ಬೆಂಗಳೂರು : ಪ್ರೇಯಸಿಯ ಕಣ್ಣು ಆಪರೇಷನ್ ಮಾಡಿಸಲು ಸುಲಭವಾಗಿ ಹಣ ಹೊಂದಿಸಲು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುರುಬರಹಳ್ಳಿಯ ಸಚಿನ್(28) ಬಂಧಿತ. ಆರೋಪಿಯಿಂದ ₹6.18 ಲಕ್ಷ ಮೌಲ್ಯದ 1 ಆಟೋರಿಕ್ಷಾ ಹಾಗೂ 9 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಮಹಾಲಕ್ಷ್ಮಿ ಲೇಔಟ್ನ ಅಕ್ಕಮಹಾದೇವಿ ಪಾರ್ಕ್ ಬಳಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೇಯಸಿ ಕಣ್ಣು ಆಪರೇಶಷನ್ಗಾಗಿ ಕಳ್ಳತನ:
ಉಡುಪಿ ಜಿಲ್ಲೆ ಕುಂದಾಪುರದ ಸಚಿನ್ ನಗರದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕುರುಬರಹಳ್ಳಿಯಲ್ಲಿ ಬಾಡಿಗೆ ರೂಮ್ನಲ್ಲಿ ನೆಲೆಸಿದ್ದ. ಕೆಲ ವರ್ಷಗಳಿಂದ ಕುಂದಾಪುರದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆ ಸಹ ನಗರದಲ್ಲಿ ಉಳಿದುಕೊಂಡಿದ್ದಳು. ಆಕೆಯ ಕಣ್ಣು ಸಮಸ್ಯೆಯಿದ್ದ ಹಿನ್ನೆಲೆಯಲ್ಲಿ ಆಪರೇಷನ್ ಮಾಡಿಸಬೇಕಿತ್ತು. ಹೀಗಾಗಿ ಆಪರೇಷನ್ಗೆ ಸುಲಭವಾಗಿ ಹಣ ಹೊಂದಿಸಲು ಸಚಿನ್ ದ್ವಿಚಕ್ರ ವಾಹನಗಳ ಕಳ್ಳತನಕ್ಕೆ ಇಳಿದಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಹ್ಯಾಂಡಲ್ ಲಾಕ್ ಮುರಿದು ಕಳವು:
ಹಗಲು ಮತ್ತು ರಾತ್ರಿ ವೇಳೆ ಮನೆ, ಪಾರ್ಕ್ಗಳ ಬಳಿ ನಿಲುಗಡೆ ಮಾಡುವ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿಕೊಂಡು ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ. ಬಳಿಕ ಆ ದ್ವಿಚಕ್ರ ವಾಹನಗಳನ್ನು ಪರಿಚಿತರ ಮೂಲಕ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದ.
ಮಹಾಲಕ್ಷ್ಮಿ ಲೇಔಟ್ನ ಅಕ್ಕಮಹಾದೇವಿ ಪಾರ್ಕ್ ಬಳಿ ಹಾಗಡಗಲೇ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿ ಸಚಿನ್ ಸುಳಿವು ಸಿಕ್ಕಿತು.
ಇದರ ಆಧಾರದ ಮೇಲೆ ಕುರುಬರಹಳ್ಳಿ ಸರ್ಕಲ್ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.ಆರೋಪಿಯ ಬಂಧನದಿಂದ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಆಟೋ ರಿಕ್ಷಾ ಹಾಗೂ ಮೂರು ದ್ವಿಚಕ್ರ ವಾಹನ ಕಳವು, ಆರ್ಎಂಸಿ ಯಾರ್ಡ್, ಯಶವಂತಪುರ, ಪೀಣ್ಯ, ಗೋವಿಂದರಾಜನಗರ, ವಿಜಯನಗರ, ಬಸವೇಶ್ವರನಗರ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.