ಹಾನಗಲ್ಲ: ಗುಣಮಟ್ಟದ ಶಿಕ್ಷಣವೇ ಸರ್ಕಾರಿ ಶಾಲೆಗಳ ಮೂಲ ಆಶಯವಾಗಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆದು ಪ್ರತಿಭಾವಂತ ಬಡ ಮಕ್ಕಳೂ ಉತ್ತಮ ಶಿಕ್ಷಣ, ಸರ್ವಾಂಗೀಣ ಅಭಿವೃದ್ಧಿ ಪಡೆಯಲು ಇಲ್ಲಿ ಸಾಧ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಡಿ.ನಾಗೇಂದ್ರಪ್ಪ ತಿಳಿಸಿದರು.ಹಾನಗಲ್ಲ ತಾಲೂಕಿನ ಸಾಂವಸಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಗುಣಮಟ್ಟದ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲ ಇದಲ್ಲ. ಪ್ರತಿಭಾವಂತ ನುರಿತ ಶಿಕ್ಷಕರನ್ನೊಳಗೊಂಡ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ರಾಜ್ಯಕ್ಕೆ ರ‍್ಯಾಂಕ್ ಪಡೆಯುತ್ತಿದ್ದಾರೆ. ಸರ್ಕಾರಿ ಶಾಲೆಗಳೆಂದರೆ ಅವು ನಿಮ್ಮ ಶಾಲೆಗಳು. ಇಲ್ಲಿಯೇ ನಿಮ್ಮ ಮಕ್ಕಳನ್ನು ದಾಖಲಿಸಲು ಮುಂದಾಗಿ ಎಂದು ಮನವಿ ಮಾಡಿದರು.ಮುಖ್ಯೋಪಾಧ್ಯಾಯ ಎನ್.ವಿ. ಅಗಸನಹಳ್ಳಿ ಮಾತನಾಡಿ, ನಮ್ಮ ಶಾಲೆ ನಮ್ಮ ಮಕ್ಕಳ ಗುಣಮಟ್ಟದ ಶಿಕ್ಷಣ ಎಂಬ ಪ್ರೀತಿ ನಮಗೆ ಬೇಕಾಗಿದೆ. ಇಲ್ಲಿ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶಿಷ್ಯವೇತನ ಸೇರಿದಂತೆ ಉಚಿತ ಶಿಕ್ಷಣ ಸರ್ಕಾರದಿಂದ ಲಭ್ಯವಿದೆ. ನುರಿತ ಶಿಕ್ಷಕರನ್ನೂ ಒಳಗೊಂಡು ಅತ್ಯುತ್ತಮ ಮಾರ್ಗದರ್ಶನವೂ ಇಲ್ಲಿದೆ. ನಿಮ್ಮ ಶಾಲೆಯಲ್ಲಿ ನಿಮ್ಮ ಮಕ್ಕಳನ್ನು ಓದಲು ಅವಕಾಶ ಮಾಡಿಕೊಡಿ. ಸರ್ಕಾರದ ಶಾಲೆಗಳೆಂದು ಅವು ನಿಮ್ಮ ಶಾಲೆಗಳೇ. ಇಲ್ಲಿ ಎಲ್‌ಕೆಜಿಯಿಂದ ೮ನೇ ತರಗತಿವರೆಗೆ ಶಿಕ್ಷಣದ ಸೌಲಭ್ಯವಿದೆ ಎಂದು ಪಾಲಕರಿಗೆ ಮನವಿ ಮಾಡಿದರು.ಸಿಆರ್‌ಪಿ ಸಿದ್ದು ಗೌರಣ್ಣನವರ ಮುಖ್ಯ ಅತಿಥಿಯಾಗಿ ಮಾತನಾಡಿ, ಜ್ಞಾನಾರ್ಜನೆಗೆ ಮೊದಲ ಆದ್ಯತೆ ನೀಡಿರುವ ಸರ್ಕಾರಿ ಶಾಲೆಗಳು ಈಗ ಹೆಚ್ಚು ಸ್ಮಾರ್ಟ ಶಾಲೆಗಳಾಗುತ್ತಿವೆ. ಖಾಸಗಿ ಶಾಲೆಗಳಿಗಿಂತಲೂ ಹೆಚ್ಚು ಸೌಲಭ್ಯಗಳು ಇಲ್ಲಿವೆ. ನಿಮ್ಮ ಮಗುವಿನ ಭವಿಷ್ಯವನ್ನು ಉಜ್ಞಲಗೊಳಿಸುವ ಎಲ್ಲ ಗುಣ ಸ್ವಭಾವಗಳನ್ನು ಇಲ್ಲಿ ಕಲಿಸಲಾಗುತ್ತದೆ. ಸರ್ಕಾರಿ ಶಾಲೆ ನಿಮ್ಮ ಶಾಲೆ ಎಂದರು.ದಾಖಲಾತಿ ಆಂದೋಲನದ ಅಂಗವಾಗಿ ಗ್ರಾಮದ ಮನೆ ಮನೆಗಳಿಗೆ ತೆರಳಿ ದಾಖಲಾತಿ ಕರಪತ್ರ ನೀಡಿ ಜಾಗೃತಿ ಮೂಡಿಸಲಾಯಿತು. ಶಿಕ್ಷಕರಾದ ಗೀತಾ ನಾರನಗೌಡರ, ಸುಜಾತಾ ಸುಲಾಖೆ, ರತ್ನಾ ಬಳ್ಳಾರಿ, ಮುತ್ತುರಾಜ ಎನ್.ಎಂ., ಹಾಲಪ್ಪ ಗೌರಾಪುರ, ಹಾಗೂ ಗ್ರಾಮದ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.