ಅನೈತಿಕ ಸಂಬಂಧ ಶಂಕೆಯಿಂದ ಹತ್ಯೆ

KannadaprabhaNewsNetwork |  
Published : Feb 21, 2024, 02:05 AM ISTUpdated : Feb 21, 2024, 02:29 PM IST
Crime news

ಸಾರಾಂಶ

ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಶಂಕೆ ಹಿನ್ನಲೆಯಲ್ಲಿ ಅಕ್ಕಸಾಲಿಗನನ್ನು ಕೊಲೆ ಮಾಡಿದ್ದ ಮೃತನ ಷಡ್ಕ ಸೇರಿದಂತೆ ಇಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಶಂಕೆ ಹಿನ್ನಲೆಯಲ್ಲಿ ಅಕ್ಕಸಾಲಿಗನನ್ನು ಕೊಲೆ ಮಾಡಿದ್ದ ಮೃತನ ಷಡ್ಕ ಸೇರಿದಂತೆ ಇಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರ್ತಪೇಟೆ ನಿವಾಸಿ ಶಹಜಾವಾನ್‌ ಹಾಗೂ ಆತನ ಸಹಚರ ಬಬ್ಲು ಬಂಧಿತನಾಗಿದ್ದು, ಕಡಿಮೆ ಬೆಲೆಗೆ ಚಿನ್ನ ಕೊಡಿಸುವ ನೆಪದಲ್ಲಿ ಸೋಮವಾರ ರಾತ್ರಿ ಮೊಹಮ್ಮದ್‌ ಅತ್ತರ್ ಆಲಿ (49)ನನ್ನು ವರ್ತೂರು ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆರೋಪಿಗಳು ಹತ್ಯೆ ಮಾಡಿದ್ದರು.

ಈ ಬಗ್ಗೆ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಕೃತ್ಯ ಬೆಳಕಿಗೆ ಬಂದ ಕೆಲವೇ ತಾಸಿನೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ.

ತನ್ನ ಕುಟುಂಬದ ಜತೆ ನಗರ್ತಪೇಟೆಯಲ್ಲಿ ನೆಲೆಸಿದ್ದ ಮೊಹಮ್ಮದ್ ಅತ್ತರ್ ಆಲಿ, ಮನೆ ಸಮೀಪದಲ್ಲೇ ಚಿನ್ನಾಭರಣ ಮಳಿಗೆ ಇಟ್ಟುಕೊಂಡಿದ್ದರು.

ಇತ್ತೀಚಿಗೆ ವ್ಯವಹಾರಿಕವಾಗಿ ಆಲಿ ಜತೆ ಮುನಿಸಿಕೊಂಡಿದ್ದ ಆತನ ಷಡ್ಕ ಶಹಜಾವಾನ್‌, ತನ್ನ ಪತ್ನಿ ಜತೆ ಆಲಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕೆಗೊಂಡಿದ್ದ. ಇದೇ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪ ಬೆಳೆದಿತ್ತು.

ಈ ಹಿನ್ನಲೆಯಲ್ಲಿ ಆಲಿ ಕೊಲೆಗೆ ತನ್ನ ಸಹಚರ ಬಬ್ಲು ಜತೆ ಸೇರಿ ಶಹಜಾವಾನ್‌ ಸಂಚು ರೂಪಿಸಿದ್ದ. ಅಂತೆಯೇ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ವರ್ತೂರು ಸಮೀಪದ ನಿರ್ಜನ ಅರಣ್ಯ ಪ್ರದೇಶಕ್ಕೆ ಸೋಮವಾರ ರಾತ್ರಿ ಆಲಿಯನ್ನು ಬೈಕ್‌ನಲ್ಲಿ ಆರೋಪಿಗಳು, ಹತ್ಯೆಗೈದು ಬಳಿಕ ಮೃತದೇಹವನ್ನು ಬಿಸಾಡಿದ್ದರು. 

ತನ್ನ ಪತಿ ತಡರಾತ್ರಿಯಾದರೂ ಮನೆಗೆ ಬಾರದೆ ಹೋದಾಗ ಭೀತಿಗೊಂಡ ಮೃತನ ಪತ್ನಿ, ಹಲಸೂರು ಗೇಟ್ ಠಾಣೆಗೆ ಮಧ್ಯರಾತ್ರಿ 2 ಗಂಟೆಗೆ ತೆರಳಿ ದೂರು ನೀಡಿದ್ದಳು. 

ಅಲ್ಲದೆ ತನ್ನ ಕಣ್ಮರೆ ಹಿಂದೆ ಸಂಬಂಧಿ ಶಹಜಾವಾನ್‌ ಪಾತ್ರವಿರಬಹುದು ಎಂದು ಆಕೆ ಆರೋಪಿದ್ದಳು. ಕೂಡಲೇ ಶಹಜಾವಾನ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪರಿಚಿತ ಯುವತಿ ಮೃತದೇಹ ಪತ್ತೆ: ಶಾಂತಿನಗರದ ಡಬಲ್‌ ರೋಡ್ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಅಪರಿಚಿತ ಯುವತಿಯೊಬ್ಬಳ ಮೃತದೇಹ ಮಂಗಳವಾರ ಪತ್ತೆಯಾಗಿದೆ. 

ಮೃತಳ ವಯಸ್ಸು 25 ರಿಂದ 28 ವರ್ಷವಾಗಿದ್ದು, ಪರಿಚಿತರೇ ಆಕೆಯನ್ನು ಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎಸ್‌.ಆರ್‌.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!