ಕನ್ನಡಪ್ರಭ ವಾರ್ತೆ ಹಲಗೂರು
ಮುತ್ತತ್ತಿ ಕಾವೇರಿ ನದಿಯಲ್ಲಿ ಇತ್ತೀಚೆಗೆ ಐವರು ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಪರಿಶೀಲಿಸಿದ ನಂತರ ಮುಂದಿನ ದಿನಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾವೇರಿ ನದಿ ದಡದ ಸಮೀಪ ಜಿಲ್ಲಾಡಳಿತ ಮದ್ಯಪಾನ ನಿಷೇಧ ಹಾಗೂ ಕಾವೇರಿ ನದಿಯಲ್ಲಿ ಈಜುವುದು ನಿಷೇಧಿಸಿತ್ತು. ಭಾನುವಾರ ಜಿಲ್ಲಾ ಎಸ್ಪಿ ಶೋಭರಾಣಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಯಶ್ವಂತ್ ಅವರ ಸೂಚನೆ ಮೇರೆಗೆ ಹಲಗೂರು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಹಾಗೂ ಮೂವರು ಸಬ್ ಇನ್ಸ್ ಪೆಕ್ಟರ್ ಗಳಾದ ಹಲಗೂರು ಲೋಕೇಶ್, ಕಿರಗವಾಲು ರವಿಕುಮಾರ್, ಬೆಳಕವಾಡಿ ಪ್ರಕಾಶ್ ಹಾಗೂ 25 ಪೊಲೀಸ್ ಸಿಬ್ಬಂದಿಗಳು ಮುತ್ತತ್ತಿಗೆ ಭೇಟಿ ನೀಡಿ ಕಾವೇರಿ ನದಿ ದಡದಲ್ಲಿ ಮದ್ಯಪಾನ ಮಾಡುತ್ತಿದ್ದ ಗುಂಪುಗಳ ಮೇಲೆ ದಾಳಿ ಮಾಡಿ ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಮುತ್ತತ್ತಿ ಕಾವೇರಿ ನದಿ ಪ್ರದೇಶ ಹಾಗೂ ನಿಷೇಧಿತ ಜಾಗಗಳಲ್ಲಿ ಮದ್ಯಪಾನ ಮಾಡುವುದು, ಜೂಜಾಡಾವುದು, ಅನೈತಿಕ ಚಟುವಟಿಕೆಗಳಲ್ಲಿ ತೊಡುಗುವುದು ನಿಷೇಧಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ಮದ್ಯಪಾನ ಮಾಡುವುದು ಅಪರಾಧ. ಅದನ್ನು ತಡೆಗಟ್ಟಲು, ಕಾವೇರಿ ನದಿಯಲ್ಲಿ ಸಾವು ನೋವುಗಳನ್ನು ತಪ್ಪಿಸಲು ಮುಂಜಾಗ್ರತೆ ಕ್ರಮವಾಗಿ ಪೊಲೀಸರು ಪ್ರತಿ ರಜಾ ದಿನಗಳು ಹಾಗೂ ಪ್ರತಿ ಭಾನುವಾರ ನಿರಂತರವಾಗಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ತಿಳಿಸಿದ್ದಾರೆ.