;Resize=(412,232))
ನವದೆಹಲಿ : ‘ತರಾತುರಿಯಲ್ಲಿ ಗೃಹಲಕ್ಷ್ಮಿ ಯೋಜನೆ ಘೋಷಿಸಿದ ಕಾಂಗ್ರೆಸ್ ಸರ್ಕಾರವು ಪಾರದರ್ಶಕತೆಯನ್ನು ತರದೆ ವ್ಯವಸ್ಥಿತವಾದ ಲೂಟಿಗೆ ಎಡೆ ಮಾಡಿಕೊಟ್ಟಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ 1.1 ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳು ಪತ್ತೆ ಆಗಿದ್ದರ ಬಗ್ಗೆ ‘ಕನ್ನಡಪ್ರಭ’ ಗುರುವಾರ ವರದಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು, ಗೃಹಲಕ್ಷ್ಮೀ ಯೋಜನೆಯಲ್ಲಿ 1.1 ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳು ಪತ್ತೆ ಆಗಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಲೋಪವನ್ನು ಎತ್ತಿ ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಇದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಕೈಗನ್ನಡಿಯಾಗಿದ್ದು, ವ್ಯವಸ್ಥಿತ ಲೂಟಿಗೆ ದಾರಿ ಮಾಡಿಕೊಟ್ಟಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಸರಿಯಾದ ಮಾರ್ಗಸೂಚಿ, ಸಮರ್ಪಕ ಫಲಾನುಭವಿಗಳ ಗುರುತಿಸುವುದು ಮತ್ತು ಪಾರದರ್ಶಕ ವ್ಯವಸ್ಥೆಯಿಲ್ಲದೆಯೇ ಯೋಜನೆಯನ್ನು ಜಾರಿಗೆ ತಂದ ಪರಿಣಾಮವೇ ಈ ಅವಾಂತರ ಎಂದಿರುವ ಸಚಿವರು, ಕಾಂಗ್ರೆಸ್ ಸರ್ಕಾರ ದುರಾಡಳಿತದಿಂದ ತೆರಿಗೆದಾರರ ಹಣ ಪೋಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬರೋಬ್ಬರಿ 55,232 ಮೃತರ ಹೆಸರಿನಲ್ಲಿ ಮತ್ತು 56,860 ತೆರಿಗೆ ಪಾವತಿದಾರರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿದೆ ಎಂದರೆ ಇದು ವ್ಯವಸ್ಥಿತವಾದಂತಹ ಲೂಟಿಯೇ ಸರಿ. ಸರ್ಕಾರವೇ ರಚಿಸಿದ ಗ್ಯಾರೆಂಟಿ ಅನುಷ್ಠಾನ ಸಮಿತಿ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ರಾಜ್ಯ ಸರ್ಕಾರ ಅರ್ಹ ಮಹಿಳೆಯರಿಗೂ ಕಳೆದ ವರ್ಷದ 2 ತಿಂಗಳ ಬಾಕಿ ಹಣವನ್ನು ಇವತ್ತಿಗೂ ನೀಡದೆ ವಂಚಿಸುತ್ತಿದೆ. ಕೇವಲ ರಾಜಕೀಯ ಲಾಭಕ್ಕಾಗಿ, ತರಾತುರಿಯಲ್ಲಿ ಯೋಜನೆ ಘೋಷಿಸಿದರೆ ಇಂತಹದ್ದೇ ಹಗರಣಗಳು ಸೃಷ್ಟಿಯಾಗುತ್ತವೆ ಎಂಬುದಕ್ಕೆ ಈ ಆಡಳಿತವೇ ಸಾಕ್ಷಿ ಎಂದು ಸಚಿವ ಪ್ರಹ್ಲಾದ್ ಜೋಶಿ ಚಾಟಿ ಬೀಸಿದ್ದಾರೆ.