ಮಂಗಳೂರು: ಆಯುರ್ವೇದ ಚಿಕಿತ್ಸಾ ಪದ್ಧತಿ ಅನೇಕ ವರ್ಷಗಳ ಇತಿಹಾಸವುಳ್ಳ ಪುರಾತನ ಪದ್ದತಿ. ಸಾಮಾನ್ಯವಾಗಿ ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುತ್ತೇವೆ. ಆದರೆ, ರೋಗಕ್ಕೂ ಮುನ್ನ ಆಯುರ್ವೇದ ಚಿಕಿತ್ಸೆ ಪಡೆದುಕೊಂಡರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಕನ್ನಡ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಪ್ರಪ್ರಥಮ ಆಯುರ್ವೇದ ಚಿಕಿತ್ಸಾಲಯ ಶ್ರೀ ವೇದಂ ಆಯು ಆಯುರ್ವೇದ ಆಂಡ್‌ ವೆಲ್‌ನೆಸ್‌ ಸೆಂಟರ್‌ ನೂತನ ಆಸ್ಪತ್ರೆ ನಗರದ ಯೆಯ್ಯಾಡಿ-ಬಾರೆಬೈಲು ರಸ್ತೆಯಲ್ಲಿ ಭಾನುವಾರ ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು.

ನಮ್ಮ ಮಣ್ಣಿನ ವೈದ್ಯಕೀಯ ಪದ್ಧತಿಯಾದ ಆಯುರ್ವೇದ ಚಿಕಿತ್ಸೆ ಇಂದಿನ ಕಾಲ ಘಟ್ಟದಲ್ಲಿ ಅನಿವಾರ್ಯ. ಶ್ರೀ ವೇದಂ ಆಯು ಆಯುರ್ವೇದ ಆಂಡ್‌ ವೆಲ್‌ನೆಸ್‌ ಸೆಂಟರ್‌ ಸುಂದರವಾಗಿ ನಿರ್ಮಾಣಗೊಂಡಿದ್ದು, ರೋಗಿಗಳಿಗೆ ಉತ್ತಮ ಸೇವೆ ಸಿಗಲಿ ಎಂದರು.

ಕರ್ಣಾಟಕ ಬ್ಯಾಂಕ್‌ ಮುಖ್ಯ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ, ಸಿಇಒ ರಾಘವೇಂದ್ರ ಎಸ್.‌ ಭಟ್‌ ಮಾತನಾಡಿ, ಕಾಯಿಲೆ ಇಲ್ಲದ ಮನೋವ್ಯಾಧಿಗಳಿಗೂ ಇಂದಿನ ಕಾಲದಲ್ಲಿ ಚಿಕಿತ್ಸೆ ಅನಿವಾರ್ಯ. ಆಯುರ್ವೇದ ಚಿಕಿತ್ಸೆಯು ಭಾರತೀಯ ಪರಂಪರೆಯ ಅಮೂಲ್ಯ ಸಂಪತ್ತಾಗಿದ್ದು, ಜನರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದರು.ಶ್ರೀ ವೇದಂ ಆಯು ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ.ಕೇಶವರಾಜ್‌ ಸ್ವಾಗತಿಸಿ, 20 ಹಾಸಿಗೆಗಳ ಸಾಮರ್ಥ್ಯದ ಈ ಚಿಕಿತ್ಸಾಲಯದಲ್ಲಿ ಪಂಚಕರ್ಮ ಮತ್ತು ಕೇರಳೀಯ ಕರ್ಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನುರಿತ ಸಿಬ್ಬಂದಿ, ವಿಶ್ರಾಂತಿ ಚಿಕಿತ್ಸಾ ಕ್ರಮಗಳು, ಆರೋಗ್ಯ ಮತ್ತು ಸೌಂದರ್ಯ ಸಂಬಂಧಿಯಾದ ವಿವಿಧ ಚಿಕಿತ್ಸಾ ಪ್ಯಾಕೇಜುಗಳು, ಸುಸಜ್ಜಿತ ಔಷಧಾಲಯ ಹಾಗೂ ಯೋಗ ಮತ್ತು ಪ್ರಾಣಾಯಾಮ ತರಗತಿಗಳು ಲಭ್ಯವಿರುತ್ತವೆ ಎಂದರು.ಸಮಾಜ ಸೇವಕರಾದ ಪದ್ಮಶ್ರೀ ಡಾ.ಹರೇಕಳ ಹಾಜಬ್ಬ, ಕೊರಿನ್‌ ರಸ್ಕಿನ್ಹಾ, ಕೆ. ನಾರಾಯಣ ಮಾಸ್ಟರ್‌ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಶ್ರೀದೇವಿ ಅವರು ಉಪಸ್ಥಿತರಿದ್ದರು. ಚೇತನ್‌ ಪಿಲಿಕುಳ ನಿರೂಪಿಸಿದರು.


ನೂತನ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ನಾಡಿ ಪರೀಕ್ಷೆ, ಕೇರಳ ಪಂಚಕರ್ಮ ಚಿಕಿತ್ಸೆ, ಮಹಿಳಾ ಆರೋಗ್ಯ ಮತ್ತು ಸ್ತ್ರೀ ರೋಗ ಚಿಕಿತ್ಸೆ, ಪೈಲ್ಸ್‌ ಮತ್ತು ಫಿಸ್ಟುಲಾ ಚಿಕಿತ್ಸೆ, ಯೋಗ-ಧ್ಯಾನ ವೆಲ್‌ನೆಸ್‌ ಸ್ಪಾ, ಬೆನ್ನು ನೋವು, ಬೆನ್ನು ಹುರಿ ಸಮಸ್ಯೆಗಳ ಆರೈಕೆ, ಮೊಣಕಾಲು ಮತ್ತು ಸಂಧಿ ನೋವು ಚಿಕಿತ್ಸೆ, ತಲೆನೋವು, ಸೈನಸ್‌ ಮತ್ತು ಒತ್ತಡ ನಿರ್ವಹಣೆ, ಮಧುಮೇಹ ಮತ್ತು ರಕ್ತದೊತ್ತಡ ಆರೈಕೆ, ಚರ್ಮ ಮತ್ತು ಜೀವನಶೈಲಿ ಸಂಬಂಧಿತ ಚಿಕಿತ್ಸೆಗಳು ಲಭ್ಯ ಇರಲಿದೆ ಎಂದು ಡಾ| ಕೇಶವರಾಜ್‌ ಮಾಹಿತಿ ನೀಡಿದರು.‌