ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ನಡೆಯುತ್ತಿದ್ದ ಕಲಹ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಕೃಷ್ಣೇಗೌಡ (62) ಹತ್ಯೆಗೀಡಾದ ವ್ಯಕ್ತಿ.
ಪಾಂಡವಪುರ:
ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ನಡೆಯುತ್ತಿದ್ದ ಕಲಹ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಕೃಷ್ಣೇಗೌಡ (62) ಹತ್ಯೆಗೀಡಾದ ವ್ಯಕ್ತಿ. ಅದೇ ಗ್ರಾಮದ ರಾಜು ಅಲಿಯಾಸ್ ಅರುಣಾ ಆತನ ತಮ್ಮ ಕಿರಣ ಹಾಗೂ ತಾಯಿ ಸುನೀತಾ ಕೊಲೆಗೈದಿರುವ ಆರೋಪಿಗಳು.
ಗ್ರಾಮದ ಹೊರವಲಯದಲ್ಲಿ ಇಬ್ಬರಿಗೂ ಸೇರಿದ್ದ ಜಮೀನಿದ್ದು, ಜಮೀನು ಒತ್ತುವರಿ ವಿಚಾರವಾಗಿ ಇಬ್ಬರ ನಡುವೆ ಹಾಗಾಗ್ಗೆ ಜಗಳ ನಡೆದು ರಾಜೀಸಂದಾನ ಮಾಡಲಾಗಿತ್ತು ಎನ್ನಲಾಗಿದೆ. ಆದರೂ, ಇದೇ ವಿಚಾರವಾಗಿ ಸೋಮವಾರ ಕೂಡ ಇಬ್ಬರ ನಡುವೆ ಕಲಹ ಏರ್ಪಟ್ಟಿದೆ. ಈ ವೇಳೆ ಆರೋಪಿಗಳು ಜಮೀನಿನಲ್ಲಿದ್ದ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ತಲೆ ಮತ್ತು ಕಿವಿ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಕೃಷ್ಣೇಗೌಡ ಸ್ಥಳದಲ್ಲೇ ಕುಸಿದು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಂಡವಪುರ ಪೊಲೀಸ್ ಇನ್ಸ್ ಪೆಕ್ಟರ್ ಶರತ್ಕುಮಾರ್ ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದೆ. ಮೃತರ ಪುತ್ರ ಶಶಿಕುಮಾರ್ ನೀಡಿದ ದೂರಿನ ಮೇರೆಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.