ಜೆಡಿಎಸ್ ಎಲ್ಲಿದೆ ಎಂಬ ಪ್ರಶ್ನೆಗೆ ಜೂ.4ಕ್ಕೆ ಉತ್ತರ ಸಿಗಲಿದೆ : ರವಿಕುಮಾರ್

KannadaprabhaNewsNetwork | Updated : Apr 05 2024, 04:52 AM IST

ಸಾರಾಂಶ

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಗಟ್ಟಿಯಾಗಿದೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಂಘಟಿತವಾಗುತ್ತಿರುವ ಬಿಜೆಪಿಯೂ ಜನರ ಮನ ಗೆದ್ದಿದೆ. ಈಗ ಎರಡೂ ಪಕ್ಷದ ಮೈತ್ರಿಯಿಂದಾಗಿ ಅಭ್ಯರ್ಥಿ ಗೆಲುವು ಖಚಿತ

 ಶಿಡ್ಲಘಟ್ಟ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಎಲ್ಲಿದೆ... ಜೆಡಿಎಸ್ ಎಲ್ಲಿದೆ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಕೋಲಾರ ಸಂಸತ್ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಭಾರಿ ಮತಗಳ ಅಂತರದಿಂದ ಗೆಲ್ಲಿಸಿ ಜೆಡಿಎಸ್ ಇಲ್ಲಿದೆ ಎಂದು ಸಿದ್ದರಾಮಯ್ಯನವರಿಗೆ ನಾವು ಸಂದೇಶ ರವಾನಿಸಬೇಕು ಎಂದು ಶಿಡ್ಲಘಟ್ಟದ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದ ಬಸ್ ನಿಲ್ದಾಣ ಬಳಿ ಇರುವ ಅಂಜನಾದ್ರಿ ಭವನದಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಸಮನ್ವಯ ಸಭೆಯಲ್ಲಿ ನೆರೆದಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಲ್ಲೇಶಬಾಬು ಬೆಂಬಲಿಸಿ

ಮೋದಿ ಪ್ರಧಾನಿ ಆಗುವುದಕ್ಕೂ ಮೊದಲು ನಮ್ಮ ದೇಶವು ಅಭಿವೃದ್ದಿ ರಾಷ್ಟ್ರಗಳಲ್ಲಿ 10ನೇ ಸ್ಥಾನದಲ್ಲಿತ್ತು, ಇದೀಗ 5ನೇ ಸ್ಥಾನಕ್ಕೇರಿದೆ. ಇನ್ನೈದು ವರ್ಷ ಪ್ರಧಾನಿಯಾಗಿ ಅಧಿಕಾರ ನಡೆಸಿದರೆ ನಮ್ಮ ದೇಶವು ಜಗತ್ತಿನಲ್ಲಿ 3ನೇ ಸ್ಥಾನಕ್ಕೇರುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಈ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬುಗೆ ಹೆಚ್ಚಿನ ಮತ ನೀಡಿ ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಗಟ್ಟಿಯಾಗಿದೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಂಘಟಿತವಾಗುತ್ತಿರುವ ಬಿಜೆಪಿಯೂ ಜನರ ಮನ ಗೆದ್ದಿದೆ. ಎರಡೂ ಪಕ್ಷಗಳು ಇದೀಗ ಮೈತ್ರಿಯಾಗಿದ್ದು ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ಶತ ಸಿದ್ದ ಎಂದರು.

ಈ ಸಂದರ್ಭದಲ್ಲಿ ಕೋಲಾರ ಸಂಸತ್ ಸದಸ್ಯ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಕೋಲಾರ ಸಂಸತ್ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು, ಮಾಜಿ ಶಾಸಕ ಎಂ.ರಾಜಣ್ಣ, ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸೀಕಲ್ ಆನಂದಗೌಡ, ಹಾಜರಿದ್ದರು.

Share this article