ಟೋಕಿಯೋ: ಯಾವ ದೇಶವೂ ಇನ್ನೊಂದು ದೇಶದ ಮೇಲೆ ದಬ್ಬಾಳಿಕೆ ಮಾಡುವಂತಿಲ್ಲ. ಎಲ್ಲಾ ದೇಶಗಳೂ ಎಲ್ಲಾ ರೀತಿಯಲ್ಲೂ ತಮ್ಮ ಹಿತ ಕಾಪಾಡಿಕೊಳ್ಳಲು ಸ್ವತಂತ್ರವಾಗಿವೆ ಎಂದು ಕ್ವಾಡ್ ದೇಶಗಳು ಚೀನಾದ ಹೆಸರು ಹೇಳದೆಯೇ ಆ ದೇಶಕ್ಕೆ ಕಠಿಣ ಸಂದೇಶ ರವಾನಿಸಿವೆ.
ಜಪಾನ್ನಲ್ಲಿ ನಾಲ್ಕು ಕ್ವಾಡ್ ದೇಶಗಳ ವಿದೇಶಾಂಗ ಸಚಿವರ ಸಭೆ ನಡೆಯಿತು. ಒಕ್ಕೂಟದ ಸದಸ್ಯ ದೇಶಗಳಾದ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಭಾಗವಹಿಸಿದ್ದವು. ಈ ಸಭೆಯಲ್ಲಿ ಚೀನಾವನ್ನು ಹೆಸರಿಸದೆಯೇ ಜಗತ್ತಿನ ಪೂರ್ವ ಭಾಗದಲ್ಲಿ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಉಂಟಾಗಿರುವ ಆತಂಕಮಯ ಪರಿಸ್ಥಿತಿಯನ್ನು ಒಗ್ಗಟ್ಟಿನಿಂದ ಖಂಡಿಸಲಾಯಿತು.
ಅಲ್ಲದೆ, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಹೊಂದಾಣಿಕೆ ಇರಬೇಕು. ಪರಸ್ಪರರ ಸ್ವಾತಂತ್ರ್ಯವನ್ನು ಎಲ್ಲಾ ದೇಶಗಳು ಒಪ್ಪಿಕೊಳ್ಳಬೇಕು. ಮಾನವ ಹಕ್ಕುಗಳು, ಪ್ರಜಾಸತ್ತಾತ್ಮಕ ಮೌಲ್ಯಗಳು, ಸಾರ್ವಭೌಮತ್ವ ಹಾಗೂ ಗಡಿಯನ್ನು ಎಲ್ಲರೂ ಗೌರವಿಸಬೇಕು. ಇಂಡೋ-ಪೆಸಿಫಿಕ್ ಪ್ರದೇಶದ ಹಿತ ರಕ್ಷಣೆಗೆ ಕ್ವಾಡ್ ಬದ್ಧವಿದೆ ಎಂದು ನಾಲ್ಕೂ ದೇಶಗಳು ಪ್ರತಿಪಾದಿಸಿದವು.
ಕ್ವಾಡ್ ದೇಶಗಳ ವಿದೇಶಾಂಗ ಸಚಿವರಾದ ಭಾರತದ ಎಸ್.ಜೈಶಂಕರ್, ಅಮೆರಿಕದ ಆ್ಯಂಟನಿ ಬ್ಲಿಂಕನ್, ಜಪಾನ್ನ ಯೋಕೋ ಕಮಿಕಾವಾ ಹಾಗೂ ಆಸ್ಟ್ರೇಲಿಯಾದ ಪೆನ್ನಿ ವಾಂಗ್ ಸಭೆಯಲ್ಲಿ ಭಾಗವಹಿಸಿದ್ದರು.
ಜಗತ್ತಿನ ಪೂರ್ವ ಭಾಗದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯ ಹಾಗೂ ಉಪಟಳವನ್ನು ಹತ್ತಿಕ್ಕಲೆಂದೇ ಕ್ವಾಡ್ ಒಕ್ಕೂಟ ಜನಿಸಿದೆ.
ಕ್ವಾಡ್ ಘರ್ಷಣೆ ಪ್ರಚೋದಿಸುತ್ತಿದೆ: ಚೀನಾ ಪ್ರತಿಕ್ರಿಯೆಬೀಜಿಂಗ್: ಕ್ವಾಡ್ ದೇಶಗಳ ಎಚ್ಚರಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಚೀನಾ ‘ಏಷ್ಯಾ ಫೆಸಿಫಿಕ್ ವಲಯದ ಇತರ ದೇಶಗಳನ್ನು ಅಭಿವೃದ್ಧಿ ಪಡಿಸಲು ಭಾರತ ಮತ್ತು ಅಮೆರಿಕ ಸೇರಿದಂತೆ ಕ್ವಾಡ್ ದೇಶಗಳು ಉದ್ವಿಗ್ನತೆಯನ್ನು ಸೃಷ್ಟಿಸಲು, ಘರ್ಷಣೆಯನ್ನು ಪ್ರಚೋದಿಸುತ್ತಿವೆ’ ಎಂದು ಆರೋಪಿಸಿದೆ. ‘ಕ್ವಾಡ್ ಕೃತಕವಾಗಿ ಚಿಂತೆಯನ್ನು ಸೃಷ್ಟಿಸುತ್ತಿದೆ. ಘರ್ಷಣೆಯನ್ನು ಹೆಚ್ಚಿಸುತ್ತಿದೆ. ಏಷ್ಯಾ ಫೆಸಿಫಿಕ್ ವಲಯದ ಇತರ ದೇಶಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ. ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು, ಇತರರ ಮೇಲೆ ಅವರ ಕಾನೂನುಗಳನ್ನು ಹೇರುತ್ತಿದ್ದಾರೆ ’ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿನ್ ಜಿಯಾನ್ ಹೇಳಿದ್ದಾರೆ.