ಪ್ಯಾರಿಸ್: ಪತ್ನಿಗೆ ಮಾದಕ ವಸ್ತು ನೀಡಿ, ಆಕೆಯ ಅರಿವಿಗೆ ಬಾರದಂತೆ 50 ಪುರುಷರಿಂದ ಅತ್ಯಾಚಾರ ಮಾಡಿಸಿದ 72 ವರ್ಷದ ಪತಿಗೆ ಪ್ಯಾರಿಸ್ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
2020ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಡೊಮಿನಿಕ್ ಪೆಲಿಕಾಟ್ ಎಂಬಾತನ ಕಂಪ್ಯೂಟರ್ನಲ್ಲಿ ಮಾಜಿ ಪತ್ನಿ ಗಿಸೆಲೆ ಪೆಲಿಕಾಟ್ಗೆ ಸೇರಿದ್ದ 20 ಸಾವಿರ ಅಶ್ಲೀಲ ಫೋಟೋಗಳು, ವಿಡಿಯೋಗಳು ಪತ್ತೆಯಾಗಿತ್ತು. ಪೊಲೀಸರ ವಿಚಾರಣೆಯಲ್ಲಿ ಆತ ತಪ್ಪೊಪ್ಪಿಕೊಂಡಿದ್ದ.
‘ದಶಕದ ಕಾಲ ಆಕೆಗೆ ಡ್ರಗ್ಸ್ ನೀಡಿ, ರೇಪ್ ಮಾಡಲಾಗಿದೆ. ಪ್ರಜ್ಞೆ ತಪ್ಪಿಸಿ, ದೇಹ ತೋರಿಸಿ ಅಪರಿಚಿತರನ್ನು ಆನ್ಲೈನ್ ಮೂಲಕ ಆಹ್ವಾನಿಸಿ ರೇಪ್ ಮಾಡಿಸಲಾಗಿತ್ತು. ವಿಡಿಯೋ ಕೂಡ ಮಾಡಲಾಗಿತ್ತು’ ಎಂದು ಹೇಳಿದ್ದ.
ವಿಚಾರಣೆ ನಡೆಸಿದ ನ್ಯಾಯಾಲಯ ಪತಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಒಟ್ಟು 51 ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದ್ದು 47 ಮಂದಿಗೆ ಅತ್ಯಾಚಾರ, ಇಬ್ಬರಿಗೆ ಅತ್ಯಾಚಾರ ಯತ್ನ, ಇಬ್ಬರು ಆರೋಪಿಗಳನ್ನು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಶಿಕ್ಷೆ ವಿಧಿಸಿದೆ.
20 ರು.ಗೆ ಬೋಳು ತಲೇಲಿ ಕೂದಲು ಬರಿಸುವ ಚಿಕಿತ್ಸೆ: ‘ವೈದ್ಯ’ ಸೆರೆ
ಮೀರತ್: ಕೂದಲುದುರುವಿಕೆಯಿಂದ ಬೇಸತ್ತಿರುವವರಿಗಾಗಿ ಬಲೆ ಬೀಸಿ, ಕೇವಲ 20 ರು.ಗೆ ತಲೆಗೆ ಎಣ್ಣೆ ಹಚ್ಚುತ್ತಿದ್ದ ಸ್ವಯಂಘೋಷಿತ ವೈದ್ಯ ಹಾಗೂ 2 ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷ ಎಂದರೆ ‘ವೈದ್ಯ” ಕೂಡ ಬೋಳುತಲೆಯವ.ಕೂದಲು ಬೆಳವಣಿಗೆಗೆ ಸಹಕಾರಿ ಎಂದು ಬಿಂಬಿಸಿ ಇವರು ಮಾರುತ್ತಿದ್ದ ಎಣ್ಣೆಯನ್ನು ಬಳಸಿದವರಿಗೆ ತಲೆಯಲ್ಲಿ ತುರಿಕೆ, ಅಲರ್ಜಿ ಉಂಟಾಗಿದ್ದು, ಹಲವು ದೂರುಗಳು ದಾಖಲಾಗಿದ್ದವು.
