ಸಾರಾಂಶ
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 1-1 ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ಮುಂದಿನ ಪಂದ್ಯದಲ್ಲಿ ಸೋಮವಾರ ಮಣಿಪುರ ವಿರುದ್ಧ ಸೆಣಸಾಡಲಿದೆ.
ಯೂಪಿಯಾ(ಅರುಣಾಚಲ ಪ್ರದೇಶ): ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಫೈನಲ್ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸತತ 2ನೇ ಪಂದ್ಯದಲ್ಲೂ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಶನಿವಾರ ಮಿಜೋರಾಂ ವಿರುದ್ಧ ನಡೆದ ‘ಬಿ’ ಗುಂಪಿನ 2ನೇ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತು. ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಮಿಜೋರಾ, 47 ನಿಮಿಷದ ವೇಳೆಗೆ 2 ಗೋಲು ಬಾರಿಸಿ ಮುನ್ನಡೆಯಲ್ಲಿತ್ತು. ಆದರೆ ಬಳಿಕ ಪ್ರಬಲ ಪೈಪೋಟಿ ನೀಡಿದ ರಾಜ್ಯ ತಂಡದ ಪರ ಪ್ರಬಿನ್ ಟಿಗ್ಗ(67ನೇ ನಿಮಿಷ) ಹಾಗೂ ವಿಶಾಲ್(69ನೇ ನಿಮಿಷ) 2 ಗೋಲು ಬಾರಿಸಿ ಪಂದ್ಯವನ್ನು ಡ್ರಾಗೊಳಿಸಿತು. ಆರಂಭಿಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 1-1 ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ಮುಂದಿನ ಪಂದ್ಯದಲ್ಲಿ ಸೋಮವಾರ ಮಣಿಪುರ ವಿರುದ್ಧ ಸೆಣಸಾಡಲಿದೆ.ಐಎಸ್ಎಲ್: ಹೈದ್ರಾಬಾದ್ ವಿರುದ್ಧ ಬೆಂಗಳೂರಿಗೆ ಜಯ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಹೈದರಾಬಾದ್ ಎಫ್ಸಿ ವಿರುದ್ಧ ಬೆಂಗಳೂರು ಎಫ್ಸಿ 2-1 ಗೋಲುಗಳ ಗೆಲುವು ಸಾಧಿಸಿದೆ. ಇದರೊಂದಿಗೆ 17 ಪಂದ್ಯಗಳಲ್ಲಿ 4ನೇ ಜಯದೊಂದಿಗೆ ಒಟ್ಟು 18 ಅಂಕ ಸಂಪಾದಿಸಿದ ಸುನಿಲ್ ಚೆಟ್ರಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. 71ನೆ ನಿಮಿಷದಲ್ಲಿ ಗೋಲು ಬಾರಿಸಿ ಜಾವಿ ಹೆರ್ನಾಂಡೆಜ್ ಬಿಎಫ್ಸಿಗೆ ಮುನ್ನಡೆ ಒದಗಿಸಿದರೂ, 80ನೇ ನಿಮಿಷದಲ್ಲಿ ಹೈದರಾಬಾದ್ ಸಮಬಲ ಸಾಧಿಸಿತು. ಆದರೆ ಶಿವಶಕ್ತಿ ನಾರಾಯಣನ್ 87ನೇ ನಿಮಿಷದಲ್ಲಿ ಹೊಡೆದ ಗೋಲು ಬೆಂಗಳೂರಿಗೆ ಜಯ ತಂದುಕೊಟ್ಟಿತು. ಮಾ.2ರಂದು ಕಂಠೀರವ ಕ್ರೀಡಾಂಗಣದಲ್ಲಿ ಬೆಂಗ್ಳೂರು ತಂಡ ಬದ್ಧವೈರಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಾಡಲಿದೆ.