ಕನ್ನಡಪ್ರಭ ವಾರ್ತೆ ವಿಜಯಪುರ
ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಮೇ 17ರಿಂದ 7 ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ 2026 ಪಂದ್ಯಾವಳಿಗೆ ವಿದ್ಯುಕ್ತವಾಗಿ ತೆರೆಬಿತ್ತು.ಇದೇ ಮೊದಲ ಬಾರಿಗೆ ನಡೆದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟ ಗುಮ್ಮಟ ನಗರಿಯ ಜನತೆಯನ್ನು ಕಳೆದ 7 ದಿನಗಳಿಂದ ಬ್ಯಾಡ್ಮಿಂಟನ್ ಲೋಕದಲ್ಲಿ ಮಿಂದೇಳಿಸಿತು. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಅಧಿಕೃತ ಮಾನ್ಯತೆಯೊಂದಿಗೆ ಯೊನೆಕ್ಸ್ ಸನ್ರೈಸ್ ಪ್ರಾಯೋಕತ್ವದಡಿ ನಗರದ ಬಿಎಲ್ಡಿಇ ಸಂಸ್ಥೆ ಹಾಗೂ ಜಿಲ್ಲಾಡಳಿತದ ಸಹಕಾರದಲ್ಲಿ ಈ ಪಂದ್ಯ ನಡೆದಿದ್ದರಿಂದ ಯಶಸ್ವಿಯಾಗುವುದರ ಮೂಲಕ ಜಿಲ್ಲೆಯ ಇತಿಹಾಸ ಪುಟಗಳಲ್ಲಿ ದಾಖಲೆ ಬರೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಬ್ಯಾಡ್ಮಿಂಟನ್ ಆಟ ಪ್ರಸಿದ್ಧಿ ಪಡೆದು ಯುವಕರು ಪ್ರೇರಣೆ ಹೊಂದುವಂತಾಗಲಿ ಎಂದು ಹರಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಹಾಗೂ ಬಿಎಲ್ಡಿಇ ಸಂಸ್ಥೆಯ ಒಳಾಂಗಣದಲ್ಲಿ ನಡೆದ ಬ್ಯಾಡ್ಮಿಂಟನ್ ಆಟಗಳು ನಗರದ ಬ್ಯಾಡ್ಮಿಂಟನ್ ಪ್ರೇಮಿಗಳನ್ನು ಬ್ಯಾಡ್ಮಿಂಟನ್ ಆಟದತ್ತ ಪ್ರೇರೇಪಿಸಿತು. ಬ್ಯಾಡ್ಮಿಂಟನ್ ಟೂರ್ನಮೆಂಟ್ 2026 ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇಲ್ಲಿನ ಜನತೆ ನೀಡಿದ ಆತಿಥ್ಯ ನಮಗೆ ಸಂಪೂರ್ಣ ಖುಷಿ ತಂದಿದೆ ಎಂದು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಬ್ಯಾಡ್ಮಿಂಟನ್ ಆಟಗಾರರು ತಿಳಿಸಿದರು. ಮಾತ್ರವಲ್ಲ, ಈ ಟೂರ್ನಮೆಂಟ್ ಆಟಗಾರರು, ಅಧಿಕಾರಿಗಳು ಹಾಗೂ ಬ್ಯಾಡ್ಮಿಂಟನ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬಂತು ಎಂದು ಸಂತಸ ಹಂಚಿಕೊಂಡರು. ಕಳೆದ 7 ದಿನಗಳಲ್ಲಿ ಸುಮಾರು 760 ಆಟಗಾರರ ಎಂಟ್ರಿಗಳು ದಾಖಲಾಗಿದ್ದು, 750ಕ್ಕೂ ಹೆಚ್ಚು ಪಂದ್ಯಗಳು ಯಶಸ್ವಿಯಾಗಿ ನಡೆದಿವೆ.
ಟೂರ್ನಮೆಂಟ್ ಅವಧಿಯಲ್ಲಿ ಸುಮಾರು 200 ಶಟಲ್ ಬಾಕ್ಸ್ಗಳು (2400ಕ್ಕೂ ಹೆಚ್ಚು ಶಟಲ್ಗಳು) ಬಳಸಲ್ಪಟ್ಟಿದ್ದು, ಸ್ಪರ್ಧೆಯ ವ್ಯಾಪ್ತಿ ಮತ್ತು ಮಟ್ಟವನ್ನು ತೋರಿಸುತ್ತದೆ.ಬ್ಯಾಡ್ಮಿಂಟನ್ ಪಂದ್ಯಾಟದ ಫಲಿತಾಂಶ:
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಅಧಿಕೃತ ಮಾನ್ಯತೆಯೊಂದಿಗೆ ಯೊನೆಕ್ಸ್ ಸನ್ರೈಸ್ ಪ್ರಾಯೋಜಕ್ವತದಲ್ಲಿ ಐತಿಹಾಸಿಕ ಗುಮ್ಮಟ ನಗರಿಯಲ್ಲಿ ನಡೆದ ಕರ್ನಾಟಕ ಸಬ್ ಜ್ಯೂನಿಯರ್ ಪಂದ್ಯದ ಫಲಿತಾಂಶ ಇಲ್ಲಿದೆ.
ಬಾಲಕರ ಸಿಂಗಲ್ಸ್ ಯು-15 ನಲ್ಲಿ ಫೈನಲ್: ಗೌತಮ ನಾಯರ, ಬೆಂಗಳೂರು ಅರ್ಬನ್, ಯಶವರ್ಧನ.ಎಸ್.ಆರ್ (13), ಬೆಂಗಳೂರು ರೂರಲ್ ವಿರುದ್ಧ 21-12, 21-19 ಅಂತರದಿಂದ ಜಯಗಳಿಸಿದರು.ಬಾಲಕಿಯರ ಸಿಂಗಲ್ಸ್ ಯು-15 ಫೈನಲ್: ಮಹಿತಾನಾಯ್ಡು ಸುರಿಶೆಟ್ಟಿ (1), ಬೆಂಗಳೂರು ಅರ್ಬನ್, ಸ್ಮೃತಿ.ಎಸ್, ಬೆಂಗಳೂರು ಅರ್ಬನ್ ವಿರುದ್ಧ 21-10, 21-7 ಅಂತರದಿಂದ ಜಯಗಳಿಸಿದರು.
ಬಾಲಕರ ಡಬಲ್ಸ್ ಯು-15 ಫೈನಲ್: ಚೇತಸ್ ಮುಂಡರ್ಗಿ, ಬೆಂಗಳೂರು ಅರ್ಬನ್ ಮತ್ತು ವಿಶಾಲ ಆನಂದ, ಕೊಡಗು, ಗೌತಮ್ ನಾಯರ ಮತ್ತು ಸಿದ್ಧಾರ್ಥ ನಾಯರ (5), ಬೆಂಗಳೂರು ಅರ್ಬನ್ ವಿರುದ್ಧ 14-21, 21-14, 21-16 ಅಂತರದಿಂದ ಜಯಗಳಿಸಿದರು.ಬಾಲಕಿಯರ ಡಬಲ್ಸ್ ಯು-15 ಫೈನಲ್: ಹಂಸಾ ಮುರಳಿಧರ ಮತ್ತು ಮಹಿತಾನಾಯ್ಡು ಸುರಿಸೆಟ್ಟಿ, ಬೆಂಗಳೂರು ಅರ್ಬನ್, ಜೀವಿಕಾಹ್ ರಾಜೇಶಕುಮಾರ, ಬೆಂಗಳೂರು ಅರ್ಬನ್ ಮತ್ತು ಮನಿಕಾ ನವೀನ (2), ಬೆಂಗಳೂರು ರೂರಲ್ ವಿರುದ್ಧ 21-18, 21-15 ಅಂತರದಿಂದ ಜಯಗಳಿಸಿದರು.
ಮಿಶ್ರ ಡಬಲ್ಸ್ ಯು-15 ಫೈನಲ್: ಯಶವರ್ಧನ.ಎಸ್.ಆರ್ ಮತ್ತು ಆದಿತಿ ಸುಶಾಂತ (2), ಬೆಂಗಳೂರು ರೂರಲ್, ಬಿ.ಬಿ.ವಿಶಾಲ ಉತ್ತಪ್ಪ ಹಾಗೂ ಹನ್ಸಿಕಾ ರಾಕೇಶ, ಮೈಸೂರು ವಿರುದ್ಧ 21-11, 21-16 ಅಂತರದಿಂದ ಜಯಗಳಿಸಿದರು.ಬಾಲಕರ ಸಿಂಗಲ್ಸ್ ಯು-17 ಫೈನಲ್: ಪಿಯೂಷ್ ತ್ರಿಪಾಠಿ (3), ಬೆಂಗಳೂರು ಅರ್ಬನ್, ಡಿಲನ್ ತೋಕ್ಚೊಂ, ಬೆಂಗಳೂರು ಅರ್ಬನ್ ವಿರುದ್ಧ 21-19, 10-21, 21-17 ಅಂತರದಿಂದ ಜಯಗಳಿಸಿದರು.
ಬಾಲಕಿಯರ ಸಿಂಗಲ್ಸ್ ಯು-17 ಫೈನಲ್: ಆದಿತಿ ಸುಶಾಂತ, ಬೆಂಗಳೂರು ರೂರಲ್, ಕೀರ್ತಿ ಬಾಲಾಜಿ (1), ಬೆಂಗಳೂರು ಅರ್ಬನ್ ವಿರುದ್ಧ 21-18, 21-16 ಅಂತರದಿಂದ ಜಯಗಳಿಸಿದರು.ಬಾಲಕರ ಡಬಲ್ಸ್ ಯು-17 ಫೈನಲ್: ಮೆಹುಲ್ ಅರುಳ್ಮುರುಗನ, ಬೆಂಗಳೂರು ಅರ್ಬನ್ ಹಾಗೂ ಸಾತ್ವಿಕ ಪ್ರಭು (2), ದಕ್ಷಿಣ ಕನ್ನಡ, ಚಿರಾಗ ಪ್ರಕಾಶ ಮತ್ತು ನಿಕೇತನ ಹರಿ, ಬೆಂಗಳೂರು ಅರ್ಬನ್ ವಿರುದ್ಧ 15-21, 21-19, 21-18 ಅಂತರದಿಂದ ಜಯಗಳಿಸಿದರು.
ಬಾಲಕಿಯರ ಡಬಲ್ಸ್ ಯು-17 ಫೈನಲ್: ದಿಶಾ ರವಿಭಟ್ ಮತ್ತು ತನ್ವಿ ಮುನೋತ, ಬೆಂಗಳೂರು ಅರ್ಬನ್, ರಕ್ಷಾ.ಎನ್ ಮತ್ತು ಶ್ರಿಯಾ ಜೋಶಿ, ಬೆಂಗಳೂರು ಅರ್ಬನ್ ವಿರುದ್ಧ 21-11, 21-13 ಅಂತರದಿಂದ ಜಯಗಳಿಸಿದರು.ಮಿಶ್ರ ಡಬಲ್ಸ್ ಯು-17 ಫೈನಲ್: ಈಶ್ವರಸಾಯಿ ಕಟಂ ಮತ್ತು ಡೆಬೋರಾ ಜಾನ್, ಬೆಂಗಳೂರು ಅರ್ಬನ್, ಚಿರಾಗ ಪ್ರಕಾಶ ಮತ್ತು ತನ್ವಿ ಮುನೋತ್, ಬೆಂಗಳೂರು ಅರ್ಬನ್ ವಿರುದ್ಧ 21-17, 21-16 ಅಂತರದಿಂದ ಜಯಗಳಿಸಿದರು.