ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ದೌರ್ಭಾಗ್ಯ ತಂದಿದೆ : ಸಂಸದ ಡಾ.ಕೆ. ಸುಧಾಕರ್

KannadaprabhaNewsNetwork | Updated : Jul 20 2024, 04:56 AM IST

ತಪ್ಪು ಮಾಡಿದ್ದಾರಾ, ಇಲ್ಲವಾ ಎಂಬುದು ತನಿಖೆಯಲ್ಲಿ ತಿಳಿಯುತ್ತದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಒಪ್ಪಿ ಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಣ ದುರ್ಬಳಕೆಯಾಗಿದೆ ಎಂಬುದು ಮೇಲ್ ನೋಟಕ್ಕೆ ಕಾಣಿಸುತ್ತಿದೆ. ಆಧರೂ ಮುಖ್ಯಮಂತ್ರಿ ಸಮರ್ಥಿಸಿಕೊಳ್ಳುತ್ತಿದ್ದಾರೆ.

 ಚಿಕ್ಕಬಳ್ಳಾಪುರ :  ಭಾಗ್ಯಗಳನ್ನು ಕೊಡುತ್ತೇವೆಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ದೌರ್ಭಾಗ್ಯ ತಂದಿದೆ.ದೌರ್ಭಾಗ್ಯ ಒಂದೇ ತಂದಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಟೀಕಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯ ಕಾರಣಿ ಸಭೆಯಲ್ಲಿ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿದ್ದ ಸರ್ಕಾರದ ಹಣವನ್ನು ಲೋಕಸಭಾ ಚುನಾವಣೆಯಲ್ಲಿ ಮದ್ಯ ಖರೀದಿ ಮಾಡಿದ್ದಾರೆ. ತೆಲಂಗಾಣ ಚುನಾವಣೆಗೂ ಸಹಾ ಇದೇ ಹಣ ಹಂಚಿಕೆ ಮಾಡಿದ್ದಾರೆ. ವಾಲ್ಮೀಕಿ ಜನಾಂಗಕ್ಕೆ ಸೌಲಭ್ಯ ಕಲ್ಪಿಸುವ ಬದಲು ಆ ಹಣದಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರದಲ್ಲಿರಲು ನೈತಿಕತೆ ಇಲ್ಲ

ಇದು ಕಾಂಗ್ರೆಸ್‌ನ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿರಲು ನೈತಿಕತೆ ಇಲ್ಲ. ಸರ್ಕಾರ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿದೆ.

ಸಚಿವ ಕೆ.ಎನ್.ರಾಜಣ್ಣ ರವರ ಸಹಕಾರಿ ಖಾತೆ ಅಡಿಯಲ್ಲಿ ಬರುವ ಅಪೆಕ್ಸ್ ಬ್ಯಾಂಕ್ ‌ನಲ್ಲೂ ಸಾವಿರಾರು ಕೋಟಿ ಹಗರಣ ಆಗಿದೆ ಅಂತಿದ್ದಾರೆ. ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಹಗರಣಗಳನ್ನು ನೋಡಿದರೆ ಬೇಲಿಯ ಎದ್ದು ಹೊಲ ಮೇಯ್ದಂತೆ ಈ ಸರ್ಕಾರದ ಕೆಲಸವಾದಂತಿದೆ. ನೈತಿಕತೆ ಇನ್ನೂ ಉಳಿದಿದ್ರೆ ರಾಜೀನಾಮೆ ಕೊಡೋದು ಒಳ್ಳೆಯದು ಎಂದರು.

ಅವ್ಯವಹಾರಗಳ ಸಮರ್ಥನೆ

ತಪ್ಪು ಮಾಡಿದ್ದಾರಾ, ಇಲ್ಲವಾ ಎಂಬುದು ತನಿಖೆಯಲ್ಲಿ ತಿಳಿಯುತ್ತದೆ. ಆದರೆ ಸಿದ್ದರಾಮಯ್ಯನವರೆ ಒಪ್ಪಿ ಕೊಂಡಿದ್ದಾರೆ ಹಣ ಈರೀತಿ ಈ ಅಕೌಂಟ್ ನಿಂದ ದುರ್ಬಳಕೆಯಾಗಿದೆ ಎಂಬುದು ಮೇಲ್ ನೋಟಕ್ಕೆ ಕಾಣಿಸುತ್ತಿದೆ. ಆದರೂ ಸಹಾ ತಮ್ಮ ಸರ್ಕಾರ ತಪ್ಪುಮಾಡಿಲ್ಲ, ಸಚಿವರು ತಪ್ಪುಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಜನತೆಗೆ ನಿಜ ಏನೆಂದು ಅರ್ಥವಾಗಿದೆ ಎಂದರು. 

ಬಿಜೆಪಿ ಸರ್ಕಾರದಲ್ಲಿ ಹಗರಣಗಳಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರ ಬಂದ ಹೊಸದರಲ್ಲೆ ಆರೋಪ ಮಾಡಿ ಅನೇಕ ತನಿಖೆ ನಡೆಸುತ್ತಿದೆ, ಆದರೆ 15 ತಿಂಗಳಾದರೂ ಅದರ ತಾತ್ವಿಕ ಅಂತ್ಯವಾಗಿಲ್ಲ. ಕೇವಲ ರಾಜಕೀಯ ದ್ವೇಶದಿಂದ ಆರೋಪ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ನಿಂದ ಸಂವಿಧಾನ ಬದಲಾವಣೆಸಿದ್ದರಾಮಯ್ಯ ನೇತೃತ್ವದ ಗ್ಯಾರಂಟಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 15 ತಿಂಗಳುಗಳಿಂದ ಮಹಿಳೆಯರಿಗೆ ಮತ್ತು ಯಾರಿಗೆ ಆಗಲಿ ಯಾವುದೇ ಸಾಲ ಸೌಲಭ್ಯ ಸಿಕ್ಕಿಲ್ಲಾ.

 ಬಿಜೆಪಿ ಸಂವಿಧಾನ ಬದಲಾಯಿಸುತ್ತದೆ ಎಂದು ಚುನಾವಣಾಸಮಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೂ ಬಿಜೆಪಿ ಅಧಿಕಾರ ಹಿಡಿಯುವಷ್ಟು ಸ್ಥಾನಗಳು ಬಂದು ಮೋದಿ ಮೂರನೇ ಭಾರಿಗೆ ಪ್ರಧಾನಿಯಾಗಿದ್ದಾರೆ. ವಿಶೇಷವೆಂದರೆ ಸಂವಿಧಾನವನ್ನು ಕಾಂಗ್ರೆಸ್‌ಸ್ ಬದಲಾಯಿಸಿದಷ್ಟು ಯಾರು ಬದಲಾಯಿಸಿಲ್ಲ ಎಂದು ಆರೋಪಿಸಿದರು. ತಳ ಹಂತದಿಂದ ಪಕ್ಷ ಸಂಘಟಿಸಿ

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನತೆಗೆ ತಿಳಿಸಬೇಕು. ಅಹಿಂದ ವರ್ಗ ಮತ್ತು ಅಲ್ಪಸಂಖ್ಯಾತರನ್ನು, ಪರಿಶಿಷ್ಟ ವರ್ಗ ಮತ್ತು ಪಂಗಡದವರ ವಿಶ್ವಾಸ ಪಡೆದು, ಅವರಿಗೆ ಸೂಕ್ತ ಸ್ಥಾನ ಮಾನ ನೀಡಿ,ಬಜೆಪಿ ನಿಮ್ಮ ವಿರುದ್ದ ವಲ್ಲಾ ಎಂದು ಅದನ್ನು ಮತಗಳನ್ನಾಗಿ ಪರಿಗಣಿಸಬೇಕು. ಸಂಘಟನೆ ಮತ್ತು ಹೋರಾಟ ಮಾಡಬೇಕು ಆಗ ತಳ ಹಂತದಿಂದ ಬಿಜೆಪಿ ಬೆಳಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ವೇಳೆ ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಜಿಲ್ಲಾಧ್ಯಕ್ಷ ಡಿ.ವಿ.ರಾಮಲಿಂಗಪ್ಪ,ಮಾಜಿ ಶಾಸಕ ಎಂ.ರಾಜಣ್ಣ,ಮುಖಂಡರಾದ ಕೆ.ವಿ.ನಾಗರಾಜ್, ಸೀಕಲ್ ರಾಮಚಂದ್ರಗೌಡ, ವೇಣುಗೋಪಾಲ್, ನಿರ್ಮಲ, ಮರಳುಕುಂಟೆ ಕೃಷ್ಣಮೂರ್ತಿ, ಮುರಳಿ, ಮುರಳೀಧರ್, ಆರ್.ಹೆಚ್.ಎನ್.ಅಶೋಕ್, ಅನು ಆನಂದ್, ಮಧುಚಂದ್ರ, ನವೀನ್ ಮತ್ತಿತರು ಇದ್ದರು.