ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಾಜಕೀಯ ಕೆಸರೆರಚಾಟದ ನಡುವೆಯೇ ರಬಕವಿ-ಮಹಿಷವಾಡಗಿ ಸೇತುವೆ ನಿರ್ಮಾಣ ಕಾಮಗಾರಿ ಬಿರುಸಿನಿಂದ ಸಾಗಿದೆ.೮ ವರ್ಷಗಳಿಂದ ನಡೆಯುತ್ತಿದ್ದ ಆಮೆಗತಿಯ ಕಾಮಗಾರಿಯಿಂದ ಬೇಸತ್ತು ವೇಗದ ಕಾಮಗಾರಿಗೆ ಆಗ್ರಹಿಸಿ ಡಾ.ರವಿ ಜಮಖಂಡಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಸೇರಿ ಹಲವಾರು ಪ್ರಯತ್ನಗಳು ನಡೆದಿದ್ದವು. ಇದೀಗ ಅವೆಲ್ಲದಕ್ಕೂ ಪ್ರಬಲವಾಗಿ ಕಾಂಗ್ರೆಸ್-ಬಿಜೆಪಿ ವಾಗ್ವಾದದ ಮಧ್ಯೆ ಸುಮಾರು ೫೦ಕ್ಕೂ ಅಧಿಕ ಕಾರ್ಮಿಕರು ನದಿಯೊಳಗಿನ ನಂ.೭ ಮತ್ತು ನಂ.೮ರ ಪಿಲ್ಲರ್ ಅಳವಡಿಕೆ ಕಾರ್ಯ ವೇಗವಾಗಿ ನಡೆಯುತ್ತಿದೆ.ಬೇಸಿಗೆ ಇನ್ನು ೧೫ ದಿನಗಳಷ್ಟೇ ಬಾಕಿಯಿದ್ದು, ಅಷ್ಟರೊಳಗಾಗಿ ಪಿಲ್ಲರ್ ನಂ.೭ ಮತ್ತು ೮ರ ಕಾರ್ಯಗಳು ಪೂರ್ಣಗೊಳ್ಳುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ.
ಈ ಎರಡೂ ಪಿಲ್ಲರ್ಗಳ ಕಾರ್ಯ ೧೫ ದಿನಗಳೊಳಗಾಗಿ ಮುಗಿದಲ್ಲಿ ಹಿರಿಯ ಅಧಿಕಾರಿಗಳ ಭರವಸೆಯಂತೆ ಮಾರ್ಚ್ ಒಳಗೆ ಸೇತುವೆ ಕಾರ್ಯ ಸಂಪೂರ್ಣಗೊಳ್ಳುವದರಲ್ಲಿ ಯಾವುದೇ ಸಂದೇಹವಿಲ್ಲ.ಜನತೆ ಫುಲ್ ಖುಷ್ : ಹಾಲಿ ಶಾಸಕ ಸಿದ್ದು ಸವದಿ ಹಾಗೂ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸಿದ್ದು ಕೊಣ್ಣೂರ ದಿನ ಬಿಟ್ಟು ದಿನ ಸೇತುವೆ ಕಾಮಗಾರಿ ವೀಕ್ಷಣೆಯಲ್ಲಿ ತೊಡಗಿದ್ದರೆ ರಬಕವಿ ಹಾಗೂ ಬನಹಟ್ಟಿಯ ಜನತೆ ಕಾಮಗಾರಿ ಸ್ಥಳದಲ್ಲಿಯೇ ಬಿಡಾರ ಹೂಡಿದ್ದು,ಕಾಮಗಾರಿ ವೇಗ ಪಡೆದುಕೊಂಡಿರುವುದಕ್ಕೆ ಅವಳಿ ನಗರದ ಜನತೆ ಫುಲ್ ಖುಷ್ ಆಗಿದ್ದಾರೆ.