ಕನ್ನಡಪ್ರಭ ವಾರ್ತೆ ಬೆಂಗಳೂರು
ಆಸ್ಟಿನ್ ಟೌನ್ನ ನಿವಾಸಿ ಇನಾಯತ್ ಪಾಷ (55) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಅಕ್ಕನ ಮಗ ಮಸ್ರೂರ್ ಅಹಮ್ಮದ್ (22)ನನ್ನು ಪೊಲೀಸರು ಬಂಧಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಮನೆ ಬಾಡಿಗೆ ವಿಚಾರವಾಗಿ ಪಾಷ ಹಾಗೂ ಮಸ್ರೂರ್ ಮಧ್ಯೆ ನಡೆದ ಜಗಳವು ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆತ, ಪಾಷ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಹತ್ಯೆಗೈದು ಬಳಿಕ ಕೆಳಗೆ ಬಿದ್ದು ಆತ ಮೃತಪಟ್ಟಿದ್ದಾನೆ ಎಂದಿದ್ದ. ಆದರೆ ಈ ಬಗ್ಗೆ ವಿವೇಕನಗರ ಪೊಲೀಸರಿಗೆ ಸ್ಥಳೀಯ ನಿವಾಸಿಯೊಬ್ಬರು ಕರೆ ಮಾಡಿ ತಿಳಿಸಿದ್ದರು. ಕೂಡಲೇ ಇನ್ಸ್ಪೆಕ್ಟರ್ ವೀರೇಶ್ ತಂಡವು, ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹ ಅಂತ್ಯಕ್ರಿಯೆ ತಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಸಾವಿನ ಹಿಂದಿನ ಸತ್ಯ ಬಯಲಾಗಿದೆ.ಆಸ್ಟಿನ್ ಟೌನ್ನಲ್ಲಿ ಮಸ್ರೂರ್ ಕುಟುಂಬಕ್ಕೆ ಸೇರಿದ ಎರಡು ಅಂತಸ್ತಿನ ಕಟ್ಟಡವಿದ್ದು, ಇದರಲ್ಲಿ ಕೆಳಹಂತದ ಮನೆಯಲ್ಲಿ ಕಳೆದ 11 ವರ್ಷಗಳಿಂದ ಅವರ ತಾಯಿ ಸೋದರ ಪಾಷ ನೆಲೆಸಿದ್ದ. ಮೊದಲು 3 ಲಕ್ಷ ರು.ಗೆ ಭೋಗ್ಯಕ್ಕೆ ಮನೆ ಪಡೆದ ಆತ, ಭೋಗ್ಯದ ಅವಧಿ ಮುಗಿದ ಬಳಿಕವೂ ಬಾಡಿಗೆ ಸಹ ನೀಡದೆ ಅದೇ ಮನೆಯಲ್ಲಿ ವಾಸವಿದ್ದ.
ಜಿಮ್ ಬಾಡಿ:
ಜಿಮ್ ಮಾಡಿ ದೇಹ ಹುರಿಗೊಳಿಸಿದ್ದ ಮಸ್ರೂರ್, ಪಾಷನನ್ನು ಕೆಳಗೆ ಬೀಳಿಸಿಕೊಂಡು ಮನಬಂದಂತೆ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಿಂದ ಆತ ಕೊನೆಯುಸಿರೆಳೆದಿದ್ದಾನೆ. ಬಳಿಕ ಆಕಸ್ಮಿಕವಾಗಿ ಕೆಳಗೆ ಬಿದ್ದು ಪಾಷ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರಿಗೆ ಸುಳ್ಳು ಹೇಳಿ ಅಂತ್ಯಕ್ರಿಯೆಗೆ ಮಸ್ರೂರ್ ಯತ್ನಿಸಿದ್ದಾನೆ. ಆಗ ಇನ್ಸ್ಪೆಕ್ಟರ್ ವೀರೇಶ್ ಅವರಿಗೆ ಸ್ಥಳೀಯ ನಿವಾಸಿ ಕರೆ ಮಾಡಿ ಗಲಾಟೆ ವಿಚಾರ ತಿಳಿಸಿದ್ದಾರೆ.ದೂರು ನೀಡಲು ಹಿಂದೇಟು
ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ವಿಚಾರಿಸಿದಾಗ ಮೃತನ ಸಂಬಂಧಿಕರು ಜಗಳದ ವಿಚಾರವನ್ನು ನಿರಾಕರಿಸಿದ್ದಾರೆ. ಅಲ್ಲದೆ ಈ ಬಗ್ಗೆ ದೂರು ನೀಡಲು ಸಹ ಅವರು ಹಿಂದೇಟು ಹಾಕಿದ್ದಾರೆ. ಕೊನೆಗೆ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆಗ ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆಯಿಂದ ಪಾಷ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.ಈ ಮಾಹಿತಿ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಮಯ ವ್ಯರ್ಥ ಮಾಡದೆ ಆರೋಪಿಯನ್ನು ಬಂಧಿಸಿದ್ದಾರೆ. ಎಚ್ಎಸ್ಆರ್ ಲೇಔಟ್ ಸಮೀಪದ ಖಾಸಗಿ ಕಂಪನಿಯಲ್ಲಿ ಮಸ್ರೂರ್ ಉದ್ಯೋಗದಲ್ಲಿದ್ದ. ಸಿಟ್ಟಿಗೆ ಬುದ್ಧಿಕೊಟ್ಟು ಆತ ಜೈಲು ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.