ಇದರ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು ಇಮ್ರಾನ್, ಸಲ್ಮಾನ್ ಹಾಗೂ ಸಮೀರ್ ಎಂಬುವವರನ್ನು ಬಂಧಿಸಿದ್ದಾರೆ.ಈ ವೇಳೆ ದೆಹಲಿ, ಹರ್ಯಾಣ, ಉತ್ತರಾಖಂಡಗಳಲ್ಲಿ ವಂಚನೆಯಲ್ಲಿ ತೊಡಗಿದ್ದಾಗಿ ಮೂವರು ಒಪ್ಪಿಕೊಂಡಿದ್ದು, ಅವರ ವಿರುದ್ಧ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.ಸಮರ್ ಕಾಲೊನಿಯ ಲಿಸರಿ ಗೇಟ್ ಬಳಿ ಕ್ಯಾಂಪ್ ತೆರೆದಿದ್ದ ಇವರು, ಬೊಕ್ಕ ತಲೆಯಲ್ಲೂ ಕೂದಲು ಬೆಳೆಸಬಲ್ಲ ಎಣ್ಣೆ ತಮ್ಮಲ್ಲಿದೆ ಎಂದು ನಂಬಿಸಿ, ಪ್ರವೇಶಕ್ಕೆ 20 ರು. ಹಾಗೂ ಎಣ್ಣೆಗೆ 300 ರು. ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಬರಿಮಲೆಯಾತ್ರಿಕರಿಂದ ಅನ್ನಪ್ರಸಾದಕ್ಕೆ ಹಣ ವಸೂಲಿ ಮಾಡಬೇಡಿ: ಕೋರ್ಟ್
ಕೊಚ್ಚಿ: ಶಬರಿಮಲೆ ಯಾತ್ರೆ ವೇಳೆ ಭಕ್ತರಿಂದ ತಾತ್ಕಾಲಿಕ ವಿಶ್ರಾಂತಿ ಕೇಂದ್ರಗಳಲ್ಲಿ ನಡೆಯುವ ಅನ್ನದಾನಕ್ಕೆ ಹಣ ವಸೂಲಿ ಮಾಡದಂತೆ ತಿರುವಂಕೂರು ದೇವಸ್ವಂ ಮಂಡಳಿಗೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ.ಶಬರಿಮಲೆಯಾತ್ರೆ ವೇಳೆ ದೇವಸ್ಥಾನಗಳಲ್ಲಿ ಅನ್ನಪ್ರಸಾದಕ್ಕಾಗಿ ಭಕ್ತರಿಂದ ಡೊನೇಷನ್ ಸಂಗ್ರಹಿಸಲಾಗುತ್ತಿದೆ ಎಂಬ ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅನಿಲ್ ಕೆ.ನರೇಂದ್ರನ್ ಮತ್ತು ಮುರಳಿಕೃಷ್ಣ ಎಸ್. ಅವರು ಈ ಸಂಬಂಧ ನಿರ್ದೇಶನ ನೀಡಿದ್ದಾರೆ.
ಶಬರಿಮಲೆ ಯಾತ್ರಿಗಳಿಗೆ ತಾತ್ಕಾಲಿಕ ವಿಶ್ರಾಂತಿ ಕೇಂದ್ರ ಮತ್ತು ಸರ್ಕಾರದ ವ್ಯಾಪ್ತಿಯ ಇತರೆ ದೇವಾಲಯಗಳಲ್ಲಿ ಶೌಚಾಲಯ, ಅನ್ನಪ್ರಸಾದದಂಥ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಿರುವಂಕೂರು ದೇವಸ್ವಂ ಮಂಡಳಿ ಮತ್ತು ದೇವಸ್ವಂ ಆಯುಕ್ತರಿಗೆ ಇದೇ ವೇಳೆ ನ್ಯಾಯಾಲಯ ಸೂಚಿಸಿದೆ.
ರಾವತ್ ನಿಧನಕ್ಕೆ ಮಾನವ ದೋಷ ಕಾರಣ: ಸಮಿತಿ
ನವದೆಹಲಿ: ಸಶಸ್ತ್ರ ಪಡೆಗಳ ಮುಖ್ಯಸ್ಥ ಜ। ಬಿಪಿನ್ ರಾವತ್ ಅವರು 2021ರಲ್ಲಿ ತಮಿಳುನಾಡಿನಲ್ಲಿ ಸಾವನ್ನಪ್ಪಿದ ಹೆಲಿಕಾಪ್ಟರ್ ದುರಂತಕ್ಕೆ ಮಾನವ ದೋಷ ಕಾರಣ ಎಂದು ರಕ್ಷಣಾ ಸ್ಥಾಯಿ ಸಮಿತಿಯ ವರದಿ ಹೇಳಿದೆ. ಪೈಲಟ್ ದೋಷ ಇದಕ್ಕೆ ಕಾರಣ ಎಂದು ಹಿಂದೆ ಶಂಕಿಸಲಾಗಿತ್ತು. ಅದನ್ನು ವರದಿ ದೃಢಪಡಿಸಿದೆ. ಈ ಅಪಘಾತದಲ್ಲಿ ಜ। ರಾವತ್, ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಒಟ್ಟು 12 ಜನರು ಸಾವನ್ನಪ್ಪಿದರು.