;Resize=(412,232))
ಬೆಂಗಳೂರು : ‘ರಾಜ್ಯದಲ್ಲಿ ನಾಯಕತ್ವದ ಚರ್ಚೆ ಎಲ್ರೀ ಇದೆ? ಹೈಕೋರ್ಟ್ ಪದೇ ಪದೆ ಬೀದಿ ನಾಯಿಗಳನ್ನೆಲ್ಲ ಹಿಡಿದು ಒಳಗೆ ಹಾಕಿ ಎಂದು ಹೇಳುತ್ತಲೇ ಇದೆ. ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ. ನಾಯಿನನ್ನು ಬಾಲ ಅಲ್ಲಾಡಿಸಲು ಸಾಧ್ಯವೆ? ವರಿಷ್ಠರಿಗೆ ನಾವು, ನೀವೆಲ್ಲ ಸೂಚನೆ ನೀಡಲು ಸಾಧ್ಯವೆ?’
- ನಾಯಕತ್ವ ವಿಚಾರಕ್ಕೆ ಸಂಬಂಧಿಸಿ ರಾಜ್ಯ ನಾಯಕರಿಂದಲೇ ಗೊಂದಲ ಸೃಷ್ಟಿಯಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೀಡಿದ ಕುತೂಹಲಕಾರಿ ಇದು.
ಇದರ ಬೆನ್ನಿಗೆ ಹೈಕಮಾಂಡ್ ಮಧ್ಯಪ್ರವೇಶಿಸಬೇಕು ಎಂದು ಶಾಸಕರೇ ಹೇಳುತ್ತಿದ್ದಾರಲ್ಲಾ ಎಂಬ ಮತ್ತೊಂದು ಪ್ರಶ್ನೆಗೆ ‘ಹೈಕಮಾಂಡ್ಗೆ ನಿರ್ದೇಶನ ನೀಡುವವರು ಯಾರು? ನಾನು, ನೀವೂ ಕೊಡಲು ಆಗಲ್ಲ. ಹೈಕಮಾಂಡ್ನವರೇ ಹೇಳಬೇಕು. ಬಾಲವೇ ನಾಯಿಯನ್ನು ಅಲುಗಾಡಿಸಿದರೆ ಹೇಗೆ? ಹೈಕಮಾಂಡ್ ಅನ್ನು ಅಲುಗಾಡಿಸಲು ಸಾಧ್ಯವೇ’ ಎಂದು ಮರು ಪ್ರಶ್ನಿಸಿದರು.
ಸುದ್ದಿಗೋಷ್ಠಿ ಆರಂಭದಲ್ಲಿ ಕೇಳಲಾದ ಪ್ರಶ್ನೆಗೆ ‘ರಾಜ್ಯದಲ್ಲಿ ನಾಯಕತ್ವದ ಚರ್ಚೆ ಎಲ್ರೀ ಇದೆ? ಹೈಕೋರ್ಟ್ ಬೀದಿ ನಾಯಿಗಳನ್ನೆಲ್ಲ ಹಿಡಿದು ಒಳಗೆ ಹಾಕಿ ಅಂತ ಪದೇ ಪದೆ ಹೇಳುತ್ತಿದೆ. ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ’ ಎಂದು ಹೇಳಿದರು.
ಆಗ ಹೈಕೋರ್ಟ್ ಹೇಳಿದ್ದಕ್ಕೂ ರಾಜ್ಯ ನಾಯಕರಿಗೂ ಏನು ಸಂಬಂಧ? ಹಾದಿ ಬೀದಿಯಲ್ಲಿ ಮಾತನಾಡುವುವರ ಬಾಯಿ ಮುಚ್ಚಿಸಬೇಕು ಎಂಬುದು ನಿಮ್ಮ ಮಾತಿನ ಅರ್ಥವೇ? ಎಂದು ಪತ್ರಕರ್ತರು ಮರು ಪ್ರಶ್ನೆ ಮಾಡಿದರು.
ಅದಕ್ಕೆ ಮಹದೇವಪ್ಪ ‘ನನಗೆ ಗೊತ್ತಿಲ್ಲಪ್ಪ. ನೀವೇ ಅದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಏನೂ ಹೇಳಿಲ್ಲ. ಇಲ್ಲಿ ನಾಯಕತ್ವ ಗಟ್ಟಿಯಾಗಿದೆ. ಪದೇ ಪದೆ ಮಾತನಾಡುವ ಅಗತ್ಯವಿಲ್ಲ’ ಎಂದರು.
ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕು ಎಂದು ಕೆಲವರು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಹೈಕಮಾಂಡ್ಗೆ ನಿರ್ದೇಶನ ನೀಡುವವರು ಯಾರು? ನಾನೂ ನೀವೂ ಕೊಡಲು ಆಗುತ್ತಾ? ಹೈಕಮಾಂಡ್ನವರು ಹೇಳಬೇಕು. ಬಾಲವೇ ನಾಯಿಯನ್ನು ಅಲ್ಲಾಡಿಸಿದರೆ ಹೇಗೆ? ಹೈಕಮಾಂಡ್ನ್ನು ಅಲುಗಾಡಿಸಲು ಸಾಧ್ಯವಾ?... ಶಿವ ನಿಮಗೆಲ್ಲ ಒಳ್ಳೆಯದು ಮಾಡಲಿ. ರುದ್ರ ತಾಂಡವದ ಮುಖಾಂತರ ಮನಸ್ಸು ಹಾಗೂ ದೇಹದ ಸಮತೋಲನ ಉಂಟಾಗಲಿ’ ಎಂದು ನಕ್ಕು ಸುಮ್ಮನಾದರು.
