ನವದೆಹಲಿ: ಭಾರತದ ಚಂದ್ರಯಾನ-3 ನೌಕೆ, ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಸ್ಥಳಕ್ಕೆ ಇಡಲಾಗಿದ್ದ ‘ಶಿವಶಕ್ತಿ’ ಎಂಬ ಹೆಸರನ್ನು ಅಂತಾರಾಷ್ಟ್ರೀಯ ಖಗೋಳ ಶಾಸ್ತ್ರೀಯ ಸಂಸ್ಥೆ ಮಾನ್ಯ ಮಾಡಿದೆ.
ವಿಶೇಷವೆಂದರೆ ಈ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬೆಂಗಳೂರು ಭೇಟಿ ವೇಳೆ ಘೋಷಣೆ ಮಾಡಿದ್ದರು.ಚಂದ್ರಯಾನ-3 ಲ್ಯಾಂಡಿಂಗ್ ನಡೆದ 2023ರ ಆ.23ರಂದು ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು.
ಬಳಿಕ ಭಾರತಕ್ಕೆ ಮರಳಿದ ಮೋದಿ ಆ.26ರಂದು ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದರು. ಈ ವೇಳೆ, ‘ಚಂದ್ರಯಾನ -2 ನೌಕೆ ಇಳಿದ ಜಾಗವನ್ನು ‘ತಿರಂಗಾ’ ಎಂದೂ, ಚಂದ್ರಯಾನ -3 ನೌಕೆಯ ವಿಕ್ರಂ ಲ್ಯಾಂಡರ್ ಇಳಿದ ಜಾಗವನ್ನು ‘ಶಿವಶಕ್ತಿ’ ಎಂದೂ ಗುರುತಿಸಲಾಗುವುದು.
ಭಾರತದ ಈ ಪ್ರಯತ್ನ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಲಿದೆ. ವೈಫಲ್ಯವೇ ಅಂತಿಮವಲ್ಲ ಎಂಬುದನ್ನು ಇದು ನಮಗೆ ಸದಾ ನೆನಪಿಸಲಿದೆ’ ಎಂದು ಪ್ರಧಾನಿ ಘೋಷಿಸಿದ್ದರು .
ಈ ವಿಷಯವನ್ನು ಅಂತಾರಾಷ್ಟ್ರೀಯ ಖಗೋಳ ಶಾಸ್ತ್ರೀಯ ಸಂಸ್ಥೆಗೂ ಕಳುಹಿಸಿಕೊಡಲಾಗಿತ್ತು.ಅದರಂತೆ ನೌಕೆ ಇಳಿದ ಜಾಗಕ್ಕೆ ‘ಸ್ಟಾಟಿಯೋ ಶಿವ ಶಕ್ತಿ’ ಎಂದು ಮಾನ್ಯತೆ ನೀಡಿರುವ ವಿಷಯವನ್ನು ಸಂಸ್ಥೆ ಮಾ.19ರಂದು ಪ್ರಕಟಿಸಿದೆ.
ಅದರಲ್ಲಿ ಭಾರತೀಯ ಪುರಾಣದಲ್ಲಿ ಪ್ರಸ್ತಾಪಿತವಾಗಿರುವ ಪ್ರಕೃತಿಯಲ್ಲಿನ ಪುರುಷ ಶಕ್ತಿಯನ್ನು ಬಿಂಬಿಸುವ ಶಿವ ಮತ್ತು ಮಹಿಳಾ ದೇವತೆಯನ್ನು ಪ್ರತಿನಿಧಿಸುವ ಸಂಯೋಜಿತ ಪದವಾದ ‘ಶಿವ-ಶಕ್ತಿ’ಯನ್ನು ವಿಕ್ರಂ ಲ್ಯಾಂಡರ್ ಇಳಿದ ಸ್ಥಳಕ್ಕೆ ಘೋಷಿಸಲಾಗಿದೆ ಎಂದು ಹೇಳಲಾಗಿದೆ.