ಉಳಿಸಲು ಸೂಕ್ತ ತೀರ್ಮಾನ ಕೈಗೊಂಡು ರೈತರು, ಹೋರಾಟಗಾರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಇತಿಶ್ರೀ ಹಾಡಬೇಕು ಎಂದು ಶಾಸಕ ಎಚ್ .ಟಿ.ಮಂಜು ಒತ್ತಾಯಿಸಿದ್ದಾರೆ.

ಬೆಳಗಾವಿ ಅಧಿವೇಶನದ ಚರ್ಚೆ ವೇಳೆ ಮಾತನಾಡಿದ ಅವರು, ನಾನೊಬ್ಬ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸುವ ಶಾಸಕನಾಗಿ ಜಿಲ್ಲಾ ಹಿತರಕ್ಷಣ ಸಮಿತಿ ಹಾಗೂ ವಿವಿಧ ಸಂಘಟನೆಗಳು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ, ಕಾವೇರಿ ಕೊಳದ ನೀರಿನ ರಕ್ಷಣೆಗಾಗಿ ಸರದಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

ಸತ್ಯಾಗ್ರಹ ಮಾಡುತ್ತಿರುವ ಜೀವಗಳಿಗೆ ಬೆಲೆಯಿಲ್ಲವೇ? ಮುಖ್ಯಮಂತ್ರಿಗಳು ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿದ್ದರೂ ಸಹ ರೈತರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ಬಿಡಬೇಕಾಗಿದ್ದ ನೀರನ್ನು ಬಿಟ್ಟರೂ ಇನ್ನೂ ಹೆಚ್ಚುವರಿ ನೀರು ಹರಿಸುತ್ತಿರುವುದು ಸರಿಯಲ್ಲ. ಸರ್ಕಾರ ಕಾವೇರಿ ಕೊಳದ ನೀರಿನ ಉಳಿವಿಗಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನೀರು ನಿಲ್ಲಿಸುವ ವಿಚಾರದಲ್ಲಿ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದಿರುವುದು ಜಿಲ್ಲೆಯ ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಕಾವೇರಿ ಕೊಳ್ಳದ ರೈತರ ಬೆಳೆಗಳು ನಷ್ಟವಾಗಿದೆ. ಸಮೀಕ್ಷೆಯ ಪ್ರಕಾರ 3600 ಕೋಟಿ ರು. ಬೆಳೆ ನಷ್ಟವಾಗಿದೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.

ಬಾಕ್ಸ್....

ಕೆರೆಕಟ್ಟೆಗಳು, ಸೇತುವೆ ದುರಸ್ಥಿಗೆ ಒತ್ತಾಯ

ಕೆ.ಆರ್ .ಪೇಟೆ ತಾಲೂಕಿನಲ್ಲಿ 2021ರಲ್ಲಿ ಸುರಿದ ಮಹಾಮಳೆಗೆ ಒಡೆದಿರುವ ಕೆರೆಕಟ್ಟೆಗಳು ಹಾಗೂ ಸೇತುವೆಗಳನ್ನು ದುರಸ್ಥಿಗೊಳಿಸುವಂತೆ ಕ್ರಮ ವಹಿಸಲು ಶಾಸಕ ಎಚ್.ಟಿ.ಮಂಜು ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ತಾಲೂಕಿನ ಸಮಸ್ಯೆಗಳನ್ನು ಎಳೆಎಳೆಯಾಗಿ ವಿವರಿಸಿದ ಶಾಸಕರು, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಶೇ.95 ರಷ್ಟು ಜನ ಕೃಷಿಯನ್ನೇ ಅವಲಂಭಿಸಿದ್ದಾರೆ. ತಾಲೂಕು ಬಹುತೇಕ ಅರೆ ನೀರಾವರಿ ಪ್ರದೇಶದಲ್ಲಿದ್ದು, ಕೊಳವೆಬಾವಿ, ಕೆರೆಕಟ್ಟೆಗಳ ನೀರನ್ನು ಅವಲಂಬಿಸಿ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಹೇಮಾವತಿ ನೀರಿನ ಆಶ್ರಯದಲ್ಲಿ ಇರುವ ತಾಲೂಕಿನಲ್ಲಿ 2021 ರಲ್ಲಿ ಸುರಿದ ಭಾರಿ ಮಳೆಗೆ ಸಂತೆಬಾಚಹಳ್ಳಿ ಹೋಬಳಿಯ ಸೋಮೇನಹಳ್ಳಿ ಸೇತುವೆ ಸಂಪರ್ಕ ಕಳೆದುಕೊಂಡಿದೆ. ಎರಡುವರೆ ವರ್ಷಗಳಾದರೂ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡದಿರುವುದು ದುರಂತ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗಿದೆ ಎಂದು ಹೇಳಿದರು.

ತಾಲೂಕಿನ ಲೋಕನಹಳ್ಳಿ ಕೆರೆ, ಮಾವಿನಕಟ್ಟೆಕೊಪ್ಪಲು ಕೆರೆ ಹಾಗೂ ಮಾಳಗೂರು ಕೆರೆ, ಅಘಯ ಕೆರೆ ಸೇರಿದಂತೆ ಹಲವು ಕೆರೆಗಳು ಒಡೆದು ಎರಡು ವರ್ಷಗಳಾದರೂ ಕೆರೆ ಏರಿಗಳ ನಿರ್ಮಾಣವಾಗಿಲ್ಲ. ಇದರಿಂದ ಸಾರ್ವಜನಿಕರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಹ ಒಡೆದ ಕೆರೆಏರಿಗಳ ಪರಿಶೀಲನೆ ನಡೆಸಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಕೆರೆ ಏರಿಗಳ ಮರು ನಿರ್ಮಾಣ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು.

Share this article