ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಸಾಲ ನೀಡುವಲ್ಲಿ ಬ್ಯಾಂಕ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ತಾಲೂಕಿನ ದಲಿತ ಮುಖಂಡರು ಆರೋಪಿಸಿದರು.ಪಟ್ಟಣದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಬ್ಯಾಂಕಿನ ಸಮಸ್ಯೆಗಳಿಗೆ ಸಂಬಂಧಿಸಿದ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು, ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಬಹುತೇಕ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಎಸ್ಸಿ-ಎಸ್ಟಿ ಜನರಿಗೆ ಸಾಲ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಕುಂಟುನೆಪ ಹೇಳಿ ಸಮುದಾಯದ ಸ್ವಯಂ ಉದ್ಯೋಗಾಂಕ್ಷಿಗಳನ್ನು ಸತಾಯಿಸುತ್ತಿದ್ದಾರೆ. ಸಿಬಿಲ್ ನೆಪದಲ್ಲಿ ದಲಿತರಿಗೆ ಬ್ಯಾಂಕ್ ಸಹಾಯ - ಸೌಲಭ್ಯದಿಂದ ವಂಚಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸಹಾಯಧನ ವಿತರಿಸುವಲ್ಲಿ ಬ್ಯಾಂಕ್ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಫಲಾನುಭವಿಗಳಿಗೆ ಅಗತ್ಯವಿಲ್ಲದ ದಾಖಲೆಗಳನ್ನ ತರುವಂತೆ ಪೀಡಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.ಬಹುತೇಕ ಬ್ಯಾಂಕ್ಗಳ ಸಿಬ್ಬಂದಿ ಗ್ರಾಹಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಕೆಲ ಸಿಬ್ಬಂದಿ ಹಿಂದಿ - ಇಂಗ್ಲಿಷ್ನಲ್ಲಿ ಮಾತನಾಡುವುದರಿಂದ ಸಾಕಷ್ಟು ಗೊಂದಲ ಆಗುತ್ತದೆ. ಬ್ಯಾಂಕ್ ಸಿಬ್ಬಂದಿ ಇಲ್ಲಿನ ಮಾತೃ ಭಾಷೆ ಕನ್ನಡ ಕಲಿಯಬೇಕು. ಈ ಮೂಲಕ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ದಲಿತರು ಒತ್ತಾಯಿಸಿದರು.
ತಹಸೀಲ್ದಾರ್ ಮಂಜುಳಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಾಗರ ವಾನಕಡೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಹೇಶ ಭಜಂತ್ರಿ, ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಸದಸ್ಯ ಕರೆಪ್ಪ ಗುಡೆನ್ನವರ, ವಿಭಾಗೀಯ ಸದಸ್ಯ ರಮೇಶ ಹುಂಜಿ, ಮುಖಂಡ ಉದಯ ಹುಕ್ಕೇರಿ, ಮಲ್ಲಿಕಾರ್ಜುನ ರಾಶಿಂಗೆ, ದಿಲೀಪ ಹೊಸಮನಿ, ಕೆ.ವೆಂಕಟೇಶ, ಕೆಂಪಣ್ಣಾ ಶಿರಹಟ್ಟಿ, ಅಕ್ಷಯ ವೀರಮುಖ, ಶಂಕರ ತಿಪ್ಪನಾಯಿಕ, ಶ್ರೀನಿವಾಸ ವ್ಯಾಪಾರಿ, ಲಕ್ಷ್ಮಣ ಹೂಲಿ, ಮಂಜು ಪಡದಾರ, ಮುತ್ತು ಕಾಂಬಳೆ, ಕಿರಣ ಕೋಳಿ ಮತ್ತಿತರರು ಇದ್ದರು.ಪರಸ್ಪರರಲ್ಲೇ ಕಚ್ಚಾಟ
ಸಭೆಯಲ್ಲಿ ಸಮಸ್ಯೆ ಹೇಳಿಕೊಳ್ಳಲು ದಲಿತ ಮುಖಂಡರು ಪರಸ್ಪರ ಕಚ್ಚಾಟ ನಡೆಸಿದರು. ಮುಖಂಡರು ಜಿದ್ದಿಗೆ ಬಿದ್ದವರಂತೆ ಪ್ರಶ್ನಿಸಿದ್ದರಿಂದ ಅಧಿಕಾರಿ ಮತ್ತು ಬ್ಯಾಂಕ್ ಸಿಬ್ಬಂದಿ ಮುಜುಗರಕ್ಕೊಳಗಾದರು. ಜನಾಂಗದ ಅಹವಾಲುಗಳಿಗೆ ಯಾವುದೇ ರೀತಿಯ ಪರಿಹಾರ ಸಿಗಲಿಲ್ಲ. ಕೆಲವರಂತೂ ಕೂಗಾಟ, ಚೀರಾಟ ನಡೆಸಿ ಸಭೆಯಲ್ಲಿ ಗೊಂದಲ ಸೃಷ್ಟಿಸಿದರು. ಪದೇ ಪದೆ ಗದ್ದಲ, ಗಲಾಟೆ ನಡೆಸಿದ್ದರಿಂದ ಯಾರು ಏನು ಮಾತನಾಡುತ್ತಿದ್ದಾರೆ ಎಂದು ತಿಳಿಯದಂತಾಯಿತು. ಈ ಮೂಲಕ ಸಭೆ ಹಾಗೂ ಅಧಿಕಾರಿಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿರುವುದು ಸಾಕಷ್ಟು ಟೀಕೆಗೆ ಗುರಿಯಾಯಿತು.