ತೀವ್ರ ಹೊಟ್ಟೆನೋವು ತಾಳಲಾರದೆ ಗೃಹಿಣಿ ಆತ್ಮಹತ್ಯೆ..!

KannadaprabhaNewsNetwork | Updated : May 25 2024, 06:04 AM IST

ಹೆಗ್ಗಡಹಳ್ಳಿ ಗ್ರಾಮದ ಅಶ್ವಿನಿಗೆ ಒಂದು ವರ್ಷದಿಂದ ಹೊಟ್ಟೆನೋವು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಹಲವೆಡೆ ಚಿಕಿತ್ಸೆ ಪಡೆದರು ಗುಣಮುಖವಾಗಿರಲಿಲ್ಲ. ಇದರಿಂದ ಖಿನ್ನತೆಗೊಳಗಾಗಿದ್ದಳು. ಹೊಟ್ಟೆನೋವು ಬಾಧೆಗೆ ಬೇಸತ್ತು ಗುರುವಾರ ತಮ್ಮ ಮನೆಯಲ್ಲಿ ವೇಲ್‌ನಿಂದ ಬಿಗಿದುಕೊಂಡು ಸಾವಿಗೆ ಯತ್ನಿಸಿದ್ದಾಳೆ.  

 ಕಿಕ್ಕೇರಿ ;  ಹೊಟ್ಟೆನೋವು ತಾಳಲಾರದೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಹೆಗ್ಗಡಹಳ್ಳಿಯಲ್ಲಿ ಗುರುವಾರ ರಾತ್ರಿ ಜರುಗಿದೆ.

ಗ್ರಾಮದ ಪ್ರಸನ್ನರ ಪತ್ನಿ ಅಶ್ವಿನಿ (25) ಮೃತ ಮಹಿಳೆ. ಮೃತಳಿಗೆ ಪತಿ, ಪುತ್ರ ಇದ್ದಾರೆ. ಒಂದು ವರ್ಷದಿಂದ ಈಕೆಗೆ ಹೊಟ್ಟೆನೋವು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಹಲವೆಡೆ ಚಿಕಿತ್ಸೆ ಪಡೆದರು ಗುಣಮುಖವಾಗಿರಲಿಲ್ಲ. ಇದರಿಂದ ಖಿನ್ನತೆಗೊಳಗಾಗಿದ್ದಳು. ಹೊಟ್ಟೆನೋವು ಬಾಧೆಗೆ ಬೇಸತ್ತು ಗುರುವಾರ ತಮ್ಮ ಮನೆಯಲ್ಲಿ ವೇಲ್‌ನಿಂದ ಬಿಗಿದುಕೊಂಡು ಸಾವಿಗೆ ಯತ್ನಿಸಿದ್ದಾಳೆ.

ಈ ವೇಳೆ ಈಕೆ ಪತಿ ನೋಡಿ ಅಸ್ವಸ್ಥೆಯಾಗಿದ್ದ ಅಶ್ವಿನಿ ಅವರನ್ನು ಕುಣಿಕೆಯಿಂದ ಬಿಡಿಸಿ ತುರ್ತು ಚಿಕಿತ್ಸೆಗೆ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಮೃತಳ ತಾಯಿ ಬೊಮ್ಮೇಗೌಡನಕೊಪ್ಪಲು ಗ್ರಾಮದ ಗೌರಮ್ಮ ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತರದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಬೆದರಿಕೆಗೆ ಮನನೊಂದು ರೈತ ನೇಣಿಗೆ ಶರಣು

ಕಿಕ್ಕೇರಿ:ಜಮೀನು ವಿವಾದದಿಂದ ಬೆದರಿಕೆಗೆ ಮನನೊಂದು ರೈತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೋಬಳಿಯ ಕೋಡಿಮಾರನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಪುಟ್ಟೇಗೌಡರ ಮಗ ಕಾಳೇಗೌಡ (65) ಆತ್ಮಹತ್ಯೆ ಮಾಡಿಕೊಂಡರು.ಇವರ ದಾಯಾದಿ ಕುಟುಂಬದಲ್ಲಿ ಜಮೀನು ವಿಚಾರದಲ್ಲಿ ವಾರದ ಹಿಂದೆ ಗಲಾಟೆ ನಡೆದಿತ್ತು. ವಿವಾದ ಪ್ರಕರಣ ಕಿಕ್ಕೇರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಗುರುವಾರ ಸಂಜೆ ಮೃತ ಕಾಳೇಗೌಡ ತನ್ನ ಜಮೀನಿನ ಬಳಿ ನೀರು ತರಲು ಹೋಗಿದ್ದನು.

ಈ ವೇಳೆ ಈತನ ಸಂಬಂಧಿ ಜಗದೀಶ್, ರಂಗೇಗೌಡ, ಶಿವಮ್ಮ, ಪೂರ್ಣಿಮಾ, ಪ್ರೀತಂ ಅವರು ಮಚ್ಚು, ದೊಣ್ಣೆ, ಕಲ್ಲಿನಿಂದ ಹಲ್ಲೆ ಮಾಡಿ ಬೆದರಿಸಿದ್ದಾರೆ. ಇಷ್ಟೆಲ್ಲ ಗಲಾಟೆಯಾದರೂ ನಿನಗೆ ಭಯವಿಲ್ಲವೇ ನೀನು ಆತ್ಮಹತ್ಯೆ ಮಾಡಿಕೊಂಡು ಸಾಯಿ ಎಂದು ಪ್ರಚೋದಿಸಿದ್ದಾರೆ.ಪುಟ್ಟೇಗೌಡ ರಾತ್ರಿ ಚಿಂತೆ ಮಾಡಿ ಖಿನ್ನತೆಗೊಳಗಾಗಿ ಮನನೊಂದು ತಮ್ಮ ಮನೆ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಮೃತ ವ್ಯಕ್ತಿ ಪುತ್ರಿ ಕೆ.ಕೆ.ರೂಪಾ ಕಿಕ್ಕೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಜಗದೀಶ್, ಪೂರ್ಣಿಮಾ ಅವರನ್ನು ಇನ್ಸ್ ಪೆಕ್ಟರ್ ರೇವತಿ ಹಾಗೂ ಸಿಬ್ಬಂದಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.