ಕಳೆದ ಮೇ 15ರಂದು ಕೋಲ್ಕತಾದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನ್ವರ್ ಹತ್ಯೆಗೆ ಹನಿಟ್ರ್ಯಾಪ್ ತಂತ್ರ ಬಳಸಲಾಗಿತ್ತು ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.
ಕೋಲ್ಕತಾ: ಕಳೆದ ಮೇ 15ರಂದು ಕೋಲ್ಕತಾದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನ್ವರ್ ಹತ್ಯೆಗೆ ಹನಿಟ್ರ್ಯಾಪ್ ತಂತ್ರ ಬಳಸಲಾಗಿತ್ತು ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.
ಕೊಲೆಯ ರೂವಾರಿ ಆದ ಬಾಂಗ್ಲಾ ಉದ್ಯಮಿ ಅಖ್ತರುಜ್ಜಮಾನ್ ಶಹೀನ್ ಎಂಬಾತ ಸ್ವತಃ ತನ್ನ ಪ್ರಿಯತಮೆಯನ್ನೇ ಬಳಸಿ ಹನಿಟ್ರ್ಯಾಪ್ ಮಾಡಿದ್ದ ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಹನಿಟ್ರ್ಯಾಪ್ ಮಾಡಿದ್ದ ಶಿಲಾಂತಿ ರಹಮಾನ್ ಎಂಬಾಕೆಯನ್ನು ಬಾಂಗ್ಲಾ ಪೊಲೀಸರು ಢಾಕಾದಲ್ಲಿ ಬಂಧಿಸಿದ್ದಾರೆ.
ಹತ್ಯೆ ಏಕೆ?:
ಹಾಲಿ ಅಮೆರಿಕ ನಿವಾಸಿಯಾಗಿರುವ ಬಾಂಗ್ಲಾದೇಶ ಮೂಲದ ಆರೋಪಿ ಅಖ್ತರುಜ್ಜಮಾನ್ ಶಹೀನ್ ಮತ್ತು ಸಂಸದ ಅನ್ವರ್ ನಡುವೆ ಹಣಕಾಸಿನ ವ್ಯವಹಾರದ ಬಗ್ಗೆ ಮನಸ್ತಾಪ ಉಂಟಾಗಿತ್ತು. ಇದರಿಂದ ಕೋಪಗೊಂಡಿದ್ದ ಶಹೀನ್, ಅನ್ವರ್ ಹತ್ಯೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ತನ್ನ ಪ್ರಿಯತಮೆ ಶಿಲಾಂತಿ ರೆಹಮಾನ್ ಮೂಲಕ ಅನ್ವರ್ರನ್ನು ಕೋಲ್ಕತಾದಲ್ಲಿನ ತನ್ನ ಮನೆಗೆ ಕರೆಸಿಕೊಂಡಿದ್ದ.
ಹೀಗೆ ಬಂದ ಅನ್ವರ್ರನ್ನು ಸುಪಾರಿ ಹಂತಕರ ಮೂಲಕ ಹತ್ಯೆ ಮಾಡಿಸಲಾಗಿದೆ. ಘಟನೆ ದಿನ ಶಿಲಾಂತಿ ಮತ್ತು ಶಹೀನ್ ಇಬ್ಬರೂ ಕೊಲ್ಕತಾದಲ್ಲೇ ಇದ್ದು, ಹತ್ಯೆ ಬಳಿಕ ಢಾಕಾಕ್ಕೆ ತೆರಳಿದ್ದರು ಎಂದು ಬಾಂಗ್ಲಾದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.