ವಾರಾಂತ್ಯದಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ದುಬಾರೆ ಪ್ರವಾಸಿ ಕೇಂದ್ರ ಪ್ರವಾಸಿಗರ ಕೊರತೆಯಿಂದ ಬಿಕೋ ಎನ್ನುವಂತಹ ಸ್ಥಿತಿ ಎದುರಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ ವಾರಾಂತ್ಯದಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ದುಬಾರೆ ಪ್ರವಾಸಿ ಕೇಂದ್ರ ಪ್ರವಾಸಿಗರ ಕೊರತೆಯಿಂದ ಬಿಕೋ ಎನ್ನುವಂತಹ ಸ್ಥಿತಿ ಎದುರಿಸುವಂತಾಗಿದೆ. ಸೋಮವಾರ ನಡೆದ ಆನೆ ಕಾಳಗದ ನಡುವೆ ಪ್ರವಾಸಿ ಮಹಿಳೆಯ ಸಾವು ಘಟನೆಯಿಂದ ಆನೆ ಶಿಬಿರಕ್ಕೆ ಸರ್ಕಾರ ಪ್ರವಾಸಿಗರ ನಿರ್ಬಂಧ ಹೇರಿದ್ದು ಪ್ರವಾಸಿಗರು ದುಬಾರೆ ಕಡೆಗೆ ತೆರಳದೆ ಕುಶಾಲನಗರದ ಕಾವೇರಿ ನಿಸರ್ಗಧಾಮ ಮತ್ತಿತರ ಕೇಂದ್ರಗಳಿಗೆ ತೆರಳುತ್ತಿರುವ ದೃಶ್ಯ ಕಂಡು ಬಂದಿದೆ. ದುಬಾರೆಗೆ ತೆರಳುವ ಪ್ರವಾಸಿಗರು ಆನೆ ಶಿಬಿರಕ್ಕೆ ತೆರಳಲು ಅವಕಾಶ ಇಲ್ಲದ ಕಾರಣ ಹಿಂತಿರುಗುತ್ತಿರುವುದು ಒಂದೆಡೆಯಾದರೆ, ಬೆರಳೆಣಿಕೆಯಷ್ಟು ಮಂದಿ ಪ್ರವಾಸಿಗರು ಮಾತ್ರ ರಾಪ್ಟಿಂಗ್ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗೋಚರಿಸಿದೆ. ದುಬಾರೆ ಘಟನೆಗೂ ಮುನ್ನ ವಾರಾಂತ್ಯಕ್ಕೆ ಸರಾಸರಿ 3 ಸಾವಿರದಿಂದ 5 ಸಾವಿರದಷ್ಟು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಈ ವಾರ ಅಂದಾಜು 500 ರಷ್ಟು ಮಂದಿ ಆಗಮಿಸಿದ್ದು ಪ್ರವಾಸಿಗರ ಸಂಖ್ಯೆ ವಿರಳವಾಗಿದೆ. ಆನೆ ಶಿಬಿರಕ್ಕೆ ಪ್ರವಾಸಿಗರ ನಿರ್ಬಂಧ ಹಿನ್ನಲೆಯಲ್ಲಿ ಈ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ಉದ್ಯಮಿ ಕೆ ಎಸ್ ರತೀಶ್ ತಿಳಿಸಿದ್ದಾರೆ.ದುಬಾರೆ ಆನೆ ಶಿಬಿರದಲ್ಲಿ ನಡೆದ ಘಟನೆಯ ನಂತರ ಕೇವಲ ಶೇ. 10ರಷ್ಟು ಮಾತ್ರ ಪ್ರವಾಸಿ ವಾಹನಗಳು ಬಂದಿರುವ ಬಗ್ಗೆ ದುಬಾರೆ ಕೇಂದ್ರದ ವಾಹನ ನಿಲುಗಡೆ ಶುಲ್ಕ ಟೆಂಡರ್ ಕರೆದಿರುವ ಪ್ರದೀಪ್ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ದುಬಾರೆ ಮತ್ತು ಸುತ್ತಮುತ್ತ ವ್ಯಾಪ್ತಿಯ ರೆಸಾರ್ಟ್ ಗಳು ಕೂಡ ಈ ವಾರ ಪ್ರವಾಸಿಗರಿಲ್ಲದೆ ಖಾಲಿ ಬಿದ್ದಿವೆ ಎಂದು ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರುಗಳು ಅಳಲು ತೋಡಿಕೊಂಡರು.