ಸಿದ್ಧರಾಮಯ್ಯ ಮೀರ್ ಸಾಧಿಕ್ ಮತ್ತು ಮಲ್ಲಪ್ಪಶೆಟ್ಟಿ ಹೋಲಿಕೆ ವಿಚಾರ : ಸ್ಪಷ್ಟನೆ ನೀಡಿದ ಸಚಿವ ರಾಜಣ್ಣ

Published : Sep 05, 2024, 12:25 PM IST
Minister KN Rajanna

ಸಾರಾಂಶ

ಸಿದ್ಧರಾಮಯ್ಯನವರು ಮೀರ್ ಸಾಧಿಕ್ ಮತ್ತು ಮಲ್ಲಪ್ಪಶೆಟ್ಟಿ ಹೋಲಿಕೆ ವಿಚಾರವಾಗಿ ಸಚಿವ ಕೆ.ಎನ್‌.ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.  

ಹಾಸನ   : ಎಲ್ಲಾ ಕಾಲಘಟ್ಟದಲ್ಲಿಯೂ ಮೀರ್ ಸಾಧಿಕ್, ಮಲ್ಲಪ್ಪಶೆಟ್ಟಿ ಅಂತವರು ಇದ್ದೇ ಇರುತ್ತಾರೆ. ಸಿದ್ಧರಾಮಯ್ಯನವರು ಮೀರ್ ಸಾಧಿಕ್, ಮಲ್ಲಪ್ಪಶೆಟ್ಟಿ ಅಂತವರು ನಮ್ಮಲ್ಲೇ ಇದ್ದಾರೆ ಎಂದು ಹೇಳಿರುವುದು ಈ ಸರ್ಕಾರದ ಬಗ್ಗೆ ಅಲ್ಲ. ಈ ರಾಜಕೀಯ ಸನ್ನಿವೇಶಕ್ಕೆ ಅದನ್ನು ಹೋಲಿಕೆ ಮಾಡಲು ಹೋಗಬೇಡಿ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ. ಅವನ ಸಾವಿಗೆ ಕಾರಣ ಮೀರ್‌ ಸಾಧಿಕ್. ಕಿತ್ತೂರು ರಾಣಿ ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿದ್ದರು. ಅವರು ಬ್ರಿಟಿಷರ ವಿರುದ್ಧ ಸೋಲಲು, ಸೆರೆ ಸಿಕ್ಕಲು ಕಾರಣ ಮಲ್ಲಪ್ಪಶೆಟ್ಟಿ. ಹಾಗೆಯೇ ನಮ್ಮ ದೇಶದ ಇತಿಹಾಸದಲ್ಲಿ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಆಗುತ್ತಿರುತ್ತದೆ. ಅದೇ ರೀತಿ ಸಿದ್ಧರಾಮಯ್ಯನವರು ಸಂಗೊಳ್ಳಿ ರಾಯಣ್ಣನ ಕಲ್ಪನೆ ಇಟ್ಟುಕೊಂಡು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಚನ್ನಪಟ್ಟಣದ ಉಪಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಬಿ ಫಾರಂ ಕೋಡೊರು ಹೈಕಮಾಂಡ್‌ನವರು ಎಂದರು.

ಶಿವಕುಮಾರ್ ಅಪೇಕ್ಷೆ ವ್ಯಕ್ತಪಡಿಸಿದರೆ, ಶಿವಕುಮಾರ್‌ಗೆ ಅವಕಾಶ ಕೊಡಬಹುದು. ಇನ್ನೊಬ್ಬರು ಅಪೇಕ್ಷೆ ವ್ಯಕ್ತಪಡಿಸಿದರೆ ಇನ್ನೊಬ್ಬರಿಗೆ ಕೊಡಬಹುದು. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು, ಅವರ ಜಿಲ್ಲೆಗೆ ಸೇರಿರುವ ಚನ್ನಪಟ್ಟಣ ಕ್ಷೇತ್ರ ಅವರ ಜನಪ್ರಿಯತೆ ಪರೀಕ್ಷೆಗೆ ಒಡ್ಡುತ್ತದೆ. ಚನ್ನಪಟ್ಟಣದ ಉಪಚುನಾವಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಆ ಚುನಾವಣೆ ಗೆಲ್ಲಲು ಎಲ್ಲಾ ಮುಖಂಡರು ಪ್ರಯತ್ನ ಮಾಡುತ್ತೇವೆ. ಚನ್ನಪಟ್ಟಣ ಉಪಚುನಾವಣೆ ಕಾಂಗ್ರೆಸ್ ಪಕ್ಷದ ಮಾನ, ಮರ್ಯಾದೆ, ಗೌರವದ ಪ್ರಶ್ನೆ. ಹಾಗಾಗಿ ಯಾರೇ ನಿಂತರೂ ಕಾಂಗ್ರೆಸ್‌ ಅಭ್ಯರ್ಥಿ ಎಂದು ತಿಳಿದುಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌
ಸದನದಲ್ಲಿ ಅಶೋಕ್ ಆರೆಸ್ಸೆಸ್‌ ಬರೆದ ಭಾಷಣ ಓದ್ತಾರೆ-ಸಿಎಂ