ಕನ್ನಡಪ್ರಭ ವಾರ್ತೆ ಮೂಡಲಗಿ
ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುಕ್ರಿಸ್ತ್ನ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಇಲ್ಲಿನ ಮರೆಪ್ಪಗೋಳ ತೋಟದಲ್ಲಿ ಶನಿವಾರ ಮೆಥೋಡಿಸ್ಟ್ ಚರ್ಚ್ ಹಮ್ಮಿಕೊಂಡ ಸ್ವಸ್ಥತೆಯ ಮಹೋತ್ಸವ ಕೂಟಗಳನ್ನು ಉದ್ಘಾಟಿಸಿ ಮಾತನಾಡಿ,
ನೆಮ್ಮದಿ, ಸಮಾಧಾನ, ಶಾಂತಿಯ ಬಗ್ಗೆ ಸಂದೇಶ ಹೇಳಿರುವ ಏಸುಕ್ರಿಸ್ತ್ನು ಎಲ್ಲರನ್ನೂ ಪ್ರೀತಿಸಬೇಕು. ನಮ್ಮ ವೈರಿಗಳೂ ಸಹ ತಪ್ಪು ಮಾಡಿದ್ದರೆ, ಅಂತಹ ತಪ್ಪುಗಳನ್ನು ಮರೆತು ಒಂದಾಗಿ ಪ್ರೀತಿಸಲು ಹೇಳಿದ್ದಾರೆ. ಕ್ಷಮಾಪಣೆ ಗುಣಗಳನ್ನು ಬೆಳೆಸಿಕೊಳ್ಳುವಂತೆಯೂ ಸಂದೇಶದಲ್ಲಿ ತಿಳಿಸಿದ್ದಾರೆ. ಕರುಣಾಮಯಿ, ದಯಾ ರಕ್ಷಕನಾಗಿರುವ ಏಸುಕ್ರಿಸ್ತ್ ಆದರ್ಶಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.ಕೂಟಗಳನ್ನು ಏರ್ಪಾಡು ಮಾಡುವುದರಿಂದ ಕಷ್ಟಗಳು ಪರಿಹಾರವಾಗುತ್ತವೆ. ರೋಗ ರುಜಿನಗಳು ವಾಸಿಯಾಗುತ್ತವೆ. ನಂಬಿಕೊಂಡು ಬರುವವರೆಗೆ ಒಳ್ಳೆಯದಾಗುತ್ತದೆ. ಯಾರ ಮುಂದೆಯೂ ಹೇಳಿಕೊಳ್ಳದ ಅನೇಕ ಕಷ್ಟಗಳು, ಸಮಸ್ಯೆಗಳು ಈ ಕೂಟಗಳಲ್ಲಿ ಮಾಡುವ ಏಸುಕ್ರಿಸ್ತ್ ಪ್ರಾರ್ಥನೆಗಳಿಂದ ದೂರವಾಗುತ್ತವೆ. ಅಂತಹ ನಂಬಿಕೆಗಳಿಂದಲೇ ಸಮಾಜ ಬಾಂಧವರು ಸೇರಿ ಇಂತಹ ಕೂಟಗಳನ್ನು ಏರ್ಪಡಿಸುತ್ತಿದ್ದಾರೆ. ನಮ್ಮ ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಅನೇಕ ಜಾತಿ, ಧರ್ಮಗಳಿದ್ದರೂ ಅವರವರ ಆಚರಣೆಗಳು ಮಾತ್ರ ಭಿನ್ನವಾಗಿವೆ. ದೇವನೊಬ್ಬ ನಾಮ ಹಲವು ಎಂಬಂತೆ ಎಲ್ಲರಲ್ಲಿಯೂ ಒಬ್ಬನೇ ದೇವರನ್ನು ಕಾಣುತ್ತಿದ್ದೇವೆ. ಪ್ರೀತಿ, ವಿಶ್ವಾಸಗಳನ್ನು ಬೆಳೆಸಿಕೊಳ್ಳುತ್ತ ಪರಸ್ಪರ ಅಣ್ಣ- ತಮ್ಮಂದಿರ ಸಂಬಂಧಗಳನ್ನು ಹೊಂದಿ ಶಾಂತಿಯ ಮಂತ್ರ ಜಪಿಸುತ್ತಿದ್ದೇವೆ. ಇದೇ ಕಾರಣಕ್ಕೆ ಭಾರತವು ವಿಶ್ವದಲ್ಲಿಯೇ ಭಿನ್ನ ರಾಷ್ಟ್ರವಾಗಿದೆ ಎಂದು ಅವರು ಹೇಳಿದರು.
ಮೂಡಲಗಿ ಪಟ್ಟಣದಲ್ಲಿ ಕ್ರೈಸ್ತ ಬಾಂಧವರು ಹಮ್ಮಿಕೊಂಡಿರುವ ಸ್ವಸ್ಥತೆಯ ಮಹೋತ್ಸವ ಕೂಟಗಳು ಯಶಸ್ವಿಯಾಗುತ್ತಿದೆ. ಅನ್ಯ ಸಮಾಜದ ಬಾಂಧವರು ಇದರಲ್ಲಿ ಭಾಗಿಯಾಗಿದ್ದಾರೆ. ಇದೇ ಸಹೋದರತ್ವ ಸಂಕೇತವಾಗಿದೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯನ್ನು ಸಮಾಜ ಬಾಂಧವರು ಸತ್ಕರಿಸಿದರು. ಈ ಸಂದರ್ಭದಲ್ಲಿ ಯುನೈಟೆಡ್ ಕಿಂಗ್ಡಮ್ನ ಖ್ಯಾತ ವೈದ್ಯ ಹಾಗೂ ಧರ್ಮ ಬೋಧಕ ಡಾ.ಜಾಬ್ ಮುಕಾಡಿ ಮಾತನಾಡಿ, ಅರಭಾವಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಕುಟುಂಬಕ್ಕೆ ಏಸುಕ್ರಿಸ್ತ್ ಒಳ್ಳೆಯದು ಮಾಡಲೆಂದು ಪ್ರಾರ್ಥಿಸಿದರು.
ಬೆಂಗಳೂರು ಎಎಲ್ಜಿ ಸಂಸ್ಥೆಯ ಅಧ್ಯಕ್ಷ ರಾಜೇಶ ಫೆಲಿಪ್ಸ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಮೆಥೋಡಿಸ್ಟ್ ಚರ್ಚ್ ಸಭಾಪಾಲಕ ರೇ. ವಿಜಯಕುಮಾರ್ ಮೂಡಲಗಿ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಆರ್.ಪಿ.ಸೋನವಾಲಕರ, ಜಯಾನಂದ ಪಾಟೀಲ, ವಿಜಯ ಸೋನವಾಲಕರ, ರವಿ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ರಮೇಶ ಸಣ್ಣಕ್ಕಿ, ಶಿವು ಚಂಡಕಿ, ಸೈದಪ್ಪ ಗದಾಡಿ, ಚನ್ನಪ್ಪ ಅಥಣಿ, ಈರಣ್ಣ ಬನ್ನೂರ, ಮಲಿಕ ಹುಣಶ್ಯಾಳ, ಈಶ್ವರ ಕಂಕಣವಾಡಿ, ಹಣಮಂತ ಗುಡ್ಲಮನಿ, ಸಿದ್ದು ಗಡ್ಡೇಕಾರ, ಮುಖ್ಯಾಧಿಕಾರಿ ತುಕಾರಾಮ ಮಾದರ, ಶಿವಬೋಧ ಗೋಕಾಕ, ಪುರಸಭೆಯ ಮಾಜಿ ಸದಸ್ಯರು, ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.