ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳವಳ್ಳಿ ತಾಲೂಕು ತಳಗವಾದಿ ಗ್ರಾಮದ ಟಿ.ಪಿ.ರೋಹಿತ್ ಅಲಿಯಾಸ್ ಗೆದ್ವಾ (೨೦), ಟಿ.ಎನ್.ನಂಜೇಗೌಡ ಅಲಿಯಾಸ್ ಕಾಶಿ (೧೯), ಟಿ.ಎಚ್.ಗುರುಪ್ರಸಾದ್ ಅಲಿಯಾಸ್ ಗುರು (೩೬) ಹಾಗೂ ಎಸ್.ಮಾದೇಶ ಅಲಿಯಾಸ್ ಮಾದ (೨೦) ಎಂಬುವರೇ ಬಂಧಿತ ಆರೋಪಿಗಳು ಎಂದು ತಿಳಿಸಿದರು.
ಮಳವಳ್ಳಿ ತಾಲೂಕು ಅಣಸಾಲೆ ಗ್ರಾಮದ ಪುಟ್ಟಮ್ಮ ಅವರು ತಮ್ಮ ಮನೆಯ ಇ-ಸ್ವತ್ತು ಮಾಡಿಸುವ ಸಲುವಾಗಿ ಕಳೆದ ಮಾ.೩೦ರಂದು ಚಿಕ್ಕಮುಲಗೂಡು ಗ್ರಾಮ ಪಂಚಾಯ್ತಿಗೆ ಹೋಗಿ ತಮ್ಮ ಊರಿಗೆ ವಾಪಸ್ಸು ತೆರಳುತ್ತಿದ್ದಾಗ ಚಿಕ್ಕಮುಲಗೂಡು- ರಾಮನಾಥ ಮೋಳೆ ರಸ್ತೆಯಲ್ಲಿ ಮಧ್ಯಾಹ್ನ ೧೨.೩೦ ಗಂಟೆ ಸಮಯದಲ್ಲಿ ಅಪರಿಚಿತರಿಬ್ಬರು ಬೈಕ್ನಲ್ಲಿ ಬಂದು ಪುಟ್ಟಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ತಾಳಿ ಮತ್ತು ಎರಡು ಗುಂಡುಗಳು ಸೇರಿ ಸುಮಾರು ೨೭ ಗ್ರಾಂ ತೂಕದ ಚಿನ್ನದ ಚೈನನ್ನು ಕಿತ್ತು ಪರಾರಿಯಾಗಿದ್ದರು ಎಂದರು.ಚೈನು ಕಳೆದುಕೊಂಡ ಪುಟ್ಟಮ್ಮ ಅವರು ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರೋಹಿತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಸತ್ಯಾಂಶ ಬೆಳಕಿಗೆ ಬಂತು ಎಂದರು.
ಆರೋಪಿ ಗುರುಪ್ರಸಾದ್ ಮದುವೆಯಾಗಿದ್ದ. ತನ್ನ ಪತ್ನಿಗೆ ತಾನು ಸಿರಿವಂತ ಎಂದು ತೋರಿಸಿಕೊಳ್ಳುವ ಸಲುವಾಗಿ ಚಿನ್ನದ ಸರ ಕಳವು ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದನು. ಕಳೆದ ೨೦೨೪ರಲ್ಲಿ ಪತ್ನಿ ಈತನೊಂದಿಗೆ ಜಗಳ ಮಾಡಿಕೊಂಡು ತವರು ಮನೆ ಸೇರಿಸಿಕೊಂಡಿದ್ದಳು. ಅಂದಿನಿಂದ ಚೈನ್ ಕಳವು ಮಾಡುವುದನ್ನು ಗುರುಪ್ರಸಾದ್ ನಿಲ್ಲಿಸಿದ್ದನು. ಈ ಮಧ್ಯೆ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಆತ್ಮಹತ್ಯೆಗೆ ಗುರುಪ್ರಸಾದ್ ಕಾರಣ ಎಂದು ಆತನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದರು.
ಆರೋಪಿಗಳು ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨೦೨೨ರಲ್ಲಿ ೨ ಪ್ರಕರಣ, ೨೩ರಲ್ಲಿ ೮ ಪ್ರಕರಣ, ೨೪ರಲ್ಲಿ ೨, ೨೬ರಲ್ಲಿ ೪ ಪ್ರಕರಣ ಸೇರಿ ೧೬ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ರೋಹಿತ್ ಮತ್ತು ನಂಜೇಗೌಡ ತಂಡ ೪, ಗುರುಪ್ರಸಾದ್-ಮಾದೇಶ ತಂಡ ೮ ಹಾಗೂ ರೋಹಿತ್ ಮತ್ತು ಮಾದೇಶ ತಂಡ ೪ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ಅಪರ ಪೊಲೀಸ್ ಅಧೀಕ್ಷಕ ಎಸ್.ಇ. ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ಯಶ್ವಂತ್ಕುಮಾರ್ ಇತರರು ಗೋಷ್ಠಿಯಲ್ಲಿದ್ದರು.