ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟ್ ಆಫ್ ಲೀವಿಂಗ್‌ ಗೆ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಸೈ, ಎಎಸ್ಸೈ, ನಾಲ್ವರು ಪೇದೆ ಸೇರಿದಂತೆ ಆರು ಮಂದಿಯ ತಲೆದಂಡವಾಗಿದೆ.

ಪಿಎಸ್‌ಐ ದುರ್ಗೇಗೌಡ, ಎಎಸ್‌ಐ ಶಂಕರ್, ನಾಲ್ವರು ಪೇದೆಗಳು ಸೇರಿದಂತೆ ಒಟ್ಟು ಆರು ಮಂದಿಯನ್ನು ಅಮಾನತುಪಡಿಸಿ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ.

ಮೇ 10ರಂದು ಪ್ರಧಾನಿ ಮೋದಿರವರು ಆರ್ಟ್ ಆಫ್ ಲೀವಿಂಗ್ ಗೆ ಭೇಟಿ ನೀಡುವ ಸಮಯದಲ್ಲಿ ಬಿಗಿ ಬಂದೋಬಸ್ತ್ ಕರ್ತವ್ಯಕ್ಕೆ ಈ ಆರು ಮಂದಿಯನ್ನು ನಿಯೋಜನೆ ಮಾಡಲಾಗಿತ್ತು. ಸ್ಫೋಟಕ ಪತ್ತೆಯಾದ ಸ್ಥಳದ ಬಳಿಯೇ ಇವರೆಲ್ಲರು ಭದ್ರತೆ ನೋಡಿಕೊಳ್ಳುತ್ತಿದ್ದರು. ಹಿಗಾಗಿ ಅಲರ್ಟ್​​ ಇರಲಿಲ್ಲ ಮತ್ತು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಕಾರಣ ನೀಡಿ ಪಿಎಸ್ಸೈ ದುರ್ಗೇಗೌಡ, ಎಎಸ್ಸೈ ಶಂಕರ್, ನಾಲ್ವರು ಪೇದೆಗಳನ್ನು ಅಮಾನತು ಮಾಡಲಾಗಿದೆ.

ವಿವಿಐಪಿಗಳು ಬರುವ ಮುನ್ನ ಇಡೀ ಮಾರ್ಗವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿ ಹದ್ದಿನ ಕಣ್ಣಿಡಬೇಕಾದದ್ದು ಪೊಲೀಸರ ಕರ್ತವ್ಯ. ಆದರೆ, ಸ್ಫೋಟಕಗಳು ಪತ್ತೆಯಾದ ಸ್ಥಳದಲ್ಲೇ ಇದ್ದರೂ ಪೊಲೀಸ್ ಸಿಬ್ಬಂದಿ ಯಾವುದೇ ರೀತಿಯ ಮುನ್ನೆಚ್ಚರಿಕೆ ವಹಿಸಿರಲಿಲ್ಲ ಮತ್ತು ಅಲರ್ಟ್ ಆಗಿರಲಿಲ್ಲ ಎಂಬುದು ಉನ್ನತ ಮಟ್ಟದ ತನಿಖೆಯಿಂದ ಸಾಬೀತಾಗಿದೆ.

ಕರ್ತವ್ಯ ವೇಲೆ ತೋರಿದ ಈ ನಿರ್ಲಕ್ಷ್ಯ ಪ್ರಧಾನಮಂತ್ರಿಗಳ ಸುರಕ್ಷತೆಗೆ ಧಕ್ಕೆ ತರುವಂತಹ ಗಂಭೀರ ಲೋರ ಎಂದು ಪರಿಗಣಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆರು ಮಂದಿಯನ್ನು ಅಮಾನುತಗೊಳಿಸಿದ್ದಾರೆ.


ಅಂದು ಏನಾಗಿತ್ತು ?:

ಪ್ರಧಾನಿ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದರು. ಅವರು ಬರುವ ಕೇವಲ ಎರಡು ಗಂಟೆಗಳ ಮೊದಲು, ಅಂದರೆ ಬೆಳಿಗ್ಗೆ 9 ಗಂಟೆ ವೇಳೆಗೆ, ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಸಮೀಪ ಅನುಮಾನಾಸ್ಪದ ಬಾಕ್ಸ್ ಒಂದು ಪತ್ತೆಯಾಗಿತ್ತು.

ಭದ್ರತೆಗೆ ನಿಯೋಜನೆಗೊಂಡಿದ್ದ ಪೇದೆಯೊಬ್ಬರು ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಈ ಬಾಕ್ಸ್ ಅನ್ನು ಗಮನಿಸಿದ್ದರು. ಸುದ್ದಿ ತಿಳಿದ ಕೂಡಲೇ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿತ್ತು. ಬಾಕ್ಸ್ ಅನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಸ್ಫೋಟಕಗಳು ಕಂಡು ಬಂದಿದ್ದವು. ತಕ್ಷಣವೇ ಸ್ಫೋಟಕಗಳನ್ನು ವಶಕ್ಕೆ ಪಡೆದ ಪೊಲೀಸರು, ಇಡೀ ಮಾರ್ಗವನ್ನು ಮತ್ತೊಮ್ಮೆ ತೀವ್ರ ತಪಾಸಣೆಗೆ ಒಳಪಡಿಸಿದ ಬಳಿಕವೇ ಪ್ರಧಾನಿ ಸಂಚಾರಕ್ಕೆ ಅವಕಾಶ ನೀಡಿದ್ದರು.

ಆ ಬಾಕ್ಸ್‌ನಲ್ಲಿ ಏನಿತ್ತು?:

ಸುದ್ದಿ ತಿಳಿದ ಕೂಡಲೇ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿತ್ತು. ಬಾಕ್ಸ್ ಅನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಎರಡು ಜಿಲೆಟಿನ್ ಕಡ್ಡಿಗಳು, ನಾಲ್ಕು ಗಂಧದ ಕಡ್ಡಿಗಳು, ಒಂದು ಮ್ಯಾಚ್ ಬಾಕ್ಸ್ ಹಾಗೂ ಎರಡು ಬ್ಯಾಟರಿಗಳು ಕಂಡುಬಂದಿದ್ದವು. ಆರೋಪಿಯು ಸ್ಫೋಟಕಗಳನ್ನು ಬಾಕ್ಸ್‌ನಲ್ಲಿಟ್ಟು ಸುತ್ತಲೂ ಟೇಪ್ ಅಂಟಿಸಿದ್ದನು. ತಕ್ಷಣವೇ ಸ್ಫೋಟಕಗಳನ್ನು ವಶಕ್ಕೆ ಪಡೆದ ಪೊಲೀಸರು, ಇಡೀ ಮಾರ್ಗವನ್ನು ಮತ್ತೊಮ್ಮೆ ತೀವ್ರ ತಪಾಸಣೆಗೆ ಒಳಪಡಿಸಿದ್ದರು.