ಉದ್ಯಮಿಯೊಬ್ಬರು ಪಡೆದಿದ್ದ ₹13 ಲಕ್ಷ ಸಾಲಕ್ಕೆ ಬಡ್ಡಿ ರೂಪದಲ್ಲಿ ₹63 ಲಕ್ಷ ಪಡೆದರೂ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿ ಕೊಲೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿರುವ ಆರೋಪದಡಿ ಮೂವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಉದ್ಯಮಿಯೊಬ್ಬರು ಪಡೆದಿದ್ದ ₹13 ಲಕ್ಷ ಸಾಲಕ್ಕೆ ಬಡ್ಡಿ ರೂಪದಲ್ಲಿ ₹63 ಲಕ್ಷ ಪಡೆದರೂ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿ ಕೊಲೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿರುವ ಆರೋಪದಡಿ ಮೂವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ದೀಪಕ್, ಜಯಕುಮಾರ್ ಹಾಗೂ ಬಾಬು ಬಂಧಿತರು. ಲಕ್ಕಸಂದ್ರ ನಿವಾಸಿ ಉದ್ಯಮಿ ಎಂ.ರವಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರ ಉದ್ಯಮಿ ಎಂ.ರವಿಗೆ ಕಳೆದ 15 ವರ್ಷಗಳಿಂದ ಆರೋಪಿ ದೀಪಕ್ ಪರಿಚಯವಿದೆ. ಈ ದೀಪಕ್ ಕಡೆಯಿಂದ ಮತ್ತೊಬ್ಬ ಆರೋಪಿ ಜಯಕುಮಾರ್ ಪರಿಚಯವಾಗಿದೆ. 2020ನೇ ಸಾಲಿನಲ್ಲಿ ರವಿ ಅವರು ವ್ಯವಹಾರ ಸಂಬಂಧ ದೀಪಕ್ನಿಂದ ₹13 ಲಕ್ಷ ಸಾಲ ಪಡೆದಿದ್ದಾರೆ. ಒಂದು ತಿಂಗಳ ಅವಧಿಗೆ ₹13 ಲಕ್ಷಕ್ಕೆ ₹13 ಲಕ್ಷ ಸೇರಿ ಒಟ್ಟು ₹26 ಲಕ್ಷ ಕೊಡುವಂತೆ ಮಾತುಕತೆ ನಡೆಸಿ ಒಪ್ಪಂದ ಪತ್ರಕ್ಕೆ ಸಹಿ ಮಾಡಿದ್ದಾರೆ. ಈ ನಡುವೆ ರವಿ ಅವರ ಕಂಪನಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಸಕಾಲಕ್ಕೆ ಹಣ ಹಿಂದಿರುಗಿಸಲು ಸಾಧ್ಯವಾಗಿಲ್ಲ. ಈ ವೇಳೆ ದೀಪಕ್ ₹26 ಲಕ್ಷಕ್ಕೆ ₹10 ಲಕ್ಷ ಸೇರಿಸಿ ಒಟ್ಟು ₹36 ಲಕ್ಷ ಕೊಡುವಂತೆ ಬೆದರಿಕೆ ಹಾಕಿದ್ದಾನೆ.
ಅದರಂತೆ ರವಿ ಅವರು ಪ್ರತಿ ತಿಂಗಳು ₹3.60 ಲಕ್ಷ ಬಡ್ಡಿಯಂತೆ ಒಂದು ವರ್ಷ ದೀಪಕ್ಗೆ ಹಣ ಹಾಕಿದ್ದಾರೆ. ಬಡ್ಡಿ ಕಟ್ಟಲಾಗದೆ ರವಿ ಅವರು ಕುರುಬರಹಳ್ಳಿಯ ಮನೆಯಲ್ಲಿ ₹53 ಲಕ್ಷಕ್ಕೆ ಮಾರಾಟ ಮಾಡಿದ್ದು, ಆ ಹಣದಲ್ಲಿ ದೀಪಕ್ ₹10 ಲಕ್ಷ ಪಡೆದುಕೊಂಡಿದ್ದಾನೆ. ಬಳಿಕ ರವಿ ಅವರ ಖಾತೆಯಿಂದ ಬಲವಂತವಾಗಿ ₹8.50 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.
ಎಳೆದೊಯ್ದು ಬೆದರಿಕೆ:
ಬಳಿಕ ದೀಪಕ್, ರವಿ ಅವರನ್ನು ಜಯಕುಮಾರ್ ಬಳಿ ಕರೆದೊಯ್ದು ರವಿ ಅವರ ಕಾರಿನ ದಾಖಲೆಗಳನ್ನು ಜಯಕುಮಾರ್ಗೆ ಕೊಡಿಸಿ ₹8 ಲಕ್ಷ ಪಡೆದುಕೊಂಡಿದ್ದಾನೆ. ಈ ₹8 ಲಕ್ಷಕ್ಕೆ ಮಾಸಿಕ ₹80 ಸಾವಿರ ಬಡ್ಡಿ ಕಟ್ಟುವಂತೆ ಹೇಳಿದ್ದಾನೆ. ಬಡ್ಡಿ ಹಣ ಕೊಡುವುದು ವಿಳಂಬವಾಗಿದ್ದಕ್ಕೆ ಆರೋಪಿಗಳು ಹಾಗೂ ಅವರ ಸಹಚರರು ಉದ್ಯಮಿ ರವಿ ಅವರನ್ನು ಎಳೆದೊಯ್ದು ಕೊಲೆ ಬೆದರಿಕೆ ಹಾಕಿದ್ದಾರೆ. ₹4 ಕೋಟಿ ಕೊಡಬೇಕು ಎಂದು ನಕಲಿ ದಾಖಲೆ ಸೃಷ್ಟಿಸಿ ಸಹಿ ಪಡೆದುಕೊಂಡಿದ್ದಾರೆ. ಈ ನಡುವೆ ಉದ್ಯಮಿ ರವಿ ಅವರು ಆರು ತಿಂಗಳಿಂದ ಬಡ್ಡಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಆರೋಪಿಗಳು ರವಿಗೆ ಕರೆ ಮಾಡಿ ಕೊಲೆ ಮಾಡಿಸುವುದಾಗಿ ಬೆದರಿಸಿದ್ದಾರೆ. ನಮಗೆ ಹಣ ಬೇಡ, ನಿನ್ನ ತಲೆಬೇಕು ಎಂದು ಧಮಕಿ ಹಾಕಿದ್ದಾರೆ.
ರೌಡಿಗಳಿಂದ ಕೊಲೆ ಮಾಡಿಸುವ ಬೆದರಿಕೆ:
ರೌಡಿ ಸೈಲೆಂಟ್ ಸುನೀಲ ನಮಗೆ ಪರಿಚಯವಿದ್ದು, ನಿನ್ನನ್ನು ಕೊಲೆ ಮಾಡಿಸುತ್ತೇವೆ ಎಂದು ಆರೋಪಿಗಳು ಸೈಲೆಂಟ್ ಸುನೀಲನ ಜತೆಗೆ ತೆಗೆಸಿರುವ ಫೋಟೋಗಳನ್ನು ರವಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾರೆ. ಅಂತೆಯೇ ರೌಡಿಗಳಾದ ಪ್ರಕಾಶನಗರದ ವಿಜಿ, ಪರುಷೋತ್ತಮ್ ಜತೆಗಿರುವ ಫೋಟೋಗಳನ್ನು ಕಳುಹಿಸಿದ್ದಾರೆ. ಬಳಿಕ ತಮ್ಮ ಸಹಚರರನ್ನು ರವಿ ಅವರ ಮನೆ ಬಳಿ ಕಳುಹಿಸಿ ಹುಡುಕಾಡಿಸಿದ್ದಾರೆ.
ಅಸಲು ತೀರಿದ್ದರೂ
ಮತ್ತಷ್ಟು ಹಣಕ್ಕೆ ಬೇಡಿಕೆ
ದೀಪಕ್ನಿಂದ ಪಡೆದಿದ್ದ ₹13 ಲಕ್ಷಕ್ಕೆ ಪ್ರತಿಯಾಗಿ ಒಟ್ಟು ₹63 ಲಕ್ಷ ನೀಡಿದ್ದೇನೆ. ಜಯಕುಮಾರ್ನಿಂದ ಪಡೆದಿದ್ದ ₹8 ಲಕ್ಷಕ್ಕೆ ಪ್ರತಿಯಾಗಿ ಒಟ್ಟು ₹6.40 ಲಕ್ಷ ನೀಡಿದ್ದೇನೆ. ಅವರು ಕೊಟ್ಟ ಹಣಕ್ಕೆ ದುಬಾರಿ ಬಡ್ಡಿ ಸಮೇತ ಹಣ ವಾಪಾಸ್ ನೀಡಿದ್ದರೂ ಸಹ ಆರೋಪಿಗಳು ಇನ್ನೂ ಅಸಲು ತೀರಿಲ್ಲ ಎಂದು ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ. ಪದೇ ಪದೇ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇವರ ಹಿಂಸೆಯಿಂದ ನಾಲ್ಕು ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ. ಒಂದು ವರ್ಷದ ಮಗಳ ಮುಖ ನೋಡಿ ಆತ್ಮಹತ್ಯೆ ನಿರ್ಧಾರ ಕೈಬಿಟ್ಟಿದ್ದೇನೆ. ಹೀಗಾಗಿ ಈ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉದ್ಯಮಿ ರವಿ ದೂರಿನಲ್ಲಿ ಮನವಿ ಮಾಡಿದ್ದಾರೆ.