ಕುಡಿಬೇಡಿ ಎಂದು ಬುದ್ಧಿ ಹೇಳಿದ ಸಾಮಾಜಿಕ ಕಾರ್ಯಕರ್ತ ಹತ್ಯೆ; ಇಬ್ಬರ ಬಂಧನ

KannadaprabhaNewsNetwork |  
Published : Apr 11, 2024, 01:45 AM ISTUpdated : Apr 11, 2024, 04:43 AM IST
Avoid soda and drink these healthy drinks

ಸಾರಾಂಶ

ಮದ್ಯ ಸೇವಿಸದಂತೆ ಬುದ್ಧಿಮಾತು ಹೇಳಿದ್ದಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಮೃತನ ಪರಿಚಯಸ್ಥ ಯುವಕರು ಚಾಕುವಿನಿಂದ ಇರಿದು ಕೊಂದಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಮದ್ಯ ಸೇವಿಸದಂತೆ ಬುದ್ಧಿಮಾತು ಹೇಳಿದ್ದಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಮೃತನ ಪರಿಚಯಸ್ಥ ಯುವಕರು ಚಾಕುವಿನಿಂದ ಇರಿದು ಕೊಂದಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೈಲನಾಪ್ಪನಹಳ್ಳಿ ನಿವಾಸಿ ವೆಂಕಟೇಶ (45) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ಮೃತನ ಪರಿಚಯಸ್ಥರಾದ ಪವನ್‌ ಕುಮಾರ್ ಹಾಗೂ ನಂದ ಗೋಪಾಲ ಅಲಿಯಾಸ್ ನಂದನನ್ನು ಪೊಲೀಸರು ಬಂಧಿಸಿದ್ದಾರೆ. ರಾಮಚಂದ್ರಪುರದ ಆಟದ ಮೈದಾನ ಸಮೀಪ ಯುಗಾದಿ ಹಬ್ಬದ ದಿನ ಮಂಗಳವಾರ ರಾತ್ರಿ 11 ಗಂಟೆಯಲ್ಲಿ ಈ ಕೃತ್ಯ ನಡೆದಿದೆ.

ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಮೃತ ವೆಂಕಟೇಶ್ ಅವರು, ಈ ಮೊದಲು ರಾಮಚಂದ್ರಪುರದಲ್ಲೇ ವಾಸವಾಗಿದ್ದರು. ಕೆಲ ತಿಂಗಳ ಹಿಂದಷ್ಟೇ ಮೈಲನಾಪ್ಪನಹಳ್ಳಿಗೆ ಅವರು ವಾಸ್ತವ್ಯ ಬದಲಾಯಿಸಿದ್ದರು. ಯುಗಾದಿ ಹಬ್ಬದ ದಿನ ತಮ್ಮ ಸೋದರರ ಕರೆ ಮೇರೆಗೆ ರಾಮಚಂದ್ರಪುರಕ್ಕೆ ಬಂದಿದ್ದ ವೆಂಕಟೇಶ್‌, ಸಂಬಂಧಿಕರ ಜತೆ ಮಂಗಳವಾರ ರಾತ್ರಿ ಮದ್ಯ ಸೇವಿಸಿದ್ದರು. ಆನಂತರ ಅಲ್ಲೇ ಆಟದ ಮೈದಾನ ಬಳಿ ರಾತ್ರಿ 11 ಗಂಟೆಗೆ ಅಣ್ಣನ ಮಗನ ಜತೆ ವಾಯು ವಿಹಾರಕ್ಕೆ ಅವರು ತೆರಳಿದ್ದರು.

ಅದೇ ವೇಳೆ ಆಟದ ಮೈದಾನ ಬಳಿ ಪವನ್ ಹಾಗೂ ನಂದ ಮದ್ಯ ಸೇವಿಸುತ್ತ ಕುಳಿತಿದ್ದರು. ಇವರನ್ನು ನೋಡಿದ ವೆಂಕಟೇಶ್‌, ‘ಏನ್ರೋ ನನ್ನ ಮುಂದೆ ಹುಟ್ಟಿದವರು. ಈಗಲೇ ಕುಡಿಯೋದು ಕಲಿತಿದ್ದೀರಾ’ ಎಂದು ರೇಗಿದ್ದಾರೆ. ಈ ಮಾತಿಗೆ ಆಕ್ಷೇಪಿಸಿದ ಆರೋಪಿಗಳು, ‘ನಮ್ಮಿಷ್ಟ, ನೀನ್ಯಾರು ಕೇಳೋದಕ್ಕೆ’ ಎಂದಿದ್ದಾರೆ. ಆಗ ಕೆರಳಿದ ವೆಂಕಟೇಶ್, ನಂದನಿಗೆ ಹಿಡಿದು ಬಾರಿಸಿದ್ದಾರೆ. ಆಗ ತಳ್ಳಾಟ ನೂಕಾಟ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಈ ಹಂತದಲ್ಲಿ ಕೆರಳಿದ ಪವನ್‌, ‘ನಮಗೆ ಹೊಡೀತಿಯಾ’ ಎಂದು ಹೇಳಿ ಅಲ್ಲೇ ಸಮೀಪದಲ್ಲೇ ಇದ್ದ ತನ್ನ ಮನೆಗೆ ತೆರಳಿ ಚಾಕು ತಂದು ವೆಂಕಟೇಶ್‌ಗೆ ಇರಿದಿದ್ದಾನೆ. ತಕ್ಷಣವೇ ಆತನನ್ನು ಮೃತನ ಸಂಬಂಧಿಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೆ ವೆಂಕಟೇಶ್ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಮೃತರ ಸೋದರ ಪುತ್ರ ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನುಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರಾಜ್ಯದಲ್ಲಿ 10 ವರ್ಷದಲ್ಲಿ 2000 ಗರಡಿಮನೆ ಕಣ್ಮರೆ!
ಅಪ್ರಾಪ್ತ ಮಕ್ಕಳಿಗೆ ವಾಹನ ಕೊಟ್ಟರೆ ಕೇಸ್‌ ದಾಖಲು: ಪೋಷಕರಿಗೆ ಎಚ್ಚರಿಕೆ