ಮಂಗಳೂರು: ಪತ್ರಕರ್ತರು ಒಬ್ಬ ವ್ಯಕ್ತಿಯ ಉತ್ತಮ ಕೆಲಸಗಳನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತಾರೆ. ಪತ್ರಕರ್ತರ ಬದ್ಧತೆ, ಪ್ರಾಮಾಣಿಕತೆ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.ಭಾನುವಾರ ಮಂಗಳೂರು ಪ್ರೆಸ್ ಕ್ಲಬ್, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾಭವನ ಟ್ರಸ್ಟ್ ವತಿಯಿಂದ ಭಾನುವಾರ ಮಂಗಳೂರಿನ ರೆಡ್ ಕ್ರಾಸ್ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ದಿನಾಚರಣೆ, ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ- 2025, ಮತ್ತು ಹಿರಿಯ ಪತ್ರಕರ್ತರಿಗೆ ಪ್ರೆಸ್ಕ್ಲಬ್ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಳೆಯನ್ನು ಲೆಕ್ಕಿಸದೆ ಪೊಲೀಸರಷ್ಟೆ ವೇಗವಾಗಿ ಘಟನಾ ಸ್ಥಳಗಳಿಗೆ ತೆರಳಿ ಸಮಾಜಕ್ಕೆ ತಪ್ಪು ಸಂದೇಶ ಹೋಗದಂತೆ ವಿವೇಚನೆಯಿಂದ ವರದಿ ಮಾಡುತ್ತಾರೆ. ಒತ್ತಡದಿಂದ ಕೆಲಸ ಮಾಡುವ ಪತ್ರಕರ್ತರನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದರು.‘ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ-2025‘ ಪ್ರಶಸ್ತಿ ಪ್ರದಾನ ಮಾಡಿದ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪಪೊಲೀಸ್ ಆಯುಕ್ತ ಎಚ್.ಎನ್. ಮಿಥುನ್ ಮಾತನಾಡಿ, ಪತ್ರಕರ್ತರು ದಿನನಿತ್ಯ ಸುದ್ದಿ, ಲೇಖನಗಳನ್ನು ಬರೆದು ಎಲ್ಲರಿಗಿಂತ ಮೊದಲು ಘಟನೆಯನ್ನು ದಾಖಲಿಸುತ್ತಾರೆ. ಸಮಾಜದಲ್ಲಿ ಗೊಂದಲ, ಶಾಂತಿಭಂಗದ ವಾತಾವರಣವಿದ್ದಾಗ ಸಂವೇದನಾಶೀಲರಾಗಿ ವರದಿ ಮಾಡುವುದು ತುಂಬಾ ಮುಖ್ಯ ಎಂದರು.ಪ್ರಶಸ್ತಿ ಪ್ರದಾನ, ಗೌರವ ಸಮ್ಮಾನ: ಸಮಾಜ ಸೇವಕ ದೀಪಕ್ ಜಿ. ಬೆಳ್ತಂಗಡಿ ಅವರಿಗೆ ‘ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ-2025‘ ಪ್ರದಾನ ಮಾಡಲಾಯಿತು. ಹಿರಿಯ ಪತ್ರಕರ್ತರು, ಪ್ರಶಸ್ತಿ ಪುರಸ್ಕೃತ ಪತ್ರಕರ್ತರು, ತಾಲೂಕು ಘಟಕಗಳ ನೂತನ ಅಧ್ಯಕ್ಷರನ್ನು ಅಭಿನಂದಿಸಲಾಯಿತು. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಅವರು ಹಿರಿಯ ಪತ್ರಕರ್ತರನ್ನು ಗೌರವಿಸಿದರು. ರೆಡ್ ಕ್ರಾಸ್ ಚೇರ್ ಮೆನ್ ಸಿ.ಎ.ಶಾಂತರಾಮ ಶೆಟ್ಟಿ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಇದ್ದರು.
ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ, ಆತ್ಮಭೂಷಣ್ ಪರಿಚಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತ ಲೋಕೇಶ್ ರೈ ಹಾಗೂ ಪ್ರಜ್ಞಾ ಒಡಿಲ್ನಾಳ ನಿರ್ವಹಿಸಿದರು.
ಮಲ್ಲಿಕಾ ಶೆಟ್ಟಿ ಮತ್ತು ಟಿ.ವಿ.ಗಿರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.