ಗೊಂದಲ ಸೃಷ್ಟಿಸಬೇಡಿ: ಅದಿರಲಿ ನಾಯಿಗೂ ಶಾಸಕರಿಗೂ ಏನು ಸಂಬಂಧ ಸರ್? ಎಂಬ ಪ್ರಶ್ನೆಗೆ, ‘ಗೊಂದಲ, ವಿವಾದ ಸೃಷ್ಟಿಸಬೇಡಿ. ಬೀದಿಗಳಲ್ಲಿ ನಾಯಿ ಕಡಿತ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಹುಚ್ಚು ನಾಯಿಗಳೆಲ್ಲ ಹೆಚ್ಚಾಗಿವೆ. ಅವು ಕಡಿದರೆ ರೇಬಿಸ್ ಬರುತ್ತದೆ. ಹೀಗಾಗಿ ಜಾಗೃತಿ ಮೂಡಿಸಿ ಎಂದು ಹೇಳುತ್ತಿದ್ದೇನೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಇದರಲ್ಲಿ ಅನಗತ್ಯ ವಿವಾದ, ಗೊಂದಲ ಸೃಷ್ಟಿಸಬೇಡಿ’ ಎಂದು ಮನವಿ ಮಾಡಿದರು.
ಡ್ಯಾಮೇಜ್ ಕಂಟ್ರೋಲ್ ಮಾಡುತ್ತಿದ್ದೀರಾ? ಎಂದು ಕೇಳಿದ್ದಕ್ಕೆ ‘ಏನಿಲ್ಲ ನನಗೆ ಕ್ಲಾರಿಟಿ ಇದೆ. ನ್ಯಾಯಾಲಯ ಹೇಳಿದೆಯೋ, ಇಲ್ಲವೋ?’ ಎಂದಷ್ಟೇ ಹೇಳಿದರು.
ನೀವು ಸದಾಶಿವನಗರದವರ ರೀತಿ ನೊಂದಿದ್ದೀರಾ? ಎಂದು ಕೇಳಿದ್ದಕ್ಕೆ, ‘ನಾನು ಯಾವುದರಲ್ಲೂ ನೊಂದಿಲ್ಲ. ಸಂತೃಪ್ತಿಯಿಂದ ಇದ್ದೇನೆ. ಅವರಿಗೆ ಎಲ್ಲೆಲ್ಲಿ ಬೆಂದಿದೆ? ಎಲ್ಲೆಲ್ಲಿ ನೊಂದಿದೆ ಎಂಬುದನ್ನು ಅವರನ್ನೇ ಕೇಳಿಕೊಳ್ಳಿ’ ಎಂದರು.
ವ್ಯಕ್ತಿಪೂಜೆ ಮಾಡಬೇಡಿ ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ವ್ಯಕ್ತಿ ಪೂಜೆ ಸರ್ವಾಧಿಕಾರಿಯನ್ನು ಸೃಷ್ಟಿಸುತ್ತದೆ. ಸರ್ವಾಧಿಕಾರಿ ಪ್ರಜಾಪ್ರಭುತ್ವ ಧ್ವಂಸ ಮಾಡುತ್ತಾನೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ವ್ಯಕ್ತಿ ಪೂಜೆ ಮಾಡುವುದಿಲ್ಲ ಎಂದು ಸಚಿವ ಡಾ। ಮಹದೇವಪ್ಪ ಹೇಳಿದರು.
ಸಿದ್ದರಾಮಯ್ಯ ಅವರ ಪೂಜೆ ಮಾಡಿಲ್ಲವೇ? ಎಂಬ ಪ್ರಶ್ನೆಗೆ, ‘ನಾನೆಂದೂ ಸಿದ್ದರಾಮಯ್ಯ ಅವರ ಪೂಜೆ ಮಾಡಿಲ್ಲ. ಬುದ್ದ, ಬಸವ, ಅಂಬೇಡ್ಕರ್ ಬಿಟ್ಟರೆ ಬೇರೆ ಯಾರ ಪೂಜೆಯನ್ನೂ ಮಾಡಿಲ್ಲ. ನಾನು ವ್ಯಕ್ತಿ ಪೂಜೆಗೆ ವಿರುದ್ಧ’ ಎಂದು ಹೇಳಿದರು.
- ಹೈಕಮಾಂಡ್ಗೆ ನಿರ್ದೇಶನ ನೀಡುವವರು ಯಾರು?
- ನಾನು, ನೀವು ಕೊಡಲು ಆಗಲ್ಲ. ವರಿಷ್ಠರೇ ಹೇಳಬೇಕು
- ಬಾಲವೇ ನಾಯಿಯನ್ನು ಅಲುಗಾಡಿಸಿದರೆ ಹೇಗೆ?
- ಹೈಕಮಾಂಡ್ ಅನ್ನು ಅಲುಗಾಡಿಸಲು ಸಾಧ್ಯವೇ?
- ನಾಯಕತ್ವ ಬದಲಾವಣೆ ಕೂಗಿನ ಬಗ್ಗೆ ಸಚಿವ ನುಡಿ