ವಿಶ್ವ ಜೇನು ದುಂಬಿ ದಿನಾಚರಣೆ, ಜೇನು ಕೃಷಿ ತರಬೇತಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಕೃಷಿಗೆ ಪೂರಕವಾದ ಜೇನು ಕೃಷಿಯನ್ನು ಮಾಡುವುದಕ್ಕೆ ರೈತರು ಮುಂದಾಗಬೇಕು. ಈ ಕುರಿತು ಪ್ರತಿಯೊಂದು ಭಾಗದಲ್ಲಿಯೂ ಜೇನು ಕೃಷಿಯ ಕುರಿತು ಮಾಹಿತಿ ಕಾರ್ಯಾಗಾರ ನಡೆಯಬೇಕು. ನಮ್ಮ ಸಂಘದಿದ ಜೇನು ಕೃಷಿಗೆ ಹೆಚ್ಚು ಆಧ್ಯತೆ ನೀಡಿ ಹೆಚ್ಚಿನ ರೈತರನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಹೇಳಿದರು.

ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ತೋಟಗಾರಿಕಾ ಇಲಾಖೆಯಿಂದ ನಡೆದ ವಿಶ್ವ ಜೇನು ದುಂಬಿ ದಿನಾಚರಣೆ, ಜೇನು ಕೃಷಿ ತರಬೇತಿ ಉದ್ಘಾಟಿಸಿ ಹಾಗೂ ಪ್ರಗತಿಪರ ಜೇನು ಕೃಷಿಕ ಶ್ರೀಪಾದ ಹೆಗಡೆ ಬಕ್ಕೆಮನೆ ಅವರನ್ನು ಸನ್ಮಾನಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಪಾದ ಹೆಗಡೆ ಬಕ್ಕೆಮನೆ ಜೇನು ಕೃಷಿ ನನ್ನ ಅವಿಭಾಜ್ಯ ಅಂಗ. ಜೇನಿನಿಂದ ಕ್ರಿಯಾಶೀಲತೆ ಹಾಗೂ ಒಗ್ಗಟನ್ನು ಕಾಣಬಹುದಾಗಿದೆ. ಯಾವುದೇ ಕೃಷಿಯಲ್ಲಿ ಸಾಧನೆ ಮಾಡಿ ಅವರನ್ನು ಗೌರವಿಸುವುದರಿಂದ ಮತ್ತೊಬ್ಬರಿಗೆ ಇದು ಪ್ರೇರಣೆ ಆಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಅನೇಕರಿಗೆ ಜೇನು ತರಬೇತಿ ನೀಡಿ ಜೇನು ಕೃಷಿಯತ್ತ ಬರುವಂತೆ ಮಾಡಿದ್ದೇನೆ ಎಂದರು.


ಪ್ರಗತಿಪರ ಜೇನು ಕೃಷಿಕ ಬೆನಕ ನಾಯ್ಕ ಬೆಳ್ಳುಮನೆ ಕ್ಯಾದಗಿ ಜೇನು ಕೃಷಿ ಕುರಿತು ಮಾಹಿತಿ ನೀಡಿದರು.

ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಹಾರ್ಸಿಮನೆ, ತೋಟಗಾರಿಕಾ ಇಲಾಖೆ ಅಧಿಕಾರಿಗಳಿದ್ದರು.

ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅರುಣ ಎಚ್.ಜಿ. ಪ್ರಾಸ್ತಾವಿಕ ಮಾತನಾಡಿದರು. ತೋಟಗಾರಿಕಾ ಅಧಿಕಾರಿ ಬಸವರಾಜ ಬಂಡಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿ ಸಹಕರಿಸಿದರು.