ಮಂಗಳೂರು: ವಿದ್ಯಾರ್ಥಿಗಳು ಕಾಲೇಜು ಜೀವನದ ಖುಷಿಯನ್ನು ಅನುಭವಿಸಬೇಕು. ಹಾಗೆಂದು ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬಾರದು. ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಪರಿಪೂರ್ಣ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.

ಎಸ್‌ಡಿಎಂ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪಿ.ಜಿ.ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಮತ್ತು ರಿಸರ್ಚ್ ಹಾಗೂ ಇಂಡಿಯನ್ ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಸಹಯೋಗದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದ ಎಸ್‌ಡಿಎಂ ಪಿ.ಜಿ.ಸೆಂಟರ್ ಸಭಾಂಗಣದಲ್ಲಿ ಆಹಾರ, ನೈರ್ಮಲ್ಯ ಮತ್ತು ಯುವ ಜನತೆಯಮಾನಸಿಕ ಆರೋಗ್ಯ ವಿಷಯದ ಬಗ್ಗೆ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಯೂತ್ ರೆಡ್‌ಕ್ರಾಸ್ ನಿರ್ದೇಶಕಿ ಡಾ.ಸುಮನ ಬೋಳಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಾಗಾರಗಳು ಉಪಯುಕ್ತವಾಗಿವೆ ಎಂದರು.ಎಸ್‌ಡಿಎಂ ಪಿ.ಜಿ. ಸೆಂಟರ್‌ ನಿರ್ದೇಶಕಿ ಡಾ.ಸೀಮಾ.ಎಸ್. ಶೆಣೈ ಅಧ್ಯಕ್ಷತೆ ವಹಿಸಿದ್ದರು. ಡಿ-ಅಡಿಕ್ಷನ್ ಸಮಾಲೋಚಕಿ ಡಾ.ಕುಸುಮ್ ತಂತ್ರಿ ಡೆಸಾ ದಿಕ್ಸೂಚಿ ಭಾಷಣ ಮಾಡಿದರು. ರೆಡ್‌ಕ್ರಾಸ್ ಜಿಲ್ಲಾ ಘಟಕದ ಖಜಾಂಜಿ ಗುರುದತ್ ನಾಯಕ್, ನಿರ್ದೇಶಕ ಪಿ.ಬಿ. ಹರೀಶ್ ರೈ ಇದ್ದರು.

ಕಾರ್ಯಾಗಾರದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ ತಜ್ಞೆ ಡಾ.ಹೇಮಾ ಮಲ್ಯ ಹಾಗೂ ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ ಸಲಹೆಗಾರ್ತಿ ಸಂಜನಾ ಎ. ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಎಸ್‌ಡಿಎಂ ಕಾಲೇಜಿನ ಯೂತ್ ರೆಡ್ ಕ್ರಾಸ್ ಯೋಜನಾಧಿಕಾರಿ ಡಾ.ರಮ್ಯ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ವರ್ಷ ವಂದಿಸಿದರು. ಚಿನ್ಮಯಿ ನಿರೂಪಿಸಿದರು.