ಬೆಂಗಳೂರು : ನಕಲಿ ಬೀಗದ ಕೀ ಬಳಸಿ ಅಜ್ಜಿ ಮನೆಯಲ್ಲೇ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಮೊಮ್ಮಗನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಂಕದಕಟ್ಟೆ ಚಂದನ ಲೇಔಟ್ ನಿವಾಸಿ ಮಿಥುನ್(23) ಬಂಧಿತ. ಆರೋಪಿಯಿಂದ 9.44 ಲಕ್ಷ ರು. ನಗದು ಹಾಗೂ 81 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 17.44 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಮೇ 1ರಂದು ವಿಜಯಾನಂದನಗರ ನಿವಾಸಿ ಪುಟ್ಟನಂಜಮ್ಮ ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹಬ್ಬಕ್ಕೆ ಸ್ವಂತ ಊರು ಹೊಸಪಾಳ್ಯಕ್ಕೆ ತೆರಳಿದ್ದರು. ಮೇ 5ರಂದು ಮನೆಗೆ ವಾಪಸ್ ಬಂದು ಮನೆಯ ಬೀಗ ತೆರೆದು ಒಳಗೆ ಹೋದಾಗ ಕೊಠಡಿಯ ಬೀರುವಿನ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ದುಷ್ಕರ್ಮಿ ಬೀರುವಿನ ಲಾಕ್ ಒಡೆದು 10 ಲಕ್ಷ ರು. ನಗದು ಹಾಗೂ 125 ಗ್ರಾಂ ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಮ್ಮಗನೇ ಕಳ್ಳ !
ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಮೇ 9ರಂದು ಸುಮ್ಮನಹಳ್ಳಿ ಸೇತುವೆ ಬಳಿ ಮಿಥುನ್ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತ ದೂರುದಾರರಾದ ಪುಟ್ಟನಂಜಮ್ಮನ ಮಗಳ ಮಗ ಎಂಬುದು ಗೊತ್ತಾಗಿದೆ. ನಕಲಿ ಕೀ ಬಳಸಿ ತಾನೇ ಅಜ್ಜಿ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆಟೋ ಖರೀದಿಗೆ ಹಣ ನೀಡದ್ದಕ್ಕೆ ಕಳವು: ಆರೋಪಿ ಮಿಥುನ್ ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಆಟೋ ಖರೀದಿಸಲು ಹಣ ಕೊಡುವಂತೆ ಅಜ್ಜಿ ಪುಟ್ಟನಂಜಮ್ಮನನ್ನು ಹಲವು ಬಾರಿ ಕೇಳಿದ್ದಾನೆ. ಆದರೆ, ಅಜ್ಜಿ ತನ್ನ ಬಳಿ ಹಣ ಇಲ್ಲ ಎಂದಿದ್ದರು. ಇದರಿಂದ ಕೋಪಗೊಂಡಿದ್ದ ಮಿಥುನ್, ಮನೆಗೆ ಬಂದಾಗ ಬೀಗ ಕೀಗಳನ್ನು ತೆಗೆದುಕೊಂಡು ಹೋಗಿ ನಕಲಿ ಕೀ ಮಾಡಿಸಿದ್ದ. ಅಜ್ಜಿಯ ಮನೆಯವರು ಕುಟುಂಬ ಸಮೇತ ಹಬ್ಬಕ್ಕೆ ಊರಿಗೆ ಹೋಗುತ್ತಿರುವ ವಿಚಾರ ಗೊತ್ತಿತ್ತು. ಹೀಗಾಗಿ ನಕಲಿ ಕೀ ಬಳಸಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಮಾರಾಟ ಮಾಡಿದ್ದ ಚಿನ್ನ, ಸ್ನೇಹಿತನಿಗೆ ನೀಡಿದ್ದ ಹಣ ಜಪ್ತಿ : ಆರೋಪಿ ಮಿಥುನ್ ಕದ್ದ ಮಾಲುಗಳನ್ನು ಮತ್ತಿಕೆರೆ ಜುವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ. ಆಂಧ್ರಹಳ್ಳಿಯ ಸ್ನೇಹಿತನಿಗೆ ನಗದು ಹಣ ನೀಡಿದ್ದ. ಅದರಂತೆ ಚಿನ್ನಾಭರಣ, ನಗದು ಹಣ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಎರಡು ನಕಲಿ ಬೀಗ ಕೀ ಜಪ್ತಿ ಮಾಡಲಾಗಿದೆ. ಆರೋಪಿಯ ಬಂಧನಿಂದ ನಂದಿನಿ ಲೇಔಟ್ ಠಾಣೆಯ ಒಂದು ಮನೆಗಳವು ಪ್ರಕರಣ ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.