ಕನ್ನಡಪ್ರಭ ವಾರ್ತೆ ಲೋಕಾಪುರ

ಬಾಗಲಕೋಟೆಯಿಂದ ಕುಡಚಿವರೆಗಿನ ರೈಲು ಮಾರ್ಗ ಅಪೂರ್ಣ ಕುರಿತಾಗಿ ಕನ್ನಡಪ್ರಭ ಮೇ 22ರಂದು ಪ್ರಕಟಿಸಿದ್ದ ವಿಶೇಷ ವರದಿಗೆ ನೈಋತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ಮೂಲಕ ಸಕಾರಣ ಒದಗಿಸಿದ್ದಾರೆ. 16 ವರ್ಷವಾದ್ರೂ ಕುಡಚಿ ರೈಲು ಮಾರ್ಗ ಅಪೂರ್ಣ ಎಂಬ ತಲೆಬರಹದಡಿ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು.

ಯೋಜನೆ ವಿಳಂಬಕ್ಕೆ ರೈಲ್ವೆ ಇಲಾಖೆ ನೀಡಿರುವ ಕಾರಣಗಳಿವು: ಬಾಗಲಕೋಟೆ-ಕುಡಚಿ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ (142 ಕಿ.ಮೀ) ಯೋಜನೆ 2010-11ರಲ್ಲಿ ಕರ್ನಾಟಕ ಸರ್ಕಾರದೊಂದಿಗೆ 50:50 ವೆಚ್ಚ ಹಂಚಿಕೆ ಆಧಾರದಲ್ಲಿ ಅನುಮೋದನೆಯಾಗಿದ್ದು, ಭೂಸ್ವಾಧೀನ ವೆಚ್ಚವನ್ನು ಸಂಪೂರ್ಣವಾಗಿ ಕರ್ನಾಟಕ ಸರ್ಕಾರವೇ ಭರಿಸಬೇಕಾಗಿದೆ. ಅಲ್ಲದೆ, ಬಾಗಲಕೋಟೆ-ಖಜ್ಜಿಡೋಣಿ (30.5 ಕಿ.ಮೀ) ವಿಭಾಗಕ್ಕೆ ಭೂಮಿಯನ್ನು ಜುಲೈ 2013ರಲ್ಲಿ ಹಸ್ತಾಂತರಿಸಲಾಗಿದ್ದು, ಈ ವಿಭಾಗವನ್ನು ಜೂನ್ 2017ರಲ್ಲಿ ಯಶಸ್ವಿಯಾಗಿ ಕಾರ್ಯಾರಂಭ ಮಾಡಿದೆ.

ಮಾರ್ಚ್ 2023ರ ವೇಳೆಗೆ ಲೋಕಾಪುರದಿಂದ ಜಮಖಂಡಿ ರಸ್ತೆಯವರೆಗೆ (47 ಕಿಮೀ) ಶೇ. 92ರಷ್ಟು ಭೂಮಿ ಹಸ್ತಾಂತರವಾಗಿದೆ. ಲೋಕಾಪುರ-ಯಾದವಾಡ (22 ಕಿಮೀ) ಮತ್ತು ಯಾದವಾಡ-ಜಮಖಂಡಿ ರಸ್ತೆ (25 ಕಿಮೀ) ವಿಭಾಗಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಉಂಟಾದ ಹಲವು ಅಡೆತಡೆಗಳು ಹಾಗೂ ಭೂಮಿಗೆ ಕಡಿಮೆ ಪರಿಹಾರ ನೀಡಲಾಗಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿರುವುದರಿಂದ ಕಾಮಗಾರಿಗಳ ಪ್ರಗತಿಗೆ ವ್ಯತ್ಯಯ ಉಂಟಾಗಿದೆ. ಆದಾಗ್ಯೂ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಭೂ ಗಡಿ ವ್ಯತ್ಯಾಸಗಳು ಹಾಗೂ ಕಂದಾಯ ದಾಖಲೆಗಳಲ್ಲಿನ ಅಸಂಗತತೆಗಳಿಂದಾಗಿ ಕೆಲವು ಭೂ ಮಾಲೀಕರು ಬಿಟ್ಟುಹೋದ ಆಸ್ತಿಗಳ ಕುರಿತು ಆಕ್ಷೇಪಣೆಗಳು ವ್ಯಕ್ತವಾಗಿವೆ. ದಾಖಲೆಗಳು ಮತ್ತು ಸ್ಥಳ ಗಡಿಗಳ ನಿಖರತೆ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಗಳ ನಡುವಿನ ಸಮನ್ವಯದ ಮೂಲಕ ಈ ಸಮಸ್ಯೆ ಪರಿಹರಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.


ಹೆಚ್ಚುವರಿ ಪರಿಹಾರ, ಉಳಿದ ಆಸ್ತಿಗಳು ಹಾಗೂ ಭೂ ಮಾಲೀಕತ್ವಕ್ಕೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳ ಕುರಿತು ಧಾರವಾಡ ಹೈಕೋರ್ಟ್‌ನಲ್ಲಿ ಹಲವು ಪ್ರಕರಣ ಮತ್ತು ರಿಟ್ ಅರ್ಜಿಗಳು ದಾಖಲಾಗಿದ್ದು, ಇವುಗಳ ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿದೆ. ಇದು ಕೂಡ ವಿಳಂಬಕ್ಕೆ ಕಾರಣವಾಗಿದೆ.

ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರ ವಾರಾಂತ್ಯ ಸಭೆಗಳ ಮೂಲಕ ಎಲ್ಲಾ ವಿಷಯಗಳನ್ನು ಪರಿಶೀಲಿಸಿ, ಭೂಮಾಲೀಕರೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ನಿರಂತರ ಪ್ರಯತ್ನ ಮಾಡುತ್ತಿವೆ. ಆದರೆ ಅಗತ್ಯವಿರುವ ಭೂಮಿಯನ್ನು ಇನ್ನೂ ಸಂಪೂರ್ಣವಾಗಿ ಹಸ್ತಾಂತರಿಸದ ಕಾರಣ ಜಮಖಂಡಿ ರಸ್ತೆ-ಕುಡಚಿ (57 ಕಿಮೀ) ವಿಭಾಗದ ಟೆಂಡ‌ರ್ ಪ್ರಕ್ರಿಯೆ ಇನ್ನೂ ಆರಂಭಿಸಿಲ್ಲ.

ಇದರ ನಡುವೆ ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ. ಭಾಂಡಗೆ ಅವರು ಮೇ 22ರಂದು ನೈಋತ್ಯ ರೈಲ್ವೆ ಮಹಾಪ್ರಬಂಧಕರೊಂದಿಗೆ ಯೋಜನೆ ಪರಿಶೀಲಿಸಿ, ಎದುರಾಗಿರುವ ಸಮಸ್ಯೆಗಳ ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಭರವಸೆ ನೀಡಿದೆ.