ಕೋಲ್ಕತ್ತ ಬ್ಯಾಂಕಿನಲ್ಲಿ ₹5 ಕೋಟಿ ಲೋನ್‌ ಕೊಡಿಸೋದಾಗಿ ಉದ್ಯಮಿಗೆ ₹37.50 ಲಕ್ಷ ವಂಚನೆ

KannadaprabhaNewsNetwork |  
Published : Nov 29, 2024, 01:04 AM ISTUpdated : Nov 29, 2024, 04:13 AM IST
ಹಣ ವಂಚನೆ | Kannada Prabha

ಸಾರಾಂಶ

ಕೋಲ್ಕತ್ತ ಬ್ಯಾಂಕಿನಲ್ಲಿ 5 ಕೋಟಿ ಲೋನ್‌ ಮಾಡಿಸಿಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ಬರೋಬ್ಬರಿ ₹37.50 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರು ವ್ಯಕ್ತಿಗಳ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು : ಕೋಲ್ಕತ್ತ ಬ್ಯಾಂಕಿನಲ್ಲಿ 5 ಕೋಟಿ ಲೋನ್‌ ಮಾಡಿಸಿಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ಬರೋಬ್ಬರಿ ₹37.50 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರು ವ್ಯಕ್ತಿಗಳ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಮೂಲದ ಉದ್ಯಮಿ ಪ್ರವೀಣ್‌ ಕುಮಾರ್‌ ಬಿ.ಹೂಗಾರ್‌ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಸುಕೀರ್ತಿ ಮತ್ತು ಹಿದಾಯತುಲ್ಲಾ ಖಾನ್ ಎಂಬುವವರು ವಿರುದ್ಧ ವಂಚನೆ, ನಂಬಿಕೆ ದ್ರೋಹ, ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಏನಿದು ಪ್ರಕರಣ?: ದೂರುದಾರ ಉದ್ಯಮಿ ಪ್ರವೀಣ್‌ ಕುಮಾರ್‌ ಬಿ.ಹೂಗರ್‌ ಅವರು ಶೇಷಾದ್ರಿಪುರದಲ್ಲಿ ಮಾಯಾಂಕ್‌ ಕನ್‌ಸ್ಟ್ರಕ್ಷನ್‌ ಆ್ಯಂಡ್‌ ಸಪ್ಲೈಯರ್‌ ಹೆಸರಿನ ಕಚೇರಿ ಹೊಂದಿದ್ದಾರೆ. ಇತ್ತೀಚೆಗೆ ನಾಗರಾಜ್‌ ಎಂಬ ಸ್ನೇಹಿತನ ಮುಖಾಂತರ ಸುಕೀರ್ತಿ ಮತ್ತು ಹಿದಾಯತುಲ್ಲಾ ಖಾನ್‌ ಪರಿಚಯವಾಗಿದೆ. ಈ ಇಬ್ಬರು ವರ್ಲ್ಡ್‌ ಫೋಕಸ್‌ ಈವೆಂಟ್ಸ್‌ ಆ್ಯಂಡ್‌ ಎಂಟಟೈನ್‌ಮೆಂಟ್‌ ಎಂಬ ಕಂಪನಿ ನಡೆಸುತ್ತಿದ್ದಾರೆ.

ಮೊದಲಿಗೆ ₹17.50 ಲಕ್ಷ ಪಡೆದರು:  ಪ್ರವೀಣ್ ಕುಮಾರ್‌ ವ್ಯವಹಾರ ಸಂಬಂಧ ಸಾಲ ಮಾಡಿಕೊಂಡಿರುವ ವಿಚಾರ ತಿಳಿದ ಈ ಇಬ್ಬರೂ ತಾವು ಹೇಳಿದಂತೆ ಕೇಳಿದರೆ, ನಿಮ್ಮ ಸಾಲ ತೀರಿಸಬಹುದು. ಕೋಲ್ಕತ್ತ ಬ್ಯಾಂಕಿನಲ್ಲಿ ರಾಜು ಎಂಬುವವರು ತಮಗೆ ಪರಿಚಯವಿದ್ದಾರೆ. ಅವರ ಮುಖಾಂತರ ನಿಮಗೆ ₹5 ಕೋಟಿ ಲೋನ್‌ ಕೊಡಿಸುವುದಾಗಿ ಹೇಳಿದ್ದಾರೆ. ಲೋನ್‌ ಕೊಡಿಸಲು ₹25 ಲಕ್ಷ ಖರ್ಚಾಗಲಿದೆ ಎಂದಿದ್ದಾರೆ. ಇವರ ಮಾತು ನಂಬಿದ ಪ್ರವೀಣ್‌ ಕುಮಾರ್‌, ಹಂತ ಹಂತವಾಗಿ ಆರೋಪಿಗಳ ಖಾತೆಗೆ ₹17.50 ಲಕ್ಷ ಹಣ ವರ್ಗಾಯಿಸಿದ್ದಾರೆ.

ಅಕೌಂಟ್‌ ಫ್ರೀಜ್‌ ಕಥೆ ಕಟ್ಟಿ ₹ 20 ಲಕ್ಷ ಪಡೆದರು:  ಬಳಿಕ ಸುಕೀರ್ತಿ ಮತ್ತು ಹಿದಾಯತುಲ್ಲಾ ಕೋಲ್ಕತ್ತಗೆ ಹೋಗಿ ವಾಪಾಸ್‌ ಬಂದು ಲೋನ್‌ ಮಂಜೂರಾಗುವುದು ವಿಳಂಬವಾಗಲಿದೆ ಎಂದು ಹೇಳಿದ್ದಾರೆ. ಮುಂದುವರೆದು, ತಮಗೆ ಪರಿಚಯವಿರುವ ಯುವನಿಕ ಮತ್ತು ಸನಾವರ್‌ ಬಾಷಾ ಎಂಬುವರ ಬ್ಯಾಂಕ್‌ ಖಾತೆಯಲ್ಲಿ ಕ್ರಮವಾಗಿ ₹15 ಲಕ್ಷ ಕೋಟಿ ಮತ್ತು ₹12 ಲಕ್ಷ ಕೋಟಿ ಹಣ ಫ್ರೀಜ್‌ ಆಗಿದೆ. ಈ ಫ್ರೀಜ್‌ ಆಗಿರುವ ಹಣ ಬಿಡಿಸಿದರೆ ನಿಮ್ಮ ಸಾಲ ತೀರಿಸಲು ಅನುಕೂಲವಾಗುತ್ತದೆ. ಈ ಫ್ರೀಜ್‌ ಆಗಿರುವ ಹಣ ಬಿಡಿಸಲು ₹20 ಲಕ್ಷ ಖರ್ಚಾಗಲಿದೆ ಎಂದು ಹೇಳಿದ್ದಾರೆ. ಈ ಮಾತನ್ನು ನಂಬಿದ ಪ್ರವೀಣ್‌ ಕುಮಾರ್‌, ಆರೋಪಿಗಳ ಬ್ಯಾಂಕ್‌ ಖಾತೆಗೆ 20 ಲಕ್ಷ ರು. ವರ್ಗಾಯಿಸಿದ್ದಾರೆ.

ಹಣ ವಾಪಸ್‌ ಕೇಳಿದ್ದಕ್ಕೆ ಜೀವ ಬೆದರಿಕೆ:  ಬಳಿಕ ಇಬ್ಬರು ಆರೋಪಿಗಳು ಯಾವುದೇ ಹಣ ನೀಡದೆ ಸಬೂಬು ಹೇಳಿದ್ದಾರೆ. ಬಳಿಕ ಪ್ರವೀಣ್‌ ಕುಮಾರ್‌ ಅವರು ತನ್ನಿಂದ ಪಡೆದುಕೊಂಡಿರುವ ಒಟ್ಟು 37.50 ಲಕ್ಷ ರು. ಹಣ ವಾಪಾಸ್‌ ಕೇಳಿದ್ದಾರೆ. ಆಗ ಆರೋಪಿಗಳು ನಿಮಗೆ ಯಾವುದೇ ಹಣ ಕೊಡುವುದಿಲ್ಲ. ಮತ್ತೊಮ್ಮೆ ಹಣ ಕೇಳಿದರೆ ನಿನಗೆ ಒಂದು ಗತಿ ಕಾಣಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಪ್ರವೀಣ್ ಕುಮಾರ